ಧಾರವಾಡ: ಅತ್ಯಂತ ಬಲಿಷ್ಟ ಹೈಕಮಾಂಡ್ ಇರುವ ಬಿಜೆಪಿಗೆ ಜಗದೀಶ್ ಶೆಟ್ಟರ್ನ ನಡೆ ನಿಜಕ್ಕೂ ಆಶ್ಚರ್ಯಕ್ಕೀಡು ಮಾಡಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವಿಷಯ ಬಿಜೆಪಿ ಪಾಳಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿದೆ.
ಪರಿಣಾಮ ಲಿಂಗಾಯತರ ಪ್ರಾಬಲ್ಯದ ಪಕ್ಷ ಎನ್ನುವ ಹಣೆಪಟ್ಟಿ ಹೊತ್ತ ಬಿಜೆಪಿ ಕೂಡಲೇ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹಾಗೂ ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾಧ್ಯಮಗಳ ಮುಂದೆ ಬರುವಂತೆ ಮಾಡಿ, ಲಿಂಗಾಯತರು ಬಿಜೆಪಿ ಜೊತೆಗೆಯೇ ಇರಲಿದ್ದಾರೆ ಎನ್ನುವ ಸಂದೇಶ ಸಾರಲು ಪ್ರಯತ್ನಿಸುತ್ತಿದೆ.
ಒಟ್ಟಾರೆ ಲಿಂಗಾಯತ ಸಮುದಾಯ ಮತ್ತು ನಾಯಕರು ಬಿಜೆಪಿಗೆ ಎಷ್ಟು ಮುಖ್ಯ ಇದ್ದಾರೆ ಎಂಬುದು ಯಡಿಯೂರಪ್ಪ, ನಂತರ ಇದೀಗ ಜಗದೀಶ್ ಶೆಟ್ಟರ್ ಮೂಲಕ ಬಿಜೆಪಿಗೆ ಪ್ರತಿಫಲನವಾಗುವ ಎಲ್ಲ ಲಕ್ಷಣಗಳು ಸದ್ಯ ಎದ್ದು ಕಾಣುತ್ತಿವೆ.
ಜಗದೀಶ ಶೆಟ್ಟರ್ಗೆ ಟಿಕೆಟ್ ಕೈತಪ್ಪಲು ಪ್ರಹ್ಲಾದ್ ಜೋಶಿ ಹಾಗೂ ಬಿ. ಎಲ್. ಸಂತೋಷ ನೇರ ಕಾರಣ ಎಂಬ ಗುಮಾನಿ ಎಲ್ಲೆಡೆ ಹಬ್ಬಿದೆ. ಈ ಕಾರಣದಿಂದ ಬ್ರಾಹ್ಮಣ ಮತ್ತು ಲಿಂಗಾಯತರ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.
ಆದರೆ ಆರು ಬಾರಿ ಶಾಸಕ ಹಾಗೂ ಒಂದು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಎರಿದ್ದ ಜಗದೀಶ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕ್ಷೇತ್ರದ ಜನರು ಹೊಸ ಮುಖವನ್ನು ಬಯಸಿದ್ದರು ಎಂದೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಜಾತಿ ರಾಜಕಾರಣ ಗೆಲ್ಲಲಿದೆಯೋ ಅಥವಾ ಜನರ ಅಭಿವೃದ್ಧಿ ಅಪೇಕ್ಷೆ ಗೆಲ್ಲಲಿದೆಯೋ ಕಾದು ನೋಡಬೇಕಿದೆ