ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೀನಾಯ ಸೋಲು ಕಂಡಿದ್ದರೂ ಕೂಡಾ, ಕರಾವಳಿ ಜಿಲ್ಲೆಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೧೩ ಕ್ಷೇತ್ರಗಳಲ್ಲಿ ೧೧ ರನ್ನು ಗೆಲ್ಲುವ ಮೂಲಕ ಇದು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ. ಪುತ್ತೂರು ಕ್ಷೇತ್ರವನ್ನು ಬಿಜೆಪಿಯು ತನ್ನ ಒಳಜಗಳದಿಂದಲೇ ಕಳೆದುಕೊಂಡಿದ್ದು ಇದನ್ನು ಕಾಂಗ್ರೆಸ್ ನ ಸಾಧನೆ ಎನ್ನುವಂತಿಲ್ಲ. ಮಂಗಳೂರು ಕ್ಷೇತ್ರವನ್ನು ಕಾಂಗ್ರೆಸ್ ನ ಯು ಟಿ ಖಾದರ್ ಐದನೇ ಬಾರಿ ಗೆದ್ದಿರುವುದು ಅಚ್ಚರಿಯ ವಿಷಯವೇನಲ್ಲ.
ಗೆದ್ದ ಕ್ಷೇತ್ರಗಳಲ್ಲಿ, ಮಂಗಳೂರು ದಕ್ಷಿಣದ ವೇದವ್ಯಾಸ ಕಾಮತ್, ಕಾಂಗ್ರೆಸ್ ನ ಜೆಆರ್ ಲೋಬೋ ವಿರುದ್ದ ೨೫ ಸಾವಿರ ಮತಗಳ ಸುಲಭ ಜಯ ಗಳಿಸಿದ್ದಾರೆ. ಮಂಗಳೂರು ಉತ್ತರದಲ್ಲಿ ಬಿಜೆಪಿಯ ಭರತ್ ಶೆಟ್ಟಿ ಕಾಂಗ್ರೆಸ್ನ ಇನಾಯತ್ ಅಲಿ ಅವರನ್ನು ಸೋಲಿಸಿದ್ದಾರೆ. ಜೆಡಿಎಸ್ ಮೂಲಕ ಸ್ಪರ್ಧಿಸಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೋಯಿದ್ದೀನ್ ಬಾವಾ ಕೇವಲ ೫೦೦೦ ದಷ್ಟು ಮಾತ್ರ ಮತಗಳನ್ನು ಪಡೆದಿದ್ದಾರೆ.
ಉಡುಪಿಯಲ್ಲಿ ಬಿಜೆಪಿಯ ಯಶ್ಪಾಲ್ ಸುವರ್ಣ ಕಾಂಗ್ರೆಸ್ನ ಪ್ರಸಾದ್ ರಾಜ್ ಕಾಂಚನ್ ವಿರುದ್ದ ೩೦ ಸಾವಿರಕ್ಕಿಂತಲೂ ಹೆಚ್ಚಿಗೆ ಮತಗಳಿಂದ ಜಯಗಳಿಸಿದ್ದಾರೆ. ಮೂಡುಬಿದರೆಯಲ್ಲಿ ಉಮಾನಾಥ್ ಕೋಟ್ಯಾನ್ ಕಾಂಗ್ರೆಸ್ನ ಮಿಥುನ್ ರೈ ವಿರುದ್ದ ಸುಲಭ ಜಯ ಸಾಧಿಸಿದರೆ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಮತ್ತು ಬಂಟ್ವಾಳದಲ್ಲಿ ರಾಜೇಶ್ ನಾಯಕ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸುಳ್ಯದಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿ ಭಾಗೀರಥಿ ಮುರಳ್ಯ ಜಯಶಾಲಿಯಾಗಿದ್ದಾರೆ.
ಕಾರ್ಕಳದಲ್ಲಿ ಸುನೀಲ್ ಕುಮಾರ್, ಕುಂದಾಪುರದಲ್ಲಿ ಕಿರಣ್ ಕುಮಾರ್ ಕೊಡ್ಗಿ, ಮತ್ತು ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಜಯಭೇರಿ ಬಾರಿಸಿದ್ದಾರೆ. ಬೈಂದೂರಿನಲ್ಲಿ ಕಾಂಗ್ರೆಸ್ನ ಗೋಪಾಲ ಪೂಜಾರಿ ಒಡ್ಡಿದ ಪ್ರಬಲ ಸ್ಪರ್ಧೆಯ ಹೊರತಾಗಿಯೂ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳಿ ಜಯಗಳಿಸಿದ್ದಾರೆ.
ಕಾರ್ಯಕರ್ತರ ಅಸಮಾಧಾನದ ಹೊರತಾಗಿಯೂ ಬಿಜೆಪಿ ಈ ಪ್ರದೇಶದಲ್ಲಿ ಜಯ ಸಾಧಿಸಿರುವುದು ವಿಶೇಷವಾಗಿದೆ.