ಬೆಳಿಗ್ಗೆ ಎದ್ದ ಕೂಡಲೇ ಪರಿಚಯದವರ ದೂರವಾಣಿ, “ಡಾಕ್ಟ್ರೇ ಇಷ್ಟು ದಿನ ಆರೋಗ್ಯ ಚೆನ್ನಾಗಿತ್ತು. ಆದ್ರೆ ಒಂದು ವಾರದಿಂದ ಸಿಕ್ಕಾಪಟ್ಟೆ ಜೀರ್ಣದ ಸಮಸ್ಯೆ ಆಗ್ತಿದೆ. ಪದೇ ಪದೇ ಹುಳಿತೇಗು, ಹೊಟ್ಟೆ ಉಬ್ಬರ, ಗ್ಯಾಸ್ ಹೋಗೋದು, ತುಂಬಾ ಸುಸ್ತು. ಯಾಕೋ ಏನೂ ಬೇಡ ಅನಿಸ್ತಿದೆ. ಏನಾದರೂ ಮಾಡಿ ಇದನ್ನು ಒಂದು ಸರಿ ಮಾಡ್ಕೊಡಿ,” ಅಂತ.
ಆಯ್ತು, ಕ್ಲಿನಿಕ್ಕಿಗೆ ಬನ್ನಿ ಅಂತ ಹೇಳಿ ವಿವರವಾಗಿ ಮಾಹಿತಿ ಕಲೆ ಹಾಕಿದಾಗ ಸಿಕ್ಕಿದ್ದು – ಆರೋಗ್ಯಕ್ಕೆ ಒಳ್ಳೆಯದು ಅಂತ ಬಾಯಾರಿಕೆ ಇಲ್ಲದಿದ್ದರೂ ಬೆಳಗ್ಗೆ ಎದ್ದ ಕೂಡಲೇ ಒಂದು ಲೀಟರ್ ನಷ್ಟು ನೀರು ಕುಡಿಯುವ ಅಭ್ಯಾಸ.
ಹಾಗಿದ್ದರೆ ನೀರು ಕುಡಿಯುವುದಕ್ಕೂ ನಿಯಮಗಳಿವೆಯಾ? ಖಂಡಿತಾ ಇದೆ.
ಆಯುರ್ವೇದದ ಪ್ರಕಾರ ಆರೋಗ್ಯವಂತರು ಬೇಸಿಗೆ ಹಾಗೂ ಶರದೃತುವನ್ನು ಬಿಟ್ಟು ಬೇರೆಲ್ಲ ಋತುಗಳಲ್ಲಿ ಕಡಿಮೆ ಅಥವಾ ಮಿತವಾಗಿ ಕುಡಿಯಬೇಕು. ಹಾಗಿದ್ದರೆ ಎಷ್ಟು ನೀರು ಕುಡಿಯಬೇಕು? ಇದಕ್ಕೆ ಮಾನದಂಡ ಏನು?
ಬಾಯಾರಿಕೆ ಆದಾಗ ಬಾಯಾರಿಕೆಯನ್ನು ತಣಿಸುವಷ್ಟು ನೀರನ್ನು ಕುಡಿಯಬೇಕೇ ವಿನಹ ಲೀಟರಿನಷ್ಟಲ್ಲ. ಇನ್ನೊಂದು ಮಾನದಂಡವೆಂದರೆ ಮೂತ್ರ. ಮೂತ್ರ ಅರಶಿನ (ತೆಳು ಹಳದಿ ಅಲ್ಲ) ಬಣ್ಣದಲ್ಲಿ ಹೋಗುತ್ತಿದ್ದರೂ ದೇಹದಲ್ಲಿ ನೀರು ಕಡಿಮೆ ಆಗ್ತಿದೆ ಎಂದರ್ಥ.
ಹಾಗೆಯೇ ಅತಿಯಾದ ಬಾಯಾರಿಕೆ, ಎಷ್ಟೇ ನೀರು ಕುಡಿದರೂ ಸಾಕಾಗುವುದಿಲ್ಲ ಅಂದಾಗಲೂ ವೈದ್ಯರ ಸಲಹೆ ಪಡೆಯುವುದು ಉತ್ತಮ. ಯಾಕೆಂದರೆ ಮಧುಮೇಹ ಇತ್ಯಾದಿ ಕಾಯಿಲೆಗಳಲ್ಲಿ ಅತಿ ಬಾಯಾರಿಕೆಯು ರೋಗದ ಒಂದು ಲಕ್ಷಣವಾಗಿರುತ್ತದೆ.
ಇನ್ನೊಂದು ಎಲ್ಲರಿಗೂ ಕಾಡುವ ಪ್ರಶ್ನೆ ಆಹಾರದ ಮಧ್ಯದಲ್ಲಿ ನೀರು ಕುಡಿಯುವುದು ಸರಿಯಾ, ತಪ್ಪಾ?
ಆಯುರ್ವೇದದ ಪ್ರಕಾರ ಆಹಾರದ ಮೊದಲು ನೀರು ಕುಡಿದರೆ ದೇಹ ಸಣ್ಣಗಾಗುತ್ತದೆ. ಹಾಗೇ ಆಹಾರದ ನಂತರ ಕುಡಿದ ನೀರು ದೇಹವನ್ನು ದಪ್ಪ ಮಾಡುತ್ತದೆ. ಆಹಾರದ ಮಧ್ಯದಲ್ಲಿ ನೀರು ಕುಡಿದರೆ ಹಸಿವು ಕಟ್ಟುತ್ತದೆ ಎಂಬ ಜನರ ನಂಬಿಕೆಗೆ ವಿರುದ್ಧವಾಗಿ, ಆಯರ್ವೇದ, ಆಹಾರದ ಮಧ್ಯದಲ್ಲಿ ನೀರು ತೆಗೆದುಕೊಂಡಲ್ಲಿ ದೋಷ ಧಾತು ಅಗ್ನಿ ಎಂಬ ದೇಹದ ಘಟಕಗಳನ್ನು ಸಮತೋಲನದಲ್ಲಿಟ್ಟು ಆರೋಗ್ಯವನ್ನು ಕಾಪಾಡುತ್ತದೆ ಎನ್ನುತ್ತದೆ.
ಅತಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿ ಮೊದಲನೆಯದಾಗಿ ಅಸಮತೋಲನ ಉಂಟಾಗುವುದೇ ಅಗ್ನಿಯಲ್ಲಿ (digestion and metabolism) ಸರಳವಾಗಿ ಹೇಳುವುದಾದರೆ ನಾವು ತಿಂದ ಆಹಾರವನ್ನು ಜೀರ್ಣ ಮಾಡುವ ಆ್ಯಸಿಡ್ ಹೈಡ್ರೋಕ್ಲೋರಿಕ್ ಆ್ಯಸಿಡ್. ಹೇಗೆ ಆ್ಯಸಿಡ್ ಗೆ ನೀರು ಹಾಕಿದರೆ ಅದರ ತೀಕ್ಷ್ಣತೆ ಕಡಿಮೆ ಆಗುತ್ತೋ ಹಾಗೆಯೇ ಅಗತ್ಯಕ್ಕಿಂತ ಜಾಸ್ತಿ ಹಾಗೂ ಬೆಳಿಗ್ಗೆ ಎದ್ದ ತಕ್ಷಣ ಲೀಟರಿನಷ್ಟು ನೀರು ಕುಡಿದಾಗ ಹೈಡ್ರೋಕ್ಲೋರಿಕ್ ಆ್ಯಸಿಡ್ ನ ತೀಕ್ಷ್ಣತೆ ಕಡಿಮೆಯಾಗಿ ಜೀರ್ಣಕ್ರಿಯೆಗೆ ತೊಂದರೆ ಕೊಡುತ್ತದೆ. ಹಾಗಾಗಿ ಆಯುರ್ವೇದದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರಿನಷ್ಟು ಅಥವಾ ಒಂದು ದೊಡ್ಡ ಗ್ಲಾಸಿನಲ್ಲಿ ನೀರು ಕುಡಿದರೆ ಯಾವುದೇ ಜೀರ್ಣದ ಸಮಸ್ಯೆ ಬರುವುದಿಲ್ಲ ಎಂದೊ ದಿನಕ್ಕೆ ಮೂರರಿಂದ ಆರು ಲೀಟರಿನಷ್ಟು ನೀರು ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದೊ ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಬರಹಗಳನ್ನು ಓದಿ ಬಾಯಾರಿಕೆ ಇಲ್ಲದಿದ್ದರೂ ಆಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಒಂದಲ್ಲ ಒಂದು ದಿನ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ.