ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು.
ಒಂದೆಡೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ , ಗ್ಯಾಸ್ ದರ ಏರಿಕೆಯಿಂದಾಗಿ ತತ್ತರಿಸಿದ್ದ ಜನತೆಗೆ ಕಾಂಗ್ರೆಸ್ ನಾಯಕರು ಪ್ರಕಟಿಸಿದ ಐದು ಯೋಜನೆಗಳು ಮರುಭೂಮಿಯಲ್ಲಿ ಒಯಸಿಸ್ ಸಿಕ್ಕಂತೆ ಆಗಿತ್ತು. ಅದೂ ಅಲ್ಲದೆ ಚುನಾವಣಾ ಸಂದರ್ಭದಲ್ಲೇ ಕಾಂಗ್ರೆಸ್ ಹಿರಿಯ ನಾಯಕರುಗಳಾದ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಇಬ್ಬರೂ ಆತ್ಮೀಯವಾಗಿ ಮಾತನಾಡುತ್ತಿರುವ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಇಬ್ಬರೂ ನಾಯಕರು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿರ್ಧಾರ ಪ್ರಕಟಿಸುವದಾಗಿಯೂ ಹೇಳಿದ್ದರು. ಇದೇ ಕಾರಣದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭುತಪೂರ್ವ ಯಶಸ್ಸು ದಾಖಲಿಸಿತು. ಇಡೀ ರಾಜ್ಯದ ಜನತೆ ಗ್ಯಾರಂಟಿ ಯೋಜನೆಗಳ ಫಲಾನುಭವಿ ಗಳಾಗಲು ಎದುರು ನೋಡುತಿದ್ದಾರೆ. ಆದರೆ ಈಗ ಗ್ಯಾರಂಟಿ ಯೋಜನೆಗಳ ಜಾರಿಗೆ ಕಾಂಗ್ರೆಸ್ ನಾಯಕರೇ ಹಿಂದೇಟು ಹಾಕುತ್ತಿರುವ ಕುರಿತು ವರದಿ ಆಗಿದೆ.
ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ, ಆದರೆ ಕೆಲವು ಷರತ್ತುಗಳೊಂದಿಗೆ ಎಂದು ಹೇಳಿದ್ದಾರೆ. ಪ್ರತಿ ಇಲಾಖೆಯ ಸಚಿವರು ಹಲವು ಸುತ್ತಿನ ಸಭೆ, ಸಮಾಲೋಚನೆ ನಡೆಸಿ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರೇ ಭಾಷಣದಲ್ಲಿ ಪ್ರತಿಯೊಬ್ಬರಿಗೂ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಿದ್ದರು. ಆ ವೀಡಿಯೋ ಕ್ಲಿಪ್ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರು ಇದನ್ನು ಇಟ್ಟುಕೊಂಡಿರಿ ಮುಂದೆ ಬೇಕಾಗುತ್ತದೆ ಎಂದು ಶೇರ್ ಮಾಡುತಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವುದೇ ಷರತ್ತುಗಳನ್ನು ಹೇರದೆ ಗ್ಯಾರಂಟಿಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಪಕ್ಷ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೇ ಪಾರದರ್ಶಕವಾಗಿರಬೇಕಿತ್ತು ಎಂದು ಹೇಳಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಇದರ ಪರಿಣಾಮ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಘೋಷಿಸಿದ್ದ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಐದು ಗ್ಯಾರಂಟಿ ಕಾರ್ಡ್ ಗಳು ಕಾಂಗ್ರೆಸ್ ನ್ನು ಈ ಬಾರಿ ಅಭೂತಪೂರ್ವ ವಿಜಯದ ಗಡಿ ಮುಟ್ಟಿಸುವಂತೆ ಮಾಡಿದೆ. ಆದರೆ, ಈ ಉಚಿತ ಭರವಸೆಗಳ ಅನುಷ್ಠಾನಕ್ಕೆ ಹತ್ತಾರು ಸವಾಲುಗಳಿವೆ.
ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 40,000 ಕೋಟಿ ರೂ. ಬೇಕಾಗಲಿದ್ದು, ಇದು ರಾಜ್ಯ ಬಜೆಟ್ ಮೊತ್ತದ ಕೇವಲ 15% ಆಗಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಘೋಷಿಸಿದಂತೆ ರಾಜ್ಯದ ಎಲ್ಲರಿಗೂ ಈ ಯೋಜನೆಗಳನ್ನು ಅನ್ವಯಿಸಿದರೆ ಅಂದಾಜು ಮೊತ್ತ 60,000 ಕೋಟಿ ರೂ. ದಾಟುವ ಸಾಧ್ಯತೆ ಇದೆ. ರಾಜ್ಯದ ವಾರ್ಷಿಕ ಬಜೆಟ್ ಇರುವುದೇ ಮೂರು ಲಕ್ಷ ಕೋಟಿ ರೂಪಾಯಿಗಳಿಗೂ ಕೊಂಚ ಹೆಚ್ಚು. ಅದರಲ್ಲೂ ಈ ಹಿಂದೆ ಮಾಡಿರುವ ಸಾಲದ ಮೇಲಿನ ಬಡ್ಡಿ ಕಟ್ಟಲು ವಾರ್ಷಿಕ ಮೂವತ್ತು ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ.
ಗ್ಯಾರಂಟಿ ಯೋಜನೆಗಳ ಜಾರಿಗೆ ಕಾಂಗ್ರೆಸ್ ಮತ್ತೆ ಸಾಲ ಮಾಡಬೇಕಾಗುತ್ತದೆ ಇಲ್ಲವೇ ಬಡ ವರ್ಗಕ್ಕೆ ಮಾತ್ರ ಉಚಿತ ಯೋಜನೆ ಜಾರಿಗೊಳಿಸಬೇಕಾಗುತ್ತದೆ, ಅದರಲ್ಲೂ ಪಧವೀಧರರಿಗೆ ಘೋಷಿಸಿರುವ ತಿಂಗಳ ನಿರುದ್ಯೋಗ ಭತ್ಯೆಯ ೩೦೦೦ ರೂಪಾಯಿಗಳನ್ನು ನೀಡಲು ಫಲಾನುಭವಿಗಳ ಆಯ್ಕೆಯೇ ದೊಡ್ಡ ತಲೆ ನೋವಾಗಲಿದೆ. ಏಕೆಂದರೆ ಖಾಸಗೀ ಊದ್ಯೋಗ , ಸ್ವಉದ್ಯೋಗ ಮಾಡುತ್ತಿರುವ ಲಕ್ಷಾಂತರ ಯುವಕರಿದ್ದು ಇವರಲ್ಲಿ ನಿರುದ್ಯೋಗಿಗಳನ್ನು ಗುರುತಿಸುವುದೇ ದೊಡ್ಡ ಸವಾಲಾಗಲಿದೆ.
ಯೋಜನೆಗಳ ಜಾರಿಗೆ ಸರ್ಕಾರದ ಸೀಮಿತ ಆದಾಯ ಮೂಲಗಳ ಹಿನ್ನೆಲೆ ತೀವ್ರ ಆದಾಯ ಕೊರತೆ ಎದುರಾಗುವ ಭೀತಿ ಇದೆ. ಈ ಆದಾಯ ಕೊರತೆಯ ನಡುವೆ ಗ್ಯಾರಂಟಿಗಳ ಜಾರಿ ಮಾಡುವುದು ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ದೊಡ್ಡ ಸವಾಲಾಗಿದೆ.
ಗ್ಯಾರಂಟಿಗಳಿಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿ ದೊಡ್ಡ ಸವಾಲಾಗಿದೆ. ವಿತ್ತೀಯ ಕೊರತೆಯನ್ನು ಕಾಯ್ದೆಯ ಪ್ರಕಾರ ರಾಜ್ಯದ ಒಟ್ಟು ಜಿಡಿಪಿಯ 3% ಒಳಗಡೆ ಇರಿಸಬೇಕು. ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ವಿತ್ತೀಯ ಕೊರತೆಯನ್ನು 3% ಮಿತಿಯೊಳಗಡೆ ಇರಿಸಲು ಸಾದ್ಯವೇ ಇಲ್ಲ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.