ತಾಯಿ, ಅಮ್ಮ, ಅವ್ವ ಎಂಬ ಎರಡು ಅಕ್ಷರಗಳಿಗೆ ಸಕಲ ಜೀವಿಗಳ ಭಾಷೆಗಳಲ್ಲಿ ತ್ಯಾಗ, ಪ್ರೀತಿ, ಕಾಳಜಿ, ಮಮತೆ ಕಾಣುತ್ತದೆ. ಮಾನವನಷ್ಟೇ ಅಲ್ಲದೆ ಭೂಮಿ ಮೇಲಿನ ಎಲ್ಲಾ ಪ್ರಾಣಿಗಳು ಸಹ ತಮ್ಮ ಮರಿಗಳಿಗೆ ಜನ್ಮ ನೀಡಿದಾಗಿನಿಂದ ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ಮಕ್ಕಳನ್ನು ಪೋಷಿಸುತ್ತವೆ, ಆರೈಕೆ ಮಾಡಿ ಬೆಳೆಸುತ್ತವೆ. ಮಕ್ಕಳಿಗೆ ಏನಾದರು ತೊಂದರೆ ಬಂದರೆ ಜೀವದ ಹಂಗು ತೊರೆದು ಹೊರಾಡುತ್ತವೆ.
ಮಾರ್ಗದಿಂದ ವೇಗವಾಗಿ ಬಂದ ಕಾರು ಚಾಲಕನೊಬ್ಬ ರಸ್ತೆ ದಾಟುತಿದ್ದ ಕೋತಿ ಮರಿಗೆ ಡಿಕ್ಕಿ ಹೊಡೆದು ನಿಲ್ಲದೆ ಓಡಿ ಹೋದ. ಅಲ್ಲಿಯೇ ಇದ್ದ ನೂರಾರು ಜನರು ಕೋತಿ ಮರಿಗೆ ಏನಾಯ್ತು ಎಂದು ನೋಡುವಲ್ಲಿ ಮುಂದಾದರು. ಕೆಲವರು ಕಾರು ಹಿಂಬಾಲಿಸಲು ಪ್ರಯತ್ನ ಪಟ್ಟರು ಆದರೆ ಕಾರು ಚಾಲಕ ಸಿಗಲಿಲ್ಲ. ದುರದೃಷ್ಟವೆನೆಂದರೆ ಕೋತಿಯ ಮರಿ ಅಪಘಾತದಿಂದ ಅಧಿಕ ರಕ್ತಸ್ರಾವ ಹೊಂದಿ ಸಾವನ್ನಪ್ಪಿತು.
ತನ್ನ ಮಗುವಿಗೆ ಅಪಘಾತವಾಗಿದ್ದು ಗಮನಿಸಿದ ತಾಯಿ ಕೋತಿಯೂ ಅಲ್ಲಿದ್ದ ಜನರ ಗುಂಪಿನ ನಡುವೆಯೇ ಪ್ರವೇಶ ಮಾಡಿತು. ಮಗುವಿನ ರಕ್ತನೋಡಿ ಜನರ ಮೇಲೆ ಕೋಪಗೊಂಡಿತು ಅಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲಾ ಜನರನ್ನು ತನ್ನ ಕೋಪದಿಂದ ಚದುರಿಸಿತು. ನಂತರ ಸಾವನ್ನಪ್ಪಿದ ಕೋತಿಮರಿಯನ್ನು ಮುಟ್ಟಿ ಅಲ್ಲಾಡಿಸಿತು, ತನ್ನದೆ ಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನ ಪಟ್ಟಿತು, ಮಗುವಿನ ಸಾವು ಖಚಿತವಾದ ನಂತರ ಗೋಗರೆಯಲ ಆರಂಭಿಸಿತು. ಅದರ ಕಣ್ಣಲ್ಲಿಯೂ ನೀರು ಬರುತಿದ್ದವು, ಅದರ ಮುಖದ ತುಂಬ ದುಃಖ ಆವರಿಸಿತ್ತು.. ಯಾರನ್ನು ಸಮೀಪದಲ್ಲಿ ಬಿಟ್ಟುಕೊಳ್ಳದೆ ತನ್ನ ನೋವನ್ನು ಹೊರಹಾಕಿತು.. ಅಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿತು..
ಹಾಗೋ-ಹಿಗೋ ಮಾಡಿ ಬೀದಿಬದಿ ವ್ಯಾಪಾರಸ್ಥರೊಬ್ಬರು ಸಾವನ್ನಪ್ಪಿದ ಮರಿ ಕೋತಿಯನ್ನು ರಸ್ತೆಬದಿಯಲ್ಲಿದ್ದ ಬೇವಿನ ಮರದ ಕೆಳಗೆ ಇದ್ದ ಕುರ್ಚಿಗೆ ತಂದು ಹಾಕಿದರು. ಇನ್ನೊಬ್ಬರು ಹೂವಿನ ಹಾರ ಹಾಕಿ ಓಡಿ ಹೋದರು.. ನಂತರ ತಾಯಿ ಕೋತಿ ಆ ಮಗುವಿನ ಪಕ್ಕದಲ್ಲಿದ್ದ ಬೈಕಿನ ಮೇಲೆ, ಅದರ ಸುತ್ತಲು ಅಂತ ಅಂದಾಜು ಒಂದು ತಾಸಿಗೂ ಹೆಚ್ಚು ಸಮಯ ಕುಳಿತುಕೊಂಡಿತು.. ಸ್ವಲ್ಪ ಸಮಯದ ನಂತರ ಅದರ ವೇದನೆ, ನೋವು, ಕೋಪ ಕಡಿಮೆ ಆದಾಗ ಬಾಳೆಹಣ್ಣಿನ ವ್ಯಾಪಾರಸ್ಥರೊಬ್ಬರು ಹಿಂಬದಿಯಲ್ಲಿ ಬಂದು ದೂರದಲ್ಲಿಯೇ ಒಂದು ಡಜನ್ ಬಾಳೆಹಣ್ಣು ತಾಯಿ ಕೋತಿಗೆ ತೋರಿಸಿ ಇಟ್ಟು ಓಡಿ ಹೋದರು… ನಂತರ ತಾಯಿ ಕೋತಿ ಎರಡು ಹಣ್ಣುಗಳನ್ನು ತೆಗೆದುಕೊಂಡು ದೂರದ ಕಟ್ಟಡದ ಮೇಲೆ ಹೋಗಿ ಕುಳಿತೊಂಡಿತು..
ಆಗ ಧೈರ್ಯ ಮಾಡಿದ ಯುವಕರು ಸಾವನ್ನಪ್ಪಿದ ಕೋತಿ ಮರಿಯನ್ನು ದೂರದಲ್ಲಿ ತೆಗೆದುಕೊಂಡು ವಿಧಿವಿಧಾನಗಳ ಮೂಲಕ ಮಣ್ಣುಮಾಡಲಾಯಿತು.
ಈ ಕಥೆಯನ್ನು ಓದಿದ ಮೇಲೆ ಅನಿಸಿದ್ದು ಏನೆಂದರೆ ತಾಯಿಯ ಪ್ರೀತಿಗೆ ಹೊಲಿಕೆ ಮಾಡಲು ಸಾಧ್ಯವಿಲ್ಲ. ಅದು ಕೋತಿಯಾಗಲಿ, ಇನ್ನಾವದೋ ಪ್ರಾಣಿಯಾಗಲಿ ಅಥವಾ ಮನುಷ್ಯನಾಗಲಿ.. ಅದಕ್ಕೆ ತಾಯಿಯನ್ನು ಇದ್ದಾಗಲೆ ಚೆನ್ನಾಗಿ ನೋಡಿಕೊಳ್ಳಿ, ಗೌರವ ಕೊಡಿ ಅವರ ಪ್ರೀತಿಯನ್ನು ಅನುಭವಿಸಿ.. ಪ್ರೀತಿ, ವಾತ್ಸಲ್ಯ ಸ್ಥಿರವಾಗಿರುತ್ತದೆ. ಇದೆಲ್ಲಾ ತಾಯಿ ಎಂಬ ಶಕ್ತಿಯ ಪವಾಡವೇ ಆಗಿರುತ್ತದೆ ಅಲ್ಲವೇ?
ಇನ್ನೊಂದು ಮನವಿ ಏನೆಂದರೆ ದಯವಿಟ್ಟು ವಾಹನಗಳನ್ನು ನಿಧಾನವಾಗಿ ಚಲಾಯಿಸಿ.. ವಾಹನ ಓಡಿಸುವ ನಿಮಗೆ ಹಾಗೂ ನಿಮ್ಮ ಎದುರಿಗೆ ಬರುವ ಮನುಷ್ಯ, ಪ್ರಾಣಿ-ಪಕ್ಷಿಗಳಿಗೂ ಜೀವವಿದೆ. ಅವರನ್ನೇ ನಂಬಿರುವ ಕುಟುಂಬವಿದೆ.. ಎಲ್ಲರ ಜೀವವು ಒಂದೆ ಎಂದು ಅರಿವು-ಜಾಗೃತಿ ಹೊಂದಿ.. ನಿಧಾನವಾಗಿ ವಾಹನಗಳನ್ನು ಓಡಿಸಿ..