ಬೆಂಗಳೂರು: ದಿನೇ ದಿನೇ ಏರುತ್ತಿರುವ ಕಾಫಿಯ ಉತ್ಪಾದನಾ ವೆಚ್ಚ , ರೋಗ ಬಾಧೆ , ಹವಾಮಾನ ವೈಪರೀತ್ಯದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಇದೀಗ ರೊಬಸ್ಟಾ ಕಾಫಿ ದರ ಏರಿಕೆ ಆಗುತ್ತಿರುವುದು ಕೊಂಚ ನೆಮ್ಮದಿ ನೀಡಿದೆ.
ಬುಧವಾರ ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಯಲ್ಲಿ 50 ಕೆಜಿ ರೊಬಸ್ಟಾ ಚೆರಿ ಕಾಪಿ ದರ 6050 ರೂಪಾಯಿಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ಸುಮಾರು ಆರು ತಿಂಗಳಿನಿಂದ ರೊಬಸ್ಟಾ ನಿಧಾನವಾಗಿ ಆದರೆ ಧೃಢವಾಗಿ ಏರಿಕೆ ದಾಖಲಿಸುತ್ತಲೇ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್ ವರ್ಕ್ಸ್ ನ ವ್ವವಸ್ಥಾಪಕ ಪಾಲುದಾರ ನಿತಿನ್ ಗೌಡ ಅವರು ಬುಧವಾರ ನಾವು ಔಟರ್ನ್ 27 ಇದ್ದ ಕಾಫಿಗೆ ಸುಮಾರು 6000-6050ರ ವರೆಗೂ ಬೆಲೆ ನೀಡಿ ಖರೀದಿಸಿದ್ದೇವೆ ಎಂದರಲ್ಲದೆ ಮುಂದಿನ ದಿನಗಳಲ್ಲೂ ಬೆಲೆ ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ಹೇಳಿದರು.
ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀನ್ಸ್ ಟನ್ಗೆ 2,411 ಡಾಲರ್ ಆಸುಪಾಸಿನಲ್ಲಿ ಮಾರಾಟವಾಗಿದೆ. ಪರಿಣಾಮ ಸ್ಥಳೀಯ ಕಾಫಿ ಮಾರುಕಟ್ಟೆಯಲ್ಲೂ ಧಾರಣೆ ಮತ್ತು ಬೇಡಿಕೆ ಹೆಚ್ಚಳವಾಗಿದೆ. ವಿಶ್ವದಲ್ಲಿ ರೊಬಸ್ಟಾ ಕಾಪಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ವಿಯಟ್ನಾಂ ಇದ್ದು ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಮೂರನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದ್ದು ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.
ಬ್ರೆಜಿಲ್ ನಲ್ಲಿ ತೀವ್ರ ಹಿಮಪಾತದ ಕಾರಣ ಕಾಫಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಬ್ರೆಜಿಲ್ನಲ್ಲಿ ಸರಾಸರಿ ಕಾಫಿ ಉತ್ಪಾದನೆಯು ವರ್ಷಕ್ಕೆ 60 ಮಿಲಿಯನ್ ಚೀಲಗಳು (60 ಕೆಜಿಯ ಚೀಲ) ಆಗಿದೆ. ಆದರೆ ಈ ವರ್ಷ ಉತ್ಪಾದನೆಯು 50 ಮಿಲಿಯನ್ ಚೀಲಗಳಿಗೆ ಕುಸಿದಿದೆ. ಸುಗ್ಗಿಯ ನಂತರದ ಅವಧಿಯಲ್ಲಿ ಆ ದೇಶದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
“ಆದಾಗ್ಯೂ, ಪ್ರಸ್ತುತ ಬೆಲೆ ಏರಿಕೆಯು ದೇಶದ ಕಾಫಿ ರೈತರಿಗೆ ಪ್ರಯೋಜನವಾಗುವುದಿಲ್ಲ ಏಕೆಂದರೆ ಕಾಫಿ ಬೆಳೆಗಾರರು ಈಗಾಗಲೇ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ” ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (KGF) ಅದ್ಯಕ್ಷರಾದ ಡಾ. ಹೆಚ್. ಟಿ. ಮೋಹನ್ ಅವರು ತಿಳಿಸಿದರು. ರಾಜ್ಯ ಸರ್ಕಾರವು ಕಾಫಿ ಬೆಲೆಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಬರಬೇಕೆಂದು ಅವರು ಒತ್ತಾಯಿಸಿದರು.
ಕೇರಳ ರಾಜ್ಯ ಸರ್ಕಾರವು ಕಾಫಿಗೆ ಕಿಲೋಗೆ 90 ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಿದೆ ಆದರೆ ಒಬ್ಬ ಬೆಳೆಗಾರನಿಂದ ಕೇವಲ ಒಂದು ಎಕರೆಯಷ್ಟು ಬೆಳೆಗೆ ಮಾತ್ರ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದರೆ ಪ್ರಸ್ತುತ ಕಾಫಿ ದರವು ಕಿಲೋಗೆ 120 ರೂಪಾಯಿ ತಲುಪಿದ್ದು ಸರ್ಕಾರದ ಬೆಂಬಲ ಬೆಲೆಗೆ ಯಾರೂ ಕಾಫಿಯನ್ನು ನೀಡುತ್ತಿಲ್ಲ.
ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಸೋಮವಾರಪೇಟೆಯ ಕಾಫಿ ವರ್ತಕ ರಾಜೀವ್ ಕುಶಾಲಪ್ಪ ಅವರು ಕಾಫಿ ಕೊಯ್ಲು ಆದ ಕೂಡಲೇ ಇಟ್ಟುಕೊಳ್ಳಲು ಸ್ಥಳಾವಕಾಶ ಇಲ್ಲದೆ ಮತ್ತು ಹಣದ ಅಗತ್ಯತೆಯಿಂದಾಗಿ ಬಹುತೇಕ ಶೇಕಡಾ 9೦ ರಷ್ಟು ಬೆಳೆಗಾರರು ಚೀಲಕ್ಕೆ 5೦೦೦ ರೂಪಾಯಿ ದರ ಇದ್ದಾಗಲೇ ಮಾರಾಟ ಮಾಡಿದ್ದಾರೆ. ಈಗ ದರ ಏರಿಕೆ ಆಗಿದ್ದರೂ ಬೆಳೆಗಾರರಿಗೆ ಹೆಚ್ಚಿನ ಲಾಭವೇನೂ ಆಗುತ್ತಿಲ್ಲ , ಆದರೆ ಏರಿಕೆ ಧೃಢವಾಗಿದ್ದು ಮುಂದಿನ ವಾರಗಳಲ್ಲೂ ಹೆಚ್ಚಿನ ದರ ಏರಿಳಿತ ಇರುವ ಸಾದ್ಯತೆ ಕಡಿಮೆ ಎಂದು ಹೇಳಿದರು. ಮುಂದಿನ ವರ್ಷವೂ ಈ ಏರುಮುಖ ದರ ಮುಂದುವರಿಯುವ ಸಾದ್ಯತೆ ಜಾಸ್ತಿ ಇದೆ ಎಂದು ಹೇಳಿದರು.