ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಗ್ಯಾರಂಟಿಯನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಸರ್ಕಾರ ಸಿದ್ದತೆಯನ್ನು ನಡೆಸುತ್ತಿದೆ. ಇದಕ್ಕಾಗಿ ನೇರ ಲಾಭ ವರ್ಗಾವಣೆ ಮೂಲಕ ಯೋಜನೆಯ ಲಾಭವನ್ನು ಜನರಿಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ತಿಂಗಳು 200 ಯುನಿಟ್ವರೆಗೆ ವಿದ್ಯುತ್ ಬಳಕೆ ಮಾಡುವ ಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ. ಯೋಜನೆಯ ಲಾಭವನ್ನು ಎಲ್ಲಾ ರೀತಿಯ ಆರ್ಥಿಕ ಹಿನ್ನೆಲೆಯ ಗ್ರಾಹಕರೂ ಪಡೆಯಲಿದ್ದಾರೆ ಎಂಬ ಸ್ಪಷ್ಟೀಕರಣವನ್ನೂ ಸರ್ಕಾರ ಈಗಾಗಲೇ ನೀಡಿದೆ. ಬಡತನ ರೇಖೆಗಿಂತಾ ಕೆಳಗೆ ಇರುವವರು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಗಳವರೆಗೆ ಎಲ್ಲರೂ ಈ ಯೋಜನೆಗೆ ಅರ್ಹರು ಎಂದು ಸರ್ಕಾರ ತಿಳಿಸಿದೆ.
ಉಚಿತ ವಿದ್ಯುತ್ ಯೋಜನೆ ಜಾರಿ ಹೇಗೆ:
ರಾಜ್ಯದಲ್ಲಿ ಎಂದಿನಂತೆ ಪ್ರತಿ ತಿಂಗಳೂ ಮನೆಗಳ ವಿದ್ಯುತ್ ಮೀಟರ್ ರೀಡಿಂಗ್ ನಡೆಯಲಿದೆ. ಗ್ರಾಹಕರು ಪ್ರತಿ ತಿಂಗಳೂ ತಮ್ಮ ವಿದ್ಯುತ್ ಬಿಲ್ ಪಾವತಿ ಮಾಡುತ್ತಿರುವ ಈಗಿನ ವಿಧಾನವನ್ನೇ ಮುಂದುವರೆಸಬೇಕಿದೆ. ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಿದ ಬಳಿಕ ಅವರ ಖಾತೆಗೆ ಪಾವತಿ ಮಾಡಿರುವ ಹಣ ಯಥಾವತ್ತಾಗಿ ವಾಪಸ್ ಬರಲಿದೆ. ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಿದ ಒಂದು ತಿಂಗಳ ಒಳಗೆ ಆ ಹಣವು ಗ್ರಾಹಕರ ಖಾತೆಗೆ ವಾಪಸ್ ವರ್ಗಾವಣೆ ಆಗಲಿದೆ. ಇದಕ್ಕಾಗಿ ಗ್ರಾಹಕರು ತಮ್ಮ ಬ್ಯಾಂಕ್ ಮಾಹಿತಿ, ಆಧಾರ್ ಕಾರ್ಡ್ ನಂಬರ್ ಹಾಗೂ ತಮ್ಮ ವಿದ್ಯುತ್ ಮೀಟರ್ನ ಆರ್ ಆರ್ ನಂಬರ್ ಮಾಹಿತಿಯನ್ನು ನೀಡಬೇಕಿದೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು ಗ್ರಾಹಕರ ಮಾಹಿತಿ ಸಂಗ್ರಹಿಸಲಿವೆ. ಬಾಡಿಗೆ ಮನೆಗಳಲ್ಲಿ ಇರುವ ಗ್ರಾಹಕರಿಗೂ ಈ ಯೋಜನೆಯ ಲಾಭ ಸಿಗಲಿದೆ. ಯಾವುದಾದರೂ ಒಂದು ತಿಂಗಳು ಗ್ರಾಹಕರು ತಮ್ಮ ಮನೆಯಲ್ಲಿ 200 ಯುನಿಟ್ಗಿಂತಲೂ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದರೆ, ಆ ತಿಂಗಳು ಅವರ ಖಾತೆಗೆ ವಿದ್ಯುತ್ ಬಿಲ್ ಕಟ್ಟಿದ್ದ ಹಣ ವಾಪಸ್ ಬರೋದಿಲ್ಲ.
ಸರ್ಕಾರಕ್ಕೆ ಆರ್ಥಿಕ ಹೊರೆ:
ಈ ಯೋಜನೆಗಾಗಿ ಸರ್ಕಾರವು ಪ್ರತಿ ವರ್ಷ 12,000 ಕೋಟಿ ರೂ.ಗಳನ್ನು ತೆಗೆದಿಡಬೇಕಿದೆ. ರಾಜ್ಯದಲ್ಲಿ ಒಟ್ಟು 2.1 ಕೋಟಿ ವಿದ್ಯುತ್ ಗೃಹ ಬಳಕೆದಾರರು ಇದ್ದಾರೆ. ಈ ಪೈಕಿ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆ ಅಡಿ ತಿಂಗಳಿಗೆ 200 ಯುನಿಟ್ಗಿಂತಲೂ ಕಡಿಮೆ ವಿದ್ಯುತ್ ಬಳಸುವ ಒಟ್ಟು 1.7 ಕೋಟಿ ಗ್ರಾಹಕರು ಇದ್ದಾರೆ.
ಯೋಜನೆ ಜಾರಿಗೆ ಯಾವಾಗ:
ಸರ್ಕಾರವು ಆದೇಶ ಹೊರಡಿಸಿದ ದಿನದಿಂದಲೇ ಗ್ರಾಹಕರಿಗೆ ಯೋಜನೆಯ ಲಾಭವನ್ನು ನೀಡಲು ಇಂಧನ ಇಲಾಖೆ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಸರ್ಕಾರದ ಆದೇಶ ಹೊರಬಿದ್ದ ದಿನದಿಂದಲೇ ಗ್ರಾಹಕರಿಗೆ ಯೋಜನೆಯ ಲಾಭ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯಿಂದ ಹೊರಗೆ ಉಳಿಯಬಹುದು:
ಗ್ರಾಹಕರಿಗೆ ಈ ಯೋಜನೆಯಿಂದ ಹೊರಗೆ ಉಳಿಯುವ ಅವಕಾಶವೂ ಇದೆ. ಯೋಜನೆಯ ಲಾಭ ತಮಗೆ ಬೇಡ ಎಂಬ ಆಯ್ಕೆಯನ್ನೂ ಗ್ರಾಹಕರು ಮಾಡಿಕೊಳ್ಳಬಹುದು. ಜನರು ತಮಗೆ ಯೋಜನೆಯ ಲಾಭ ಬೇಡ ಎಂದಾದರೆ, ತಮ್ಮ ಪ್ರದೇಶದ ವ್ಯಾಪ್ತಿಗೆ ಬರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ತಮ್ಮ ಬ್ಯಾಂಕ್ ಖಾತೆ ಮಾಹಿತಿ ನೀಡದೇ ಇದ್ದರೆ ಸಾಕು. ಎಂದಿನಂತೆ ಅವರು ತಮ್ಮ ವಿದ್ಯುತ್ ಬಿಲ್ ಪಾವತಿ ಮಾಡುತ್ತಾ ಹೋಗಬಹುದು.
ಬಿಲ್ ಕಟ್ಟಲು ಜನ ಹಿಂದೇಟು:
ಈಗಾಗಲೇ ಹಲವು ಕಡೆ ವಿದ್ಯುತ್ ಬಿಲ್ ಕಟ್ಟಲು ಜನ ಹಿಂದೇಟು ಹಾಕಿರುವ ಘಟನೆಗಳು ನಡೆದಿವೆ. ಹಾಗೆಯೇ ವಿದ್ಯುತ್ ಬಿಲ್ ಹಣ ಸಂಗ್ರಹಣೆಗೆ ಹೋದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗಿದೆ.
ಆದೇಶ ಬರೋವರೆಗೆ ಕರೆಂಟ್ ಬಿಲ್ ಕಟ್ಟಲು ಸರ್ಕಾರದ ಸೂಚನೆ:
ಉಚಿತ ವಿದ್ಯುತ್ ಯೋಜನೆಯು ಜಾರಿಯಾಗುವ ಹಿನ್ನೆಲೆಯಲ್ಲಿ ಈಗಿನಿಂದಲೇ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ತಕರಾರು ತಗೆಯುತ್ತಿರುವ ಗ್ರಾಹಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಉಚಿತ ಯೋಜನೆ ಬರೋವರೆಗೆ ವಿದ್ಯುತ್ ಬಿಲ್ ಕಟ್ಟಲೇಬೇಕು. ಇಲ್ಲವಾದರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದೆ.