ಮತದಾನ ನಮ್ಮೆಲ್ಲರ ಹಕ್ಕು ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವು ಕೂಡ. ನಮ್ಮ ದೇಶ, ರಾಜ್ಯದ ಭವಿಷ್ಯವನ್ನು ಸರಿಯಾದ ವೈಕ್ತಿಯ ಕೈಯಲ್ಲಿ ನೀಡುವ ಬಲು ದೊಡ್ಡ ಜವಾಬ್ದಾರಿಯು ನಮ್ಮದಾಗಿದೆ. ನಮ್ಮನ್ನು ಆಳುವ ನಾಯಕನನ್ನು ಚುನಾಯಿಸಿ ಗದ್ದುಗೆಯಲ್ಲಿ ಕುರಿಸುವುದೇ ದೊಡ್ಡ ಹಬ್ಬ. ಈ ಭಾರಿಯ ಹಬ್ಬ ಮೇ 10 ರಂದು ರಾಜ್ಯದ್ಯಾಂತ ನಡೆಯಲಿದೆ.
ಚುನಾವಣೆಯ ಕುರಿತಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಧಾರವಾಡದ ಕೆಲಗೇರಿಯ ಮಂಜುನಾಥ ಹೀರೆಮಠರವರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ಅಭಿಯಾನವನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.
ಅಲ್ಲಿನ ಜನರಿಗೆ ಇವರು ಪರಿಸರ ಸ್ನೇಹಿ ಗಣಪತಿ ಮಾಡುವ ಮಂಜುನಾಥ ಎಂದು ಚಿರಪರಿಚಿತ. ಇವರ ಮತದಾನ ಜಾಗೃತಿ ಕಾರ್ಯವು ಕೊಂಚ ಭಿನ್ನವಾಗಿದೆ. ತನ್ನದೇ ಸ್ಕೂಟರ್ ಮುಂದೆ ಮತದಾನ ಮಾಡುವ ಇವಿಎಂನ ಮಾದರಿಯನ್ನು ಮತ್ತು ಮತದಾನದ ದಿನಾಂಕವನ್ನು ನಮೂದಿಸಿಕೊಂಡು ಜನ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ‘ತಪ್ಪದೇ ಮತದಾನ ಮಾಡಿ’ , ‘ಮತ ನಮ್ಮ ಹಿತ’ ಹೀಗೆ ಸ್ಲೋಗನ್ ಹಾಕಿಕೊಂಡು ಸಂಚರಿಸುತ್ತಾರೆ.
ಇದರ ಬಗ್ಗೆ ಖುದ್ದಾಗಿ ಮಂಜುನಾಥ್ ಹೀರೆಮಠರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಚಿತ್ರಗಳನ್ನು ಮತ್ತು ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. “100% ಮತದಾನವೇ ನಮ್ಮೆಲ್ಲರ ಗೆಲುವು” ಯಾರೇ ಸೋಲಲಿ ಅಥವಾ ಗೆಲ್ಲಲಿ ಮತದಾನ ಮಾಡಿ ನಾವೆಲ್ಲರೂ ಗೆಲ್ಲಲೇಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
2013ರಿಂದ ನಡೆದ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ. ಈ ಭಾರಿಯ ಚುನಾವಣೆಗೆ ಇವರ ಇಬ್ಬರು ಮಕ್ಕಳು ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದಿರುತ್ತಾರೆ ಹಾಗೂ ಮಕ್ಕಳಿಬ್ಬರು ಮತದಾನ ಜಾಗೃತಿಯ ಕಾರ್ಯದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಎರಡು ದಿನಗಳಲ್ಲಿ ನಮ್ಮೆಲ್ಲರ ಮುಂದೆ ಈ ಬಾರಿಯ ಜಾಗೃತಿ ಕಾರ್ಯದೊಂದಿಗೆ ಬರುವುದಾಗಿ ಹಾಗೂ ಯಾವುದೇ ಆಮೀಷಗಳಿಗೆ ಒಳಗಾಗದೆ ಮತವನ್ನು ಚಲಾಯಿಸುವಂತೆ ವಿನಂತಿಸಿದ್ದಾರೆ. ಇವರ ಈ ಪ್ರಯತ್ನವು ಪ್ರಾಮಾಣಿಕವಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಸಾಕಷ್ಟು ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ.