ಕರ್ನಾಟಕ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಬಹುಮತವನ್ನು ಪಡೆದುಕೊಂಡು ಸರ್ಕಾರ ರಚಿಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಎಡಿಆರ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದವರ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ವಿಧಾನಸಭೆಗೆ ಆಯ್ಕೆಯಾದ ಸರ್ವಜ್ಞನಗರದ ಶಾಸಕ ಕೆ.ಜೆ ಜಾರ್ಜ್ ಅವರನ್ನು ಹೊರತು ಪಡಿಸಿ ಉಳಿದ ೨೨೩ ಶಾಸಕರ ಮಾಹಿತಿಯನ್ನು ಎಡಿಆರ್ ತನ್ನ ವರದಿಯಲ್ಲಿ ನೀಡಿದೆ.
ಕಳೆದ ಬಾರಿಯ ೨೦೧೮ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾಯಿತ ಶಾಸಕರಲ್ಲಿ ಅಪರಾಧ ಉಳ್ಳ ಶಾಸಕರ ಸಂಖ್ಯೆ ಹೆಚ್ಚಾಗಿದೆ.
ಸುಮಾರು ೩೨% ದಷ್ಟು ಚುನಾಯಿತರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
ಶಾಸಕರೊಬ್ಬರ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣವಿದ್ದು, ಮೂವರು ಶಾಸಕರು ಕೊಲೆ ಯತ್ನದ ಪ್ರಕರಣಗಳ ಆರೋಪವಿರವುದಾಗಿ ಘೋಷಿಸಿದ್ದಾರೆ.
ಏಳು ಹೊಸ ಶಾಸಕರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ; ಅವರಲ್ಲಿ ಒಬ್ಬರು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ಪಕ್ಷವಾರು ಅಪರಾಧ ಪ್ರಕರಣ ಹಿನ್ನಲೆಯುಳ್ಳ ಶಾಸಕರ ಬಗ್ಗೆ ನೋಡುವುದಾದರೆ ಕಾಂಗ್ರೆಸ್ನ 134 ಚುನಾಯಿತ ಅಭ್ಯರ್ಥಿಗಳಲ್ಲಿ 78 (58%), ಬಿಜೆಪಿಯಿಂದ 66 ಗೆದ್ದ ಅಭ್ಯರ್ಥಿಗಳಲ್ಲಿ 34 (52%), ಜೆಡಿಎಸ್ನಿಂದ 19 ವಿಜೇತ ಅಭ್ಯರ್ಥಿಗಳಲ್ಲಿ 9 (47%) ) ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಚುನಾಯಿತ ಅಭ್ಯರ್ಥಿ 1 (100%) ತಮ್ಮ ಅಫಿಡವಿಟ್ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.
ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಾಂಗ್ರೆಸ್ನಿಂದ 134 ಚುನಾಯಿತ ಅಭ್ಯರ್ಥಿಗಳಲ್ಲಿ 40 (30%), ಬಿಜೆಪಿಯಿಂದ 66 ವಿಜೇತ ಅಭ್ಯರ್ಥಿಗಳಲ್ಲಿ 23 (35%), ಜೆಡಿಎಸ್ ಮತ್ತು 19 ವಿಜೇತ ಅಭ್ಯರ್ಥಿಗಳಲ್ಲಿ 7 (37%) ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ವಿಜೇತ ಅಭ್ಯರ್ಥಿ ಅಫಿಡವಿಟ್ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ.