ಸಹಕಾರಿ ಸಂಘಗಳ ವಲಯದಡಿಯಲ್ಲಿ ವಿಶ್ವದ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ ಯೋಜನೆಗೆ ಸರ್ಕಾರವು 1 ಲಕ್ಷ ಕೋಟಿ ರೂಪಾಯಿಯನ್ನು ಘೋಷಿಸಿದೆ. ಹಾಗೆಯೇ ಯೋಜನೆಗೆ ಅನುಕೂಲವಾಗುವಂತೆ ಅಂತರ ಸಚಿವಾಲಯ ಸಮಿತಿಯನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಕ್ಯಾಬಿನೆಟ್ ಬ್ರೀಫಿಂಗ್ನಲ್ಲಿ ತಿಳಿಸಿದ್ದಾರೆ.
ಶೇಖರಣಾ ಸಾಮರ್ಥ್ಯ ಮತ್ತು ಅಂತರ ಸಚಿವಾಲಯ ಸಮಿತಿಯನ್ನು ಸ್ಥಾಪಿಸುವ ಪ್ರಸ್ತಾವನೆಗಳಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಯೋಜನೆಯನ್ನು ಸಕಾಲ ಮತ್ತು ಏಕರೂಪದ ಅನುಷ್ಠಾನವನ್ನು ಮಾಡಲು ಸಹಕಾರ ಸಚಿವಾಲಯವು ವಿವಿಧ ರಾಜ್ಯಗಳ 10 ಜಿಲ್ಲೆಗಳನ್ನು ಆಯ್ದುಕೊಂಡು ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಯೋಜನೆಯಡಿ, ಪ್ರತಿ ಬ್ಲಾಕ್ನಲ್ಲಿ 2,000 ಟನ್ ಸಾಮರ್ಥ್ಯದ ಗೋಡೌನ್ ಇರುತ್ತದೆ. ಇದರ ಮೇಲ್ವಿಚಾರಣೆಗಾಗಿ ಅಂತರ ಸಚಿವಾಲಯ ಸಮಿತಿಯನ್ನೂ ರಚಿಸಲಾಗಿದೆ. ಈ ಯೋಜನೆಯು ಆಹಾರ ಧಾನ್ಯಗಳನ್ನು ಉಳಿಸುತ್ತದೆ ಮತ್ತು ಆಮದುಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಬೆಳೆಗಾರರಿಗೆ ಸರಿಯಾದ ಸಂಭಾವನೆ ಸಿಗುತ್ತದೆ ಮತ್ತು ಲಕ್ಷಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತದೆ ಎಂದು ಅವರು ತಿಳಿಸಿದರು.
ಇದು ದೇಶದ ಆಹಾರಧಾನ್ಯ ಸಂಗ್ರಹಣಾ ಸೌಲಭ್ಯಗಳನ್ನು ವಿಸ್ತರಿಸುವ ಯೋಜನೆಯ ಭಾಗವಾಗಿದ್ದು, ಇದು ಸಹಕಾರಿ ಕ್ಷೇತ್ರಕ್ಕೆ ಸಹಾಯ ಮಾಡುತ್ತದೆ. ಭಾರತವು ಪ್ರಸ್ತುತ 1.450 ಮಿಲಿಯನ್ ಟನ್ಗಳ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಹೊಸ ಯೋಜನೆ ಅಡಿಯಲ್ಲಿ ಸಹಕಾರಿ ಸಂಸ್ಥೆಗಳು 70 ಮಿಲಿಯನ್ ಟನ್ ಸಾಮರ್ಥ್ಯವನ್ನು ಸೇರಿಸುತ್ತವೆ. ಇದು ಭಾರತದಲ್ಲಿ ಆಹಾರ ಭದ್ರತೆಯನ್ನು ಸುಧಾರಿಸುತ್ತದೆ, ಜೊತೆಗೆ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಹವಾಮಾನ ವೈಪರೀತ್ಯಗಳಿಂದ ರೈತರು ಈ ಹಿಂದೆ ತಮ್ಮ ಬೆಳೆಗಳನ್ನು ತರಾತುರಿಯಲ್ಲಿ ಮಾರಾಟ ಮಾಡಬೇಕಾಗಿತ್ತು ಆದರೆ ಈ ಯೋಜನೆಯಿಂದ ಅದು ತಪ್ಪುತ್ತದೆ ಎಂದು ಅವರು ಹೇಳಿದರು.
ಭಾರತದ ಆಹಾರ ಶೇಖರಣೆಯ ಸಾಮರ್ಥ್ಯ ಹೆಚ್ಚಳ:
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ, ಆದರೆ ಸಾಕಷ್ಟು ಶೇಖರಣಾ ಸಾಮರ್ಥ್ಯವನ್ನು ಹೊಂದಿಲ್ಲ. ಚೀನಾ, ಯುಎಸ್ಎ, ಬ್ರೆಜಿಲ್, ಅರ್ಜೆಂಟೀನಾ ಅಥವಾ ರಷ್ಯಾಗಳು ತಮ್ಮ ಉತ್ಪಾದನೆಗಿಂತ ಹೆಚ್ಚಿನ ಶೇಖರಣಾ ಸಾಮರ್ಥ್ಯವನ್ನು ಹೊಂದಿವೆ. ಭಾರತ ತನ್ನ ಶೇ.47 ರಷ್ಟು ಮಾತ್ರ ಸಂಗ್ರಹಿಸಬಲ್ಲದು. ಭಾರತದ ಒಟ್ಟು ಸಂಗ್ರಹಣಾ ಸಾಮರ್ಥ್ಯವು ಪ್ರಸ್ತುತ 1450 ಲಕ್ಷ ಟನ್ಗಳು ಮಾತ್ರ ಮತ್ತು ಹೊಸ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 700 ಲಕ್ಷ ಟನ್ಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತವು ಒಟ್ಟು 3100 ಲಕ್ಷ ಟನ್ಗಳಷ್ಟು ಆಹಾರ ಉತ್ಪಾದನೆಯನ್ನು ಹೊಂದಿದೆ ಮತ್ತು ಶೇಖರಣಾ ಸಾಮರ್ಥ್ಯದ ಕೊರತೆ ಅಥವಾ ಸಾಗಣೆಯ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ, ಆದರೆ ಹಾನಿಯಿಂದಾಗಿ ರೈತರಿಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ಠಾಕೂರ್ ಹೇಳಿದರು.
ರೈತರು ತಮ್ಮ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿದ ನಂತರ ಪಿಎಸಿಎಸ್ನಿಂದ 70 ಪ್ರತಿಶತದಷ್ಟು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಯೋಜನೆಯಡಿ ಪ್ರತಿ ಬ್ಲಾಕ್ಗೆ 2000 ಟನ್ಗಳ ಗೋದಾಮು ಸಿಗುತ್ತದೆ ಮತ್ತು ಪಿಎಸಿಎಸ್ 500 ಟನ್ನಿಂದ 2000 ಟನ್ ಸಾಮರ್ಥ್ಯದ ಗೋಡೌನ್ಗಳನ್ನು ಪಡೆಯುತ್ತದೆ. ದೇಶದಲ್ಲಿ 63,000 ಕ್ರಿಯಾತ್ಮಕ ಪಿಎಸಿಎಸ್ ಇವೆ, ಅವುಗಳು ಈಗಾಗಲೇ ಗಣಕೀಕರಣಗೊಂಡಿವೆ ಮತ್ತು 25 ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುತ್ತವೆ ಮತ್ತು ಸಂಗ್ರಹಣೆಯು ಈಗ ಅವುಗಳಲ್ಲಿ ಒಂದಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.