ಕೊಲ್ಲಂ: ಕರ್ತವ್ಯ ನಿರತ ಯುವ ವೈದ್ಯರೊಬ್ಬರನ್ನು ಶಾಲಾ ಶಿಕ್ಷಕನೊಬ್ಬ ಚಾಕುವಿನಿಂದ ಇರುದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ಕೊಲ್ಲಂನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆರೋಪಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದರು. ಆಗ ಈ ಘಟನೆ ನಡೆದಿದ್ದು ರಾಜ್ಯಾದ್ಯಂತ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯು ಕೋಟ್ಟರಕ್ಕಾರದ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ 4.30 ರ ಸುಮಾರಿಗೆ ನಡೆದಿದೆ.
ಕೊಲ್ಲಂನ ಅಜೀಜಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಅಧ್ಯಯನ ಮಾಡಿದ ಡಾ. ವಂದಾನಾ ದಾಸ್ (23) ಆಸ್ಪತ್ರೆಯಲ್ಲಿ ಇಂಟರ್ನ್ ಆಗಿದ್ದರು. ದಾಳಿಯಲ್ಲಿ ಆರೋಪಿಯು ವೈದ್ಯೆಯ ಎದೆ ಮತ್ತು ಕುತ್ತಿಗೆಗೆ ಅನೇಕ ಬಾರಿ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ವೈದ್ಯೆಯನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ.
ಕೊಟ್ಟಾಯಂ ಜಿಲ್ಲೆಯ ಉದ್ಯಮಿ ಕೆ.ಜಿ. ಮೋಹಂದಾಸ್ ಮತ್ತು ಗೃಹಿಣಿ ವಾಸಂತಕುಮಾರಿ ಅವರ ಏಕೈಕ ಪುತ್ರಿ ವಂದನಾ ದಾಸ್ ಆಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಕೆಲವು ತಿಂಗಳುಗಳ ಹಿಂದೆ, ಅಂತಿಮ ವರ್ಷದ ಎಂ.ಬಿ.ಬಿ.ಎಸ್. ಪರೀಕ್ಷೆ ಮುಗಿದ ನಂತರ, ಕುಟುಂಬವು ತಮ್ಮ ಮನೆಯ ಗೇಟ್ ಮೇಲೆ ಡಾ. ವಂದಾನಾ ದಾಸ್ ಎಂ.ಬಿ.ಬಿ.ಎಸ್ ಎಂದು ನಾಮಫಲಕವನ್ನು ಹಾಕಿತ್ತು. ತನ್ನ ಇಂಟರ್ನ್ಶಿಪ್ನ ಭಾಗವಾಗಿ, ವೈದ್ಯೆ ಗ್ರಾಮೀಣ ಆಸ್ಪತ್ರೆಯಲ್ಲಿ 84 ದಿನಗಳನ್ನು ಪೂರ್ಣಗೊಳಿಸಬೇಕಾಗಿತ್ತು ಮತ್ತು ವೈದ್ಯೆಯನ್ನು ಕೊಟ್ಟರಕಾರ ತಾಲ್ಲೂಕು ಆಸ್ಪತ್ರೆಯಲ್ಲಿ ಪೋಸ್ಟ್ ಮಾಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಮಂಜೂರ್ ಪಂಚಾಯತ್ ಸದಸ್ಯ ಟಾಮಿ ಕರುಕುಲಂ, “ನಾವೆಲ್ಲರೂ ವಂದನಾ ಬಗ್ಗೆ ಹೆಮ್ಮೆಪಡುತ್ತೇವೆ. ತನ್ನ ಅಧ್ಯಯನದಲ್ಲಿ ಅವಳು ತುಂಬಾ ಉತ್ತಮ ಸಾಧನೆ ಮಾಡಿದ್ದಳು. ಈಕೆಯ ಜೀವ ನಾಶವು ಇಡೀ ಹಳ್ಳಿಯ ನಷ್ಟವೂ ಆಗಿದೆ. ಇತ್ತೀಚೆಗೆ, ಕುಟುಂಬವು ಮಗಳ ಪರೀಕ್ಷೆ ಮುಗಿದ ನಂತರ ಸ್ಥಳೀಯ ದೇವಸ್ಥಾನದಲ್ಲಿ ವಿಶೇಷ ಅರ್ಪಣೆ ನೀಡಿತ್ತು. ಇಂಟರ್ನ್ಶಿಪ್ ನಂತರ ತಮ್ಮ ಮಗಳು ಹಿಂತಿರುಗುವುದನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದರು ಮತ್ತು ಕುತೂಹಲದಿಂದ ಕಾಯುತ್ತಿದ್ದರು”.
ಕೊಲ್ಲಮ್ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯರಾತ್ರಿಯ ಹೊತ್ತಿಗೆ ಆರೋಪಿ ಸಂದೀಪ್ ಕುಟುಂಬಸ್ಥರಿಂದ ಕರೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ಕೊಠಡಿಯ ಅಧಿಕಾರಿಗಳು ಪೂಯಪ್ಪಲ್ಲಿ ಪೊಲೀಸ್ ಠಾಣೆಗೆ ಸಂದೇಶ ರವಾನಿಸಿದರು. ಕಿರಾತಕ ಸಂದೀಪ್ ಈ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಂತೆ. ನಂತರ, ಅವನ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ 4 ಗಂಟೆ ಸುಮಾರಿಗೆ, ಸಂದೀಪ್ ತನ್ನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದಾಗ ಮತ್ತೆ ಪೊಲೀಸರ ಸಹಾಯವನ್ನು ಕೋರಿದ್ದಾರೆ.
ಸ್ಥಳೀಯ ಪೂಯಾಪ್ಪಲಿ ಬಸ್ ನಿಲ್ದಾಣದ ಪೊಲೀಸರ ತಂಡವು ಅವನನ್ನು ಇನ್ನೊಬ್ಬ ವ್ಯಕ್ತಿಯ ಮನೆಯ ಬಳಿ ಪತ್ತೆ ಮಾಡಿದೆ. ಅಗ ಆತನ ಕಾಲಿಗೆ ಗಾಯವಾಗಿದ್ದು, ಮದ್ಯದ ಅಮಲಿನಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಆತನಿಗೆ ವೈದ್ಯಕೀಯ ನೆರವು ನೀಡಲು ಆತನನ್ನು ಕೊಟ್ಟರಕ್ಕಾರದಲ್ಲಿರುವ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ ಆರ್ ಅಜಿತ್ ಕುಮಾರ್ ಅವರು ಗಾಯಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ಆತನನ್ನು ಆಸ್ಪತ್ರೆಗೆ ಕರೆತಂದಾಗ ಅವನು ಸಾಮಾನ್ಯವಾಗಿ ವರ್ತಿಸುತ್ತಿದ್ದರು. ಪರೀಕ್ಷೆಯ ನಂತರ, ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನಿಗೆ ಡ್ರೆಸ್ಸಿಂಗ್ ಮಾಡುತಿದ್ದಾಗ ಹೊರಗೆ ಹಾರಿ ತನ್ನ ಸಂಬಂಧಿ ಬಿನು ಎಂಬವವರಿಗೆ ಒದ್ದಿದ್ದಾನೆ. ನಂತರ ಕೋಣೆಯಿಂದ ಕತ್ತರಿ ತೆಗೆದುಕೊಂಡು ಜತೆಯಲ್ಲಿ ಬಂದಿದ್ದ ಹೋಮ್ ಗಾರ್ಡ್ ಗೆ ಇರಿದಿದ್ದಾನೆ” ಎಂದು ಕುಮಾರ್ ಹೇಳಿದರು.
“ಸಂದೀಪ್ ನಂತರ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಮತ್ತು ಇನ್ನೊಬ್ಬ ವ್ಯಕ್ತಿಯ ಮೇಲೂ ಹಲ್ಲೆ ನಡೆಸಿದ್ದಾನೆ. ಡ್ರೆಸ್ಸಿಂಗ್ ಕೋಣೆಯಲ್ಲಿರುವ ಉಳಿದವರೆಲ್ಲರೂ ಕೋಣೆಯಿಂದ ಹೊರಬರಲು ಯಶಸ್ವಿಯಾದರೆ, ಡಾ. ವಂಡಾನಾ ಅವರಿಗೆ ಸಾಧ್ಯವಾಗಲಿಲ್ಲ. ಸಂದೀಪ್ ನಂತರ ವೈದ್ಯರ ವಿರುದ್ಧ ತಿರುಗಿ ಅವರನ್ನು ಅನೇಕ ಬಾರಿ ಇರಿದು ಗಂಭಿರ ಗಾಯಗೊಳಿಸಿದ್ದಾನೆ.
ಪೂಯಾಪ್ಪಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಸಂದೀಪ್ಗೆ ಯಾವುದೇ ಮುಂಚಿನ ಕ್ರಿಮಿನಲ್ ದಾಖಲೆ ಇಲ್ಲ. ಅವನು ನೆದುಂಪಾನಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದು “ಅವರು ಡಿಸೆಂಬರ್ 2021 ರಲ್ಲಿ ಶಾಲೆಗೆ ವರ್ಗಾವಣೆ ಆಗಿ ಬಂದಿದ್ದು, ಈತ ಶಾಲೆಯಲ್ಲಿ ಎಲ್ಲರೊಂದಿಗೂ ಸಹಜವಾಗಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿ ಕೇರಳ ರಾಜ್ಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಸಂಘವು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.