ಈಗಾಗಲೇ ಹಲವಾರು ವಿಚಾರಗಳಿಂದ ಸದ್ದು ಮಾಡಿದ್ದ ಆದಿ ಪುರುಷ ಸಿನಿಮಾ ಈಗ ರಾಮ ಭಕ್ತರನ್ನು ಸೆಳೆಯಲು ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಆದಿ ಪುರುಷ್ ಸಿನಿಮಾ ಪ್ರದರ್ಶನ ಕಾಣುವ ಎಲ್ಲ ಚಿತ್ರಮಂದಿರಗಳಲ್ಲೂ ಆಂಜನೇಯನಿಗಾಗಿ ಒಂದು ಸೀಟ್ ಮೀಸಲಿಡಲು ಚಿತ್ರತಂಡ ತೀರ್ಮಾನಿಸಿದೆ.
ಎಲ್ಲಿ ರಾಮನ ಆರಾಧನೆ ಮಾಡಲಾಗುತ್ತೋ ಅಲ್ಲಿ ಆಂಜನೇಯ ಬರುತ್ತಾನೆ ಎಂಬ ನಂಬಿಕೆ ಇದೆ. ಆದಿಪುರುಷ್ ಸಿನಿಮಾದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗುತ್ತದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ಈ ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಹಲವರಿಗೆ ಇದೆ. ಆ ಕಾರಣದಿಂದ ಒಂದು ಸೀಟನ್ನು ಪವನ ಪುತ್ರನಿಗಾಗಿ ಮೀಸಲಿಡಲಾಗುವುದು ಎಂದು ಆದಿಪುರುಷ್ ಚಿತ್ರತಂಡ ಹೇಳಿಕೊಂಡಿದೆ.
ರಾಮಾಯಣದ ಕಥೆಯನ್ನು ಆಧರಿಸಿ ಆದಿಪುರುಷ್ ಸಿನಿಮಾ ಜೂನ್ 16ರಂದು ಬಿಡುಗಡೆ ಆಗಲಿದ್ದು, ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ಮತ್ತು ರಾವಣನಾಗಿ ಸೈಫ್ ಅಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. 3ಡಿ ವರ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ.
700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಹಿಂದಿ ಮತ್ತು ತೆಲುಗು ಸೇರಿದಂತೆ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಜೂನ್ 6 ರಂದು ತಿರುಪತಿಯಲ್ಲಿ ನಡೆದಿದೆ.