ಲಕ್ಷದ್ವೀಪ ಮತ್ತು ಕೇರಳವನ್ನು ಈಗಾಗಲೇ ತಲುಪಬೇಕಿದ್ದ ಮುಂಗಾರು ಮಳೆ ಇನ್ನು ತಲುಪಿಲ್ಲ ಇದಕ್ಕೆ ಕಾರಣ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ. ಈ ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪಕ್ಕೆ ತಿರುಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ರೀತಿಯ ವಾಯುಭಾರ ಕುಸಿತ ಮುಂದುವರೆದರೆ ಅದು ಚಂಡಮಾರುತದ ರೂಪ ಪಡೆಯಲಿದ್ದು ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕ ಸಹಿತ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುಜರಾತ್ನ ಕರಾವಳಿಯ ದಕ್ಷಿಣಕ್ಕೆ ಆಗ್ನೇಯ ಅರಬ್ಬಿ ಸಮುದ್ರದ ಮೇಲಿನ ಕಡಿಮೆ ಗಾಳಿಯ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ ಇದು ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಹೆಚ್ಚಾಗಿ ಚಂಡಮಾರುತವಾಗಿ ಬದಲಾಗಲಿದೆ. ಈಗಾಗಲೇ ಈ ಚಂಡಮಾರುತಕ್ಕೆ ಬಿಪರ್ಜಾಯ್ ಎಂದು ಹೆಸರಿಡಲಾಗಿದೆ.
ಬಿಪರ್ಜಾಯ್ ಚಂಡಮಾರುತ ಆಗ್ನೇಯ ಅರಬ್ಬಿ ಸಮುದ್ರದಿಂದ ಪೂರ್ವ ಮಧ್ಯ ಅರಬ್ಬಿ ಸಮುದ್ರದತ್ತ ಚಲಿಸುವ ಸಾಧ್ಯತೆಗಳಿವೆ. ಇದರ ಪ್ರಭಾವದಿಂದ ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿದಂತೆ ರಾಜ್ಯದ ವಿವಿಧೆಡೆ, ಗುಜರಾತ್, ಕರ್ನಾಟಕ ಸೇರಿದಂತೆ ಹಲವೆಡೆ ಜೂನ್ 8 ರಿಂದ ಜೂನ್ 10ರವರೆಗೆ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ.
ಸಮುದ್ರಕ್ಕೆ ಇಳಿಯದಂತೆ ಸೂಚನೆ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದೆ. ಚಂಡಮಾರುತದ ಸಮಯದಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಸಮುದ್ರ, ನದಿ ತೀರ ಪ್ರದೇಶಗಳಲ್ಲಿ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಿದೆ.
ಇನ್ನು ಈ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ಸಮುದ್ರ ತೀರ, ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಅಥವಾ ಕೆಳಗೆ ನಿಲ್ಲಬಾರದು. ಅಲ್ಲದೆ ನೆರೆ ಪೀಡಿತ ತಗ್ಗು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳನ್ನು ಸೇರಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.