ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿಯನ್ನು ಕೊಟ್ಟಂತಹ ಕರ್ನಾಟಕದ ಜನತೆಗೆ ನಾವೆಲ್ಲ ಸದಾ ಚಿರಋಣಿಯಾಗಿರುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಬಗ್ಗೆ ಇಂದು ನಡೆದ ಶಕ್ತಿಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂತಹ, ಈ ದೇಶಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಂತಹ ಪಕ್ಷದ ಮೇಲೆ ಮತ್ತೊಮ್ಮೆ ನಂಬಿಕೆ ಇಟ್ಟು, ನಮ್ಮ ನುಡಿ, ನಡೆ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಾವೇ ಬಲಿಷ್ಠರು, ಡಬಲ್ ಎಂಜಿನ್ ಸರ್ಕಾರ ಎಂದವರನ್ನು ಕಿತ್ತೆಸೆದು ಮತ್ತೆ ಆಶೀರ್ವಾದ ಮಾಡಿದ್ದೀರಿ, ಯಾವುದೇ ಕಾರಣಕ್ಕೂ ಮಾತು ತಪ್ಪದೇ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ.
ಬಸವಣ್ಣನವರು ಒಂದು ಮಾತು ಹೇಳುತ್ತಾರೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು. ಬಸವಣ್ಣನವರ ನಾಡಿನಲ್ಲಿ ಬದುಕುತ್ತಿದ್ದೇವೆ. ಕಳೆದ 2013 ರಲ್ಲಿ ಬಸವಣ್ಣನವರ ಜಯಂತಿಯಂದೆ ಹಸಿದವರಿಗೆ ಅನ್ನ ಘೋಷಣೆ ಮಾಡಿ ನುಡಿದಂತೆ ನಡೆದಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶೇ 98 ರಷ್ಟು ಪ್ರಣಾಳಿಕೆಯನ್ನು ಈಡೇರಿಸಿದ್ದೆವು ಎಂದರು.
ಹೆಣ್ಣು ಕುಟುಂಬದ ಕಣ್ಣು, ಯಾವುದಾದರೂ ಊರಿಗೆ ಹೋದರೆ ಅಲ್ಲಿ ಊರ ದೇವತೆ ಹೆಣ್ಣು. ದೇವರನ್ನು ವೆಂಕಟೇಶ್ವರ ಅಂತ ಕರೆಯೋದಿಲ್ಲ, ಲಕ್ಷ್ಮೀ ವೆಂಕಟೇಶ್ವರ ಎನ್ನುತ್ತೇವೆ, ಪಾರ್ವತಿ ಪರಮೇಶ್ವರ ಎಂದು ಕರೆಯುತ್ತೇವೆ, ಹೆಣ್ಣೇ ಈ ದೇಶದ ಶಕ್ತಿ.
ಪರಿಶುದ್ಧವಾದ ಆಡಳಿತ ನೀಡಲು ನಾವು ಸನ್ನದ್ದರಾಗಿದ್ದೇವೆ. ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿವೆ. ನಮಗೆ ಆ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಸಮಯವಿಲ್ಲ, ನಮ್ಮ ಕೈಲಿ ಆಗೋದು ಇಲ್ಲ. ಏಕೆಂದರೆ ಉತ್ತಮ ಆಡಳಿತದ ಭವಿಷ್ಯ ನಮ್ಮ ಮುಂದಿದೆ, ಉತ್ತರ ಕೊಡುತ್ತಾ ಹೋದರೆ ಕೆಲಸ ಮಾಡೋಕೆ ಸಮಯವೇ ಇರುವುದಿಲ್ಲ. ಅದಕ್ಕೆ ಒಂದು ಮಾತಿದೆ ವಿರೋಧ ಪಕ್ಷಗಳು ಇದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ.
ಅತ್ಯಂತ ಅನುಭವಿಗಳಾದ ರಾಮಲಿಂಗಾರೆಡ್ಡಿ ಅವರ ಕೈಯಲ್ಲಿ ಸಾರಿಗೆ ಇಲಾಖೆ ಇದೆ. ಇವರು ಸ್ಮಾರ್ಟ್ ಕಾರ್ಡ್ ಪರಿಚಯಿಸುತ್ತಿದ್ದಾರೆ. ಇದು ಏಕೆಂದರೆ ಎಷ್ಟು ಜನ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದರು ಎನ್ನುವ ಲೆಕ್ಕ ಸಿಕ್ಕರೆ, ಅಷ್ಟು ಪ್ರಮಾಣದ ಹಣವನ್ನ ಸರ್ಕಾರದಿಂದ ಸಾರಿಗೆ ಸಂಸ್ಥೆಗೆ ನೀಡಬಹುದು. ಏಕೆಂದರೆ ಸಂಸ್ಥೆಯೂ ನಮ್ಮದೆ ಅಲ್ಲವೇ?
ಕಾಂಗ್ರೆಸ್ ಚುನಾವಣೆ ಹೊತ್ತಿನಲ್ಲಿ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಇದು ಕೊನೆಯ ಗ್ಯಾರಂಟಿ. ಇದನ್ನು ರಾಹುಲ್ ಗಾಂಧಿ ಅವರು ಮಂಗಳೂರಿನಲ್ಲಿ ಆದರೆ ಇದೇ ಗ್ಯಾರಂಟಿಯನ್ನ ಮೊಟ್ಟ ಮೊದಲನೆಯದಾಗಿ ನಮ್ಮ ರಾಜ್ಯದ ಮಹಿಳೆಯರ ಅನುಕೂಲಕ್ಕೆ ಜಾರಿಗೆ ತರುತ್ತಿದ್ದೇವೆ.
ಆದರೆ ಇಲ್ಲಿ 2 ಸಾವಿರ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಕೂಗಾಡುತ್ತಿದ್ದಾರೆ. ಡಬಲ್ ಎಂಜಿನ್ ಅಲ್ಲ ಡಬಲ್ ನಿಲುವಿನ ಪಕ್ಷ ಎಂದರೆ ಬಿಜೆಪಿ. ನಾವು ಅವರನ್ನ ಟೀಕೆ ಮಾಡಲ್ಲ, ಅವಹೇಳನ ಮಾಡಲ್ಲ. ಏಕೆಂದರೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.