ಕಣ್ಣಿನ ತುರಿಕೆಯ ಸಮಸ್ಯೆ ಕೆಲವರಿಗೆ ಆಗಾಗ ಕಾಡುತ್ತಿರುತ್ತದೆ. ಇದು ಸಾಮಾನ್ಯವಾದರೂ ಮತ್ತೆ ಮತ್ತೆ ಕಾಣಿಸಿ ಕೊಂಡರೆ ಕಣ್ಣಿಗೆ ಅಪಾಯ ಆಗಲೂಬಹುದು. ಕಲುಷಿತ ವಾತಾವರಣ, ಗಾಳಿಯಲ್ಲಿ ತೂರಿಬರುವ ಧೂಳು, ಮಣ್ಣಿನ ಕಣ, ಕಣ್ಣಿನ ಸೋಂಕು ಮತ್ತು ಅಲರ್ಜಿ ಇದಕ್ಕೆ ಮುಖ್ಯ ಕಾರಣ. ಕಣ್ಣಿನ ಒಳಗೆ ಹಾಗೂ ಸುತ್ತಲೂ ಇರುವ ಕಣ್ಣಿನ ಭಾಗಗಳು ತುರಿಸುವಂತೆ ಮಾಡುತ್ತದೆ. ಕಣ್ಣಿನ ತುರಿಕೆಯನ್ನು ತಡೆಗಟ್ಟಲು ಹಲವು ದಾರಿಗಳಿವೆ. ಮುಖ್ಯವಾಗಿ ಪ್ರಕೃತಿ ಸಹಜವಾಗಿ ಲಭಿಸುವ ವಸ್ತುಗಳನ್ನು ಇದಕ್ಕೆ ಔಷಧವಾಗಿ ಬಳಸಬಹುದಾಗಿದೆ.
ಸೌತೆಕಾಯಿ: ಸೌತೆಕಾಯಿಯಲ್ಲಿ ನೈಸರ್ಗಿಕ ತಂಪು ಗುಣವಿದೆ. ಕಣ್ಣಿನ ತುರಿಕೆ, ಕಣ್ಣಿನ ಮುಖದಲ್ಲಿ ಕೆಂಪು, ಊತ ಮತ್ತು ಉರಿಯನ್ನು ನಿವಾರಿಸಲು ಸೌತೆ ಯನ್ನು ತುಂಡು ಮಾಡಿ 10ರಿಂದ 15 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ತುರಿಕೆ ಸಮಸ್ಯೆ ಕಡಿಮೆಯಾಗಬಹುದು.
ತಂಪು ಶಾಖ: ಕಣ್ಣಲ್ಲಿ ಕಾಣಿಸಿಕೊಳ್ಳುವ ತುರಿಕೆಗೆ ತಂಪು ಶಾಖ ಕೊಟ್ಟರೆ ಆರಾಮ ಪಡೆಯಲು ಸಾಧ್ಯವಾಗುತ್ತದೆ. ನೀರಿಗೆ ಕೆಲವು ತುಂಡು ಐಸ್ ಹಾಕಿ ಅದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಕಣ್ಣಿನ ಮೇಲೆ ಹಾಗೂ ಸುತ್ತ ಒತ್ತಡ ಹಾಕದೇ ಮೃದುವಾಗಿ ಇಡಬೇಕು. ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಹೀಗೆ ಮಾಡಿದರೆ ಕಣ್ಣಿನ ಸಮಸ್ಯೆ ನಿವಾರಣೆಯಾಗುವುದು.
ರೋಸ್ ವಾಟರ್: ರೋಸ್ ವಾಟರ್ ಕೇವಲ ನಿಮ್ಮ ಸೌಂದರ್ಯವನ್ನು ವೃದ್ಧಿಸುವುದರ ಜೊತೆಗೆ ಕಣ್ಣಿನ ತುರಿಕೆಯಿಂದ ಮುಕ್ತರಾಗಲು ಸಹಾಯಕವಾಗುತ್ತದೆ. ದಿನದಲ್ಲಿ ಕನಿಷ್ಠ ಎರಡು ಬಾರಿ ರೋಸ್ ವಾಟರ್ನಿಂದ ಕಣ್ಣು ತೊಳೆಯಬೇಕು. ತತ್ಕ್ಷಣದ ಪರಿಹಾರಕ್ಕಾಗಿ ಒಂದು ಹನಿ ರೋಸ್ ವಾಟರ್ ಅನ್ನು ಸೋಂಕಿತ ಕಣ್ಣಿನೊಳಗೆ ಹಾಕಬೇಕು.
ತರಕಾರಿ ಜ್ಯೂಸ್: ಕಣ್ಣಿನ ತುರಿಕೆಗೆ ಅತ್ಯಂತ ಸುಲಭದ ಹಸಿ ತರಕಾರಿ ಜ್ಯೂಸ್. ಕ್ಯಾರೆಟ್ ಮತ್ತು ಪಾಲಕ್ನಂಥ ತರಕಾರಿಗಳು ಕಣ್ಣಿನ ತುರಿಕೆಯನ್ನು ನಿವಾರಿಸುತ್ತದೆ. ಎರಡು ಕ್ಯಾರೆಟ್ನ ಜ್ಯೂಸ್ ತೆಗೆದು ದಿನದಲ್ಲಿ ಕನಿಷ್ಠ 2ಕ್ಕಿಂತ ಹೆಚ್ಚು ಬಾರಿ ಸೇವಿಸಬೇಕು. ಇದರಿಂದ ಕಣ್ಣಿನ ತುರಿಕೆ ನಿವಾರಣೆಯಾಗುತ್ತದೆ.
ಹಸಿ ಆಲೂಗಡ್ಡೆ: ಕಣ್ಣಿನ ತುರಿಕೆ ಸಮಸ್ಯೆಯನ್ನು ನಿವಾರಿಸಲು ಹಸಿ ಆಲೂಗಡ್ಡೆಯೂ ಔಷಧ ವಾಗಿದೆ. ಸೌತೆಕಾಯಿಯ ಪರಿಹಾರದಂತೆ ಆಲೂಗಡ್ಡೆಯನ್ನು ತುಂಡು ಮಾಡಿ ಎರಡರಿಂದ ನಾಲ್ಕು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಬೇಕು. ಬಳಿಕ 10ರಿಂದ 15 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟರೆ ಸಮಸ್ಯೆ ಕಡಿಮೆ ಆಗುವುದು