ಆಯುರ್ವೇದ ವೈದ್ಯ ಪದ್ಧತಿ ಭಾರತದ ಪುರಾತನ ಪದ್ಧತಿಯಾಗಿದ್ದು, ಇದಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ದೇಶದ ಕಾಡು, ಬೆಟ್ಟಗುಡ್ಡಗಳಲ್ಲಿ ಜೀವ ರಕ್ಷಕ ಗಿಡಮೂಲಿಕೆಗಳು ಇವೆ. ಇಂತಹ ವಿಸ್ತಾರ ವ್ಯಾಪ್ತಿಯನ್ನು ಹೊಂದಿರುವ ಆರ್ಯುವೇದ ಪದ್ಧತಿಯ ಮೂಲಕ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ಮಾಡಿಸುವುದು ಒಂದು ವಿಶಿಷ್ಟ ಪದ್ದತಿಯಾಗಿದೆ.
ಸ್ವರ್ಣಬಿಂದು ಪ್ರಾಶನ ಎಂದರೇನು?
ಸ್ವರ್ಣ ಬಿಂದು ಪ್ರಾಶನ ವನ್ನು ಸುವರ್ಣ ಪ್ರಾಶನ ಎಂದೂ ಕೂಡಾ ಕರೆಯಲಾಗುತ್ತದೆ. ಸ್ವರ್ಣವೆಂದರೆ ಚಿನ್ನ ಮತ್ತು ಪ್ರಾಶನವೆಂದರೆ ಸೇವಿಸುವಿಕೆ. ಇಲ್ಲಿ ಚಿನ್ನವನ್ನು ಇತರೆ ಔಷಧ ದ್ರವ್ಯಗಳೊಂದಿಗೆ ಸೇವನೆಯೋಗ್ಯ ರೂಪದಲ್ಲಿ ತಯಾರಿಸಿ ಒಂದು ನಿರ್ದಿಷ್ಟ ದಿವಸದಂದು ಅಥವಾ ನಿತ್ಯವೂ ಸೇವಿಸುವುದರ ಮೂಲಕ ಮಕ್ಕಳ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಉತ್ತಮ ಗೊಳಿಸುವುದಾಗಿದೆ. ಇದನ್ನು ಪ್ರತಿ 27 ರಿಂದ 28 ದಿನಗಳಿಗೊಮ್ಮೆ ಪುಷ್ಯ ನಕ್ಷತ್ರದ ದಿನದಂದು ಮಕ್ಕಳಿಗೆ ನೀಡಲಾಗುತ್ತದೆ. ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಸುವರ್ಣ ಪ್ರಾಶನ ನೀಡಲಾಗುತ್ತದೆ.
ಸ್ವರ್ಣ ಬಿಂದು ಪ್ರಾಶನವನ್ನು ಯಾರಿಗೆ ನೀಡಬಹುದು?
ಸ್ವರ್ಣಪ್ರಾಶನವನ್ನು ನವಜಾತ ಶಿಶುವಿನಿಂದ ಹಿಡಿದು 16ನೇ ವಯಸ್ಸಿನವರೆಗೆ ನೀಡಬಹುದು. ಮೊದಲೆಲ್ಲಾ ಸ್ವರ್ಣಪ್ರಾಶನ ಪಡೆಯಲು ಪ್ರತಿ ಪುಷ್ಯ ನಕ್ಷತ್ರದ ದಿನದಂದು ಆಯುರ್ವೇದ ವೈದ್ಯರ ಬಳಿಗೆ ತೆರಳಿ ಹಾಕಿಸಲಾಗುತ್ತಿತ್ತು. ಇತ್ತೀಚೆಗೆ ಸ್ವರ್ಣಪ್ರಾಶನವು ಕ್ಯಾಪ್ಸುಲ್ ರೂಪದಲ್ಲೂ ದೊರಕುತ್ತಿದ್ದು ಪೋಷಕರು ಇದನ್ನು ಮನೆಯಲ್ಲಿಯೇ ನೀಡಬಹುದು.
ಸ್ವರ್ಣಬಿಂದು ಪ್ರಾಶನದ ಪ್ರಯೋಜನಾಗಳು:
*ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
*ಮಕ್ಕಳ ವಾಕ್ ಶ್ರವಣ ದೋಷವನ್ನು ತಡೆಯುತ್ತದೆ
*ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಆರೋಗ್ಯವನ್ನು ವೃದ್ಧಿಸುತ್ತದೆ.
*ದೇಹದ ಬಲವನ್ನು ಹೆಚ್ಚಿಸುತ್ತದೆ.
*ದೃಷ್ಟಿ ದೋಷವನ್ನು ತಡೆಯುತ್ತದೆ.
*ಆಯಸ್ಸನ್ನು ಹೆಚ್ಚಿಸುತ್ತದೆ.