ಸಾಮಾನ್ಯವಾಗಿ ಹೆರಿಗೆ ಆದ ನಂತರ ಬಹುತೇಕ ತಾಯಂದಿರು ಕೆಲಬಗೆಯ ನೇತ್ಯಾತ್ಮಕ ಭಾವನೆಗಳನ್ನು ಅನುಭವಿಸುತ್ತಾರೆ. ಇದೇ ಹೆರಿಗೆ ನಂತರದ ಖಿನ್ನತೆ. ಅದರಲ್ಲೂ ಮೊದಲನೇ ಹೆರಿಗೆಯ ನಂತರ ಇಂತಹ ಖಿನ್ನತೆ ಕಾಡುತ್ತದೆ. ಕೆಲವು ಸ್ತ್ರೀಯರು ಅಸಂತೃಪ್ತಿ ಹಾಗೂ ಬೇಸರದ ಭಾವಗಳನ್ನು ತೋರ್ಪಡಿಸುತ್ತಾರೆ. ಈ ಖಿನ್ನತೆ ದೀರ್ಘಕಾಲದ ವರೆಗೆ ಇರುವುದಿಲ್ಲ. ಹೆಚ್ಚೆಂದರೆ ಒಂದು ತಿಂಗಳ ಒಳಗಾಗಿ ಬಾಣಂತಿಯರೂ ಯಥಾಸ್ಥಿತಿಗೆ ಮರಳುತ್ತಾರೆ. ಆತ್ಮಹತ್ಯೆಯಂತಹ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಬೇರೆ ಬೇರೆ ಸಮಸ್ಯೆಗಳು ಕಾರಣವಾಗಬಹುದು. ಅದರತ್ತಲೂ ಕುಟುಂಬಸ್ಥರು ಗಮನಹರಿಸಬೇಕು.
ಬಾಣಂತಿಯ ಭಾವನೆ ಮತ್ತು ಖಿನ್ನತೆ
ಹಿಂದಿನಿಂದಲೂ ಮಗು ಮತ್ತು ಬಾಣಂತಿಯ ಆರೈಕೆ ಎಲ್ಲರಿಗೂ ನಮ್ಮ ಸಮಾಜದಲ್ಲಿ ಮುಖ್ಯವಾಗಿದೆ. ಬಾಣಂತಿಯರಿಗೆ ಸಾಕಷ್ಟು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಲಾಗುತ್ತದೆ. ಬಹುತೇಕ ತಾಯಂದಿರು ತಮ್ಮ ಮಕ್ಕಳ ಹಾಗೂ ನವಜಾತ ಶಿಶುಗಳ ಕಾಳಜಿಯನ್ನು ಚೆನ್ನಾಗಿ ವಹಿಸುತ್ತಾರೆ. ಮನೆಗೆ ಮಗುವೊಂದು ಬಂತೆಂದರೆ ಎಲ್ಲರೂ ಸಂಭ್ರಮ ಮತ್ತು ಸಡಗರ. ಅದನ್ನು ನೋಡಿದಾಗಲೇ ಗೊತ್ತಾಗುತ್ತದೆ. ಬಾಣಂತಿ ಮತ್ತು ಮಗುವನ್ನು ನೋಡಲು ಬಂಧುಮಿತ್ರರ ಪಡೆಯೇ ಮನೆಗೆ ಇಳಿಯುತ್ತದೆ. ಎಲ್ಲರೂ ತಾಯಿ ಮತ್ತು ಮಗುವಿನ ಬಗೆಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ಖಿನ್ನತೆ ಮತ್ತು ದುರಂತ ಘಟನೆಗಳ ಪ್ರಮಾಣ ನಮ್ಮ ದೇಶದಲ್ಲಿ ಶೇಕಡಾ 22ರಷ್ಟಿದೆ ಎಂದು ವಿಶ್ವಆರೋಗ್ಯ ಸಂಸ್ಥೆ ಹೇಳಿದೆ.
ಖಿನ್ನತೆ ಬಾಣಂತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ. ಮನಸ್ಸಿನ ಸ್ಥಿತಿಯನ್ನು ಸದಾದುಃಖ ಹಾಗೂ ಒಂಟಿತನದಿಂದ ಬಳಲುವಂತೆ ಮಾಡುತ್ತದೆ. ನಿಜವಾಗಿಯೂ ಯಾವುದೇ ಕೆಲಸದಲ್ಲಿ ಸಂತೋಷ ಅನುಭವಿಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ.
ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು
ಮಗುವಿಗೆ ಜನ್ಮ ನೀಡಿದ ಬಳಿಕ ತೀವ್ರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳು ತಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಗ ಇಂತಹ ಬದಲಾವಣೆಗಳು, ಭಾವನೆಗಳು ಮತ್ತು ಸವಾಲುಗಳು ಸಹಜ.ನಿದ್ರಾಹೀನತೆ, ಕಾರಣವಿಲ್ಲದೇ ಆಗಾಗ್ಗೆ ಅಳುವುದು, ಖಿನ್ನ ಮನಸ್ಥಿತಿ, ನಿತ್ರಾಣ, ಉದ್ವೇಗ, ಆಹಾರ ಸೇವನಾ ಕ್ರಮದಲ್ಲಿ ಬದಲಾವಣೆ ಇವೇ ಮೊದಲಾದವು ಹೆರಿಗೆ ನಂತರದ ಖಿನ್ನತೆಯ ಕೆಲವು ಲಕ್ಷಣಗಳಾಗಿವೆ. ಇವು ಬಹುಕಾಲ ಇರುವುದಿಲ್ಲ. ಕೆಲವರು ಬೇಗನೇ ಇಂತಹ ಲಕ್ಷಣಗಳಿಂದ ಹೊರಬರುತ್ತಾರೆ. ಇನ್ನೂ ಕೆಲವರಿಗೆ ಇವುಗಳಿಂದ ಹೊರಬರಲು ಸ್ವಲ್ಪ ಸಮಯ ಹಿಡಿಯುತ್ತದೆ.
ಹೆರಿಗೆ ನಂತರ ಖಿನ್ನತೆಗೆ ಒಳಗಾಗುವವರು ಪದೇ ಪದೇ ಕಣ್ಣೀರು ಹಾಕುತ್ತಾರೆ ಅಥವಾ ದುಃಖಿಸುತ್ತಾರೆ; ಹೆಚ್ಚು ಕೋಪದಲ್ಲಿರುತ್ತಾರೆ; ಮನೆಯವರೊಂದಿಗೆ ಚಿಕ್ಕ- ಚಿಕ್ಕ ವಿಷಯಕ್ಕೆ ಕಿರಿಕಿರಿ ಮಾಡಿಕೊಳ್ಳುತ್ತಾರೆ; ಸದಾ ಅನಗತ್ಯವಾಗಿ ಒಂದಲ್ಲ ಒಂದು ಯೋಚನೆ ಮಾಡುತ್ತಿರುತ್ತಾರೆ; ಮೊದಲು ಊಟ ಬೇಕು ಎನ್ನುವುದು ಮತ್ತು ಊಟ ತಂದುಕೊಟ್ಟರೆ ಈಗ ಬೇಡ ಆಗ ಬೇಡ ಎಂದು ತಿರಸ್ಕರಿಸುತ್ತಾರೆ; ಎಲ್ಲ ವಿಷಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು; ತಾವೊಬ್ಬರೇ ಏಕಾಂಗಿಯಾಗಿರಲು ಬಯಸುವುದು; ಏನೂ ಆಗದಿದ್ದರೂ ಏನೋ ಆಗುತ್ತದೆ ಭಯ ಪಡುವುದು ಮತ್ತು ಮಗುವಿಗೆ ಹಾಲು ಕೊಡಲು ನಿರಾಕರಿಸುತ್ತಾರೆ. ತಾಯಿಯಿಂದ ಅಗತ್ಯವಿರುವ ಕಾಳಜಿ ಮಗುವಿಗೆ ಸಿಗದೇ ಇದ್ದಾಗ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಊಟ ಮಾಡದೇ ತಾಯಿಎದೆ ಹಾಲು ಕಡಿಮೆ ಆದಾಗ ಮಗುವಿನ ಆರೋಗ್ಯದ ಮೇಲೆ ಅದು ಪರಿಣಾಮ ಬೀರಬಹುದು. ಏಕೆಂದರೆ ಹುಟ್ಟಿದ ಮೊದಲ ಕೆಲವು ತಿಂಗಳು ಮಗುವಿಗೆ ತಾಯಿಯ ಹಾಲೇ ಮುಖ್ಯಆಹಾರ. ಇಂತಹ ಸೂಕ್ಷ್ಮ ಸಮಯದಲ್ಲಿ ಬಾಣಂತಿ ಮತ್ತು ಮಗುವನ್ನು ಮನೆಯಲ್ಲಿ ನೋಡಿಕೊಳ್ಳುವವರ ಪಾತ್ರ ಬಹಳ ಪ್ರಮುಖವಾಗುತ್ತದೆ. ಬಾಣಂತಿಯ ತಾಯಿ, ಗಂಡ ಅಥವಾ ಹತ್ತಿರದಲ್ಲಿ ಯಾರು ಆಕೆಯ ಆರೈಕೆ ಮಾಡುತ್ತಾರೆಯೋ ಅವರು ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಕಾಳಜಿ ವಹಿಸಬೇಕು.
ಆಕೆಯೊಡನೆ ಮುಕ್ತವಾಗಿ ಮಾತಾಡಿ ಧೈರ್ಯ ತುಂಬಬೇಕು. ಆಕೆ ಕೋಪ ಮಾಡಿಕೊಂಡರೆ ಸಹನಶೀಲರಾಗಿ ನಡೆದುಕೊಳ್ಳಬೇಕು. ಆಕೆಯ ಲಕ್ಷಣಗಳು ಗಂಭೀರವಾಗಿದ್ದರೆ ವೈದ್ಯರ/ಮನೋವೈದ್ಯರ ಬಳಿ ಕರೆದೊಯ್ಯಬೇಕು. ಚಿಕಿತ್ಸೆ/ಆಪ್ತ ಸಲಹೆ ಕೊಡಿಸಬೇಕು. ಬಾಣಂತಿಯ ಜೊತೆಗೆ ಸದಾ ಇರಬೇಕು. ಆಕೆಯನ್ನು ಒಂಟಿಯಾಗಿ ಇರಲು ಬಿಡಬಾರದು. ಖಿನ್ನತೆಗೆ ಶಮನಕಾರಿಗಳು ಹಾಗೂ ಇತರೆ ಔಷಧಿಗಳನ್ನು ಈ ಸಮಸ್ಯೆ ನಿವಾರಣೆಗೆ ಸೂಚಿಸಲಾಗುತ್ತದೆ.
ಆಯುರ್ವೇದದಲ್ಲಿ ಚಿಕಿತ್ಸೆ
ಆಯುರ್ವೇದದಲ್ಲಿ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯ ಇದೆ. ಬ್ರಾಹ್ಮಿ, ಜ್ಯೋತಿಷ್ಮತಿ, ಅಶ್ವಗಂಧ, ಶತಾವರಿ ಔಷಧಿಗಳ ಜೊತೆಗೆ ಆಹಾರದಲ್ಲಿ ಕೂಡ ಒಂದೆಲಗ, ನೀರು ಬ್ರಾಹ್ಮಿ, ಚಕ್ರಮುನಿ ಸೊಪ್ಪುಗಳಿಂದ ತಯಾರಿಸಿದ ಸಾರು, ತಂಬುಳಿ, ಪಲ್ಯಗಳ ಸೇವನೆಯಿಂದ ಹಿತವಾಗುತ್ತದೆ. ಪಂಚಕರ್ಮ ಚಿಕಿತ್ಸೆಯಲ್ಲಿ ಶಿರೋಧಾರಾ, ನಸ್ಯಚಿಕಿತ್ಸೆ, ಶಿರೋಪಿಚು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಮನಸ್ಸಿಗೆ ನೆಮ್ಮದಿ ಉಂಟುಮಾಡುತ್ತವೆ. ಹೀಗೆ ಸೂಕ್ತ ಔಷಧೋಪಚಾರ, ಆಪ್ತ ಸಲಹೆ ಮತ್ತು ಮನೆಯವರ ಪ್ರೀತಿ ಮತ್ತು ಆರೈಕೆಗಳಿಂದ ಬಾಣಂತಿ ಹೆರಿಗೆ ನಂತರ ಉಂಟಾಗುವ ಖಿನ್ನತೆಯಿಂದ ಬಹುಬೇಗ ಹೊರಬರಬಹುದು. ಮಗುವಿನ ಲಾಲನೆ ಪಾಲನೆಯಲ್ಲಿ ದೃಷ್ಟಿ ಹರಿಸಬಹುದು.