ಬೆಂಗಳೂರು: ಸುಳ್ಯದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಪಿಎಫ್ಐ ಕಾರ್ಯಕರ್ತರ ವಿರುದ್ದ ರಾಷ್ಟ್ರೀಯ ತನಿಖಾ ದಳ (NIA) ಪೂರಕ ಆರೋಪಗಳೊಂದಿಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಮೇ 2ರಂದು ಎನ್ಐಎ ತನಿಖಾಧಿಕಾರಿಗಳು ಇತ್ತೀಚೆಗೆ ಬಂಧಿಸಲ್ಪಟ್ಟ ಮಡಿಕೇರಿ ಮೂಲದ ಎಂ.ಹೆಚ್. ತುಫೈಲ್ ಮತ್ತು ಮಹಮದ್ ಜುಬೇರ್ ಎಂಬ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮಡಿಕೇರಿ ಮೂಲದ ಪಿಎಫ್ಐ ಸಂಘಟನೆಯ ಕೊಡಗು ಜಿಲ್ಲಾ ಮಾಜಿ ಕಾರ್ಯದರ್ಶಿ ಆಗಿದ್ದ ತುಫೈಲ್ ನೆಟ್ಟಾರ್ ಅವರ ಕೊಲೆಯ ನಂತರ ತಲೆ ಮರೆಸಿಕೊಂಡಿದ್ದ. ನಂತರ ಎನ್ಐಎ ತಂಡವು ಮಾರ್ಚ್ 5 ರಂದು ಬೆಂಗಳೂರಿನ ಅಮೃತಹಳ್ಳಿಯಲ್ಲಿ ತುಫೈಲ್ ನನ್ನು ಬಂಧಿಸಿದೆ.
ಈತನ ಬಂಧನದ ನಂತರ ಪಿಎಫ್ ಐ ರಾಜ್ಯದಲ್ಲಿ ಅಶಾಂತಿ, ಕೋಮುಗಲಭೆ ಮತ್ತು ಭಯ ಸೃಷ್ಟಿಸುವ ಪಿಎಫ್ಐ ನ ಪಿತೂರಿಯು ಬೆಳಕಿಗೆ ಬಂದಿತ್ತು. ಅಲ್ಲದೆ 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಪಿಎಫ್ಐ ಕಾಯಸೂಚಿಯನ್ನು ಹೊಂದಿರುವ ಬಗ್ಗೆ ಮಾಹಿತಿ ಹೊರಬಂದಿತು.
ತನ್ನ ಗುರಿ ಸಾಧಿಸಲು ಪಿಎಫ್ಐ ಹಿಟ್ ಸ್ಕ್ವಾಡ್ ಗಳನ್ನು ರಚಿಸಿಕೊಂಡಿದ್ದು, ಶಸ್ತ್ರಾಸ್ತ್ರ ಬಳಕೆ , ಕರಾಟೆ ಯುದ್ದ ಕಲೆಯಲ್ಲಿ ಪರಿಣಿತನಾಗಿದ್ದ ತುಫೈಲ್ ʼಪಿಎಫ್ ಐ ನ ಮಾಸ್ಟರ್ ಟ್ರೈನರ್ʼ ಆಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇಬ್ಬರು ಆರೋಪಿಗಳ ವಿರುದ್ದ ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಘಟನೆ:
ಕಳೆದ ವರ್ಷದ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಈ ಕೊಲೆ ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು.
2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಗುರಿಯೊಂದಿಗೆ ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಮತ್ತು ಇತರ ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸುವ ಉದ್ದೇಶದಿಂದ ನೆಟ್ಟಾರ್ ರನ್ನು ರಸ್ತೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಪ್ರವೀಣ್ ಅವರ ಮೇಲೆ ಆರೋಪಿಗಳಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ ಬದಲಾಗಿ ತಮ್ಮ ಉಗ್ರ ಕಾರ್ಯಸೂಚಿಯ ಅನುಷ್ಠಾನದ ಭಾಗವಾಗಿ ಈ ಹತ್ಯೆ ನಡೆಸಲಾಗಿತ್ತು ಎಂಬ ಮಾಹಿತಿ ಮೇರೆಗೆ ಈ ಕೊಲೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಗಿತ್ತು.
ಈ ಕೊಲೆಯಲ್ಲಿ ಒಟ್ಟು 21 ಆರೋಪಿಗಳು ಭಾಗಿಯಾಗಿದ್ದು ಎಲ್ಲರ ವಿರುದ್ದವೂ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಜನವರಿ 23 ರಂದು ಎನ್ಐಎ ಮುಖ್ಯ ಆರೋಪ ಪಟ್ಟಿ ಸಲ್ಲಿಸಿತ್ತು