ಬಾಗಲಕೋಟೆ: ಖಾಕಿ ಪಡೆಯ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸಲು, ಜನ ಸ್ನೇಹಿಯಾಗಿಸಲು ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಹೊಸ ಬಗೆ ಕ್ರಮಗಳನ್ನು ತಗೆದುಕೊಂಡಿದೆ. ಮುಖ್ಯವಾಗಿ ಜಿಲ್ಲೆಯ ರೌಡಿಶೀಟರ್ಗಳ ಮನೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಸಮಾಜ ಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣು ಇರಿಸಿದೆ…!!
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಲೋಕಾಪುರ, ಬೀಳಗಿ, ಕೆರೂರ, ಬಾದಾಮಿ, ಗುಳೇದಗುಡ್ಡ, ಕಮತಗಿ, ಅಮೀನಗಢ, ಇಳಕಲ್ಲ, ಹುನಗುಂದ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಪೊಲೀಸ್ ಇಲಾಖೆ ರೌಡಿಗಳ ಮನೆಗಳ ವಾಚ್ ಮಾಡಿ ಪರಿಶೀಲನೆ ಮಾಡಿದೆ. ಇದರಿಂದ ರೌಡಿ ಶೀಟರಗಳು ತಲ್ಲಣಗೊಂಡಿದ್ದಾರೆ.
ಇದಕ್ಕೆ ಕಾರಣವೇನು?
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರೌಡಿಗಳ ಮೇಲೆ ನಿಗಾ ವಹಿಸಲಾಗಿತ್ತು. ಶಾಂತಿಯುತವಾಗಿ ಚುನಾವಣೆ ನಡೆಸಲು ಅಡ್ಡಿಪಡಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರು ಸಹ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು, ತಮ್ಮ ತಮ್ಮಗಳ ನಡುವೆ ಗುಂಪು ಘರ್ಷನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಕ್ರಮ ತೆಗೆದಿಕೊಂಡಿದೆ. ಮುಖ್ಯವಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕದಡದಂತೆ ಎಚ್ಚರಿಕೆ ವಹಿಸಲು ವಿವಿಧ ಆಯುಧಗಳ ಬಗ್ಗೆ ರೌಡಿಗಳ ಮನೆ ಪರಿಶೀಲನೆ ಮಾಡಿದೆ. ಅಲ್ಲದೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದ ರೌಡಿಗಳ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಾಗಿದೆ. ಗುಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದರು, ಗಡಿಪಾರು ಆದೇಶ ಇದ್ದರು ಪೊಲೀಸ್ ಠಾಣೆಗೆ ಬಂದು ಸಹಿ ಮಾಡದೇ ತಪ್ಪಿಸಿಕೊಂಡವರಿಗೆ ಖಡಕ್ ವಾರ್ನಿಂಗ್ ಮಾಡಲಾಗಿದೆ. ತನ್ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಭಯ ಸೃಷ್ಟಿಸಿ ಸಾರ್ವಜನಿಕರಿಗೆ ಭರವಸೆ ಮೂಡಿಸುವ ಕೆಲಸ ಮಾಡಿದೆ.
ಅಕ್ರಮ ಚಟುವಟಿಕೆಗಳ ಮೇಲೆ ನಿಗಾ:
ಜಿಲ್ಲೆಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನಿಗಾ ವಹಿಸಲಾಗಿದೆ. ಇಸ್ಪೀಟ್, ಜೂಜಾಟ ಅಡ್ಡೆ, ಕಳಭಟ್ಟಿ ಸರಾಯಿ, ಓಸಿ, ನಿಷೇಧಿತ ತಂಬಾಕು, ಸುಣ್ಣ ಮಿಶ್ರಿತ ಮಾವ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಟೆಗಟ್ಟಲು ಪೊಲೀಸ್ ಇಲಾಖೆ ತೀವ್ರ ಸ್ವರೂಪದಲ್ಲಿ ಜಾಗೃತಿ ವಹಿಸಿ, ಈಗಾಗಲೇ ಅಕ್ರಮದಲ್ಲಿ ಭಾಗವಹಿಸಿದ್ದರ ಮೇಲೆ ಪ್ರಕರಣ ದಾಖಲಿಸ ತೊಡಗಿದೆ.
ನಗರದ ಪ್ರದೇಶದ ಪ್ರಮುಖ ರಸ್ತೆ, ವೃತ್ತದಲ್ಲಿ ಟ್ರಾಫಿಕ್ ಜಾಮ ಆಗದಂತೆ ಎಚ್ಚರಿಕೆ ವಹಿಸಲು ಪಾರ್ಕಿಂಗ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಂಚಾರಿ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ ಸಿಸಿಟಿವಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ಮಾಡಿ ದುರಸ್ತಿಗೊಳಿಸಲಾಗುತ್ತಿದೆ. ಇದರ ಜೊತೆಗೆ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೂ ಸಾರ್ವಜನಿಕರೊಂದಿಗೆ ಜನ ಸ್ನೇಹಿಯಾಗಿ ಇರುವ ಕುರಿತು ತರಬೇತಿ ನೀಡಲಾಗುತ್ತಿದೆ.
ಸಮಾಜದಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ರೌಡಿಗಳ ಮನೆ ಅನಿರೀಕ್ಷಿತವಾಗಿ ಪರಿಶೀಲನೆ ಮಾಡಲಾಯಿತು. ಅಕ್ರಮ ಚಟುವಟಿಕೆಗಳ ನಡೆದಂತೆ ನಿಗಾ ವಹಿಸಲಾಗಿದೆ. ಜನ ಸ್ನೇಹಿಯಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಲು ಸಾರ್ವಜನಿಕರಲ್ಲಿ ಭರವಸೆ ಮೂಡಿಸಲು ಹೊಸ ಹೊಸ ಕ್ರಮ ತೆಗೆದುಕೊಳ್ಳಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮಾಜ ಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಪ್ರಸನ್ನ ದೇಸಾಯಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.