‘ಥಿಂಕ್ ಬಿಗ್’ ಅನ್ನುವುದು ಒಂದು ಅದ್ಭುತವಾದ ಕಾನ್ಸೆಪ್ಟ್! “ಏನು ಮಾಡಿದರೂ ಬಹಳ ದೊಡ್ಡದಾಗಿ ಯೋಚಿಸು ಮತ್ತು ದೊಡ್ಡದಾಗಿ ಅನುಷ್ಠಾನ ಮಾಡು” ಎಂದು ಅರ್ಥ ಮಾಡಿಕೊಂಡವರು ಜೀವನದಲ್ಲಿ ಮಹಾ ಯಶಸ್ಸು ಪಡೆಯುತ್ತಾರೆ. ಅಂತಹವರ ಸಾಲಿನಲ್ಲಿ ನಿಲ್ಲುವ ಮೇರು ಹೆಸರು ಡಾಕ್ಟರ್ ಆರ್. ಎನ್. ಶೆಟ್ಟಿ ಅವರದ್ದು.
ಅವರು ಶೂನ್ಯದಿಂದ ಉದ್ಯಮಗಳ ಸಾಮ್ರಾಜ್ಯವನ್ನು ಕಟ್ಟಿದ ಅಸೀಮ ಸಾಹಸಿ!
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಎಂಬ ಪುಟ್ಟದಾದ ಗ್ರಾಮಕ್ಕೆ ಅಷ್ಟೊಂದು ದೊಡ್ಡದಾದ ಹೆಸರು ಮತ್ತು ಕೀರ್ತಿ ಬರಲು ಕಾರಣ ಅವರು. ಒಂದು ಸಾಮಾನ್ಯ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಅವರ ತಂದೆ ಮುರುಡೇಶ್ವರ ದೇವಾಲಯದ ಮೊಕ್ತೇಸರ ಆಗಿದ್ದರು. ಕೇವಲ ಪ್ರೌಢ ಶಾಲೆಯ ಶಿಕ್ಷಣವನ್ನು ಮುಗಿಸಿದ ಅವರು ಶಿರಸಿಯಲ್ಲಿ ಒಬ್ಬ ಸಣ್ಣ ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿದವರು. ಹಲವು ಪಾಲುದಾರರನ್ನು ಸೇರಿಸಿಕೊಂಡು 1967ರಲ್ಲಿ ಆರ್. ಎನ್. ಶೆಟ್ಟಿ ಪಾಲುದಾರ ಕಂಪೆನಿಯನ್ನು ಸಣ್ಣದಾಗಿ ಆರಂಭ ಮಾಡಿದರು. ಮೊದಲಾಗಿ ಬೆಳಗಾವಿಯಲ್ಲಿ ಹಿಡಕಲ್ ಅಣೆಕಟ್ಟನ್ನು ನಿರ್ಮಿಸಲು ಮುಂದಾದಾಗ ಅನುಭವದ ಕೊರತೆಯಿಂದ ಭಾರೀ ನಷ್ಟ ಅನುಭವಿಸಿದರು. ನಂತರ ಪಾಲುಗಾರಿಕೆಯಿಂದ ಹೊರಬಂದು ಸ್ವಂತ ಉದ್ಯಮ ಶುರು ಮಾಡಿದರು. ತಮ್ಮ ತಪ್ಪುಗಳಿಂದ ಪಾಠ ಕಲಿತರು.
ಆರಂಭದಲ್ಲಿ ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿ ಮೂರು ಸೇತುವೆ ನಿರ್ಮಾಣ ಮಾಡಿದರು. ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಕಾರಣ ಅವರಿಗೆ ಭಾರೀ ಹೆಸರು ಬಂದಿತು. ವಾರಾಹಿ ಜಲ ವಿದ್ಯುತ್ ಯೋಜನೆಯು ಏಷ್ಯಾದಲ್ಲಿ ವಿನೂತನ ಎಂಬ ಹೆಸರು ಪಡೆಯಿತು. ಕೃಷ್ಣಾ ನದಿ ಮೇಲ್ದಂಡೆ ಯೋಜನೆಯ ಕಾಮಗಾರಿ ಭಾರೀ ಯಶಸ್ಸು ಕಂಡಿತು. ಕೊಂಕಣ ರೈಲ್ವೆ ಯೋಜನೆಯ ಹದಿನೆಂಟು ಸುರಂಗಗಳನ್ನು ಅವರು ಪೂರ್ತಿ ಮಾಡಿದರು. ಯಾವ ತಾಂತ್ರಿಕ ಶಿಕ್ಷಣವನ್ನು ಪಡೆಯದ ಶೆಟ್ಟರು ಅಣೆಕಟ್ಟು, ಕಾಲುವೆ, ಸೇತುವೆ, ಸುರಂಗ, ರಾಷ್ಟ್ರೀಯ ಹೆದ್ದಾರಿ, ಕಟ್ಟಡ ಸಂಕೀರ್ಣ ಎಲ್ಲವನ್ನೂ 100% ಕ್ಷಮತೆಯ ಜೊತೆಗೆ ಪೂರ್ತಿ ಮಾಡಿದರು! ಎಲ್ಲಾ ಕಡೆ ಗೆದ್ದರು.
ಉದ್ಯಮಶೀಲ ಮನಸ್ಸು ಸಣ್ಣ ಸಣ್ಣ ಸಾಧನೆಗಳಿಂದ ತೃಪ್ತಿ ಪಡೆಯುವುದೇ ಇಲ್ಲ! ಹಾಗೆಯೇ ನಮ್ಮ ಶೆಟ್ಟರು ಮುಂದೆ ಹೊಟೇಲು ಉದ್ಯಮವನ್ನು ಪ್ರವೇಶ ಮಾಡಿದರು. ಬೆಂಗಳೂರಿನಲ್ಲಿ ನವೀನ್ ಹೋಟೆಲ್ಸ್ ಎಂಬ ಪಂಚತಾರಾ ಹೋಟೆಲ್ ಅವರಿಂದ ಜನ್ಮ ತಾಳಿತು. ಮುರುಡೇಶ್ವರದಲ್ಲಿ ನವೀನ್ ಹೋಟೆಲ್ಸ್, ಯಾತ್ರಿ ನಿವಾಸ ಯೋಜನೆ ಪೂರ್ತಿ ಮಾಡಿದರು. 1977ರಲ್ಲಿ ಮುರುಡೇಶ್ವರದಲ್ಲಿ ಬೃಹತ್ ಆದ ಮಂಗಳೂರು ಹಂಚಿನ ಕಾರ್ಖಾನೆಯನ್ನು ಸ್ಥಾಪನೆ ಮಾಡಿದರು. ಒಂದು ದಿನಕ್ಕೆ 40,000 ಹಂಚು ಉತ್ಪಾದನೆ ಮಾಡುವ ಈ ಕಾರ್ಖಾನೆ ಮುಂದೆ ದೊಡ್ಡದಾಗಿ ಬೆಳೆಯಿತು. ಅದರ ನಂತರ ಫ್ಯಾಬ್ರಿಕೇಶನ್ ಉದ್ಯಮಕ್ಕೆ ಅವರು ಪ್ರವೇಶ ಮಾಡಿದರು. ಅಲ್ಲಿಯೂ ಹೆಜ್ಜೆಗುರುತು ಮೂಡಿಸಿದರು. ಮುಂದೆ 1987ರ ಹೊತ್ತಿಗೆ ವಿನೂತನವಾದ ‘ಮುರುಡೇಶ್ವರ ಸಿರಾಮಿಕ್ಸ್’ ಕಂಪೆನಿ ಆರಂಭ ಮಾಡಿದರು. ಅದು ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಿತೆಂದರೆ ಈ ವರ್ಷದ ಅವಧಿಯಲ್ಲಿ ಆ ಕಂಪೆನಿಯು 1.8 ಬಿಲಿಯನ್ ರೂ.ಗಳ ವ್ಯವಹಾರ ನಡೆಸಿದೆ!
ಅವರು ನಿರ್ಮಿಸಿದ ಬಿಜಾಪುರದ ನಾರಾಯಣಪುರ ಜಲವಿದ್ಯುತ್ ಯೋಜನೆಯು 11.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಶೆಟ್ಟರಿಗೆ ಭಾರೀ ಹೆಸರು ತಂದು ಕೊಟ್ಟಿದೆ. ಸಾವಿರಾರು ಕಿಲೋಮೀಟರ್ ಉದ್ದದ ರಾಷ್ಟ್ರೀಯ,ರಾಜ್ಯ ಹೆದ್ದಾರಿ ಅವರು ನಿರ್ಮಿಸಿದ್ದಾರೆ. ಸಾವಿರಾರು ಮಂದಿಗೆ ಉದ್ಯೋಗ ಫನೀಡಿದ್ದಾರೆ.
ಅಷ್ಟಕ್ಕೇ ತೃಪ್ತರಾಗದ ನಮ್ಮ ಆರ್ ಎನ್ ಶೆಟ್ಟರು ಬೆಂಗಳೂರು, ಹುಬ್ಬಳ್ಳಿ ಮತ್ತು ಮುರುಡೇಶ್ವರಗಳಲ್ಲಿ ಮಾರುತಿ ಉದ್ಯೋಗ ಸಂಸ್ಥೆಯ ಡೀಲರಶಿಪ್ ತೆಗೆದುಕೊಂಡರು. ಅವರ ಬೆಂಗಳೂರಿನ ಮಾರುತಿ ಶೋರೂಂ ದೇಶದಲ್ಲಿಯೇ ಅತೀ ದೊಡ್ಡ ಶೋರೂಂ ಎಂಬ ಕೀರ್ತಿಗೆ ಪಾತ್ರವಾಗಿದೆ. ಅವರು ಭಾರತದಲ್ಲಿ ನಂಬರ್ ಒನ್ ಡೀಲರ್ ಆಗಿ ಮೂಡಿ ಬಂದರು!
ಅವರು ತಮ್ಮ ಆದಾಯದ ಬಹಳ ದೊಡ್ಡ ಭಾಗವನ್ನು ತನ್ನ ಊರಾದ ಮುರುಡೇಶ್ವರಕ್ಕೆ ವಿನಿಯೋಗ ಮಾಡಿದರು. ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ, ಶಾಲೆ ಎಲ್ಲವನ್ನೂ ತೆರೆದರು. ದೇಶದಲ್ಲಿಯೇ ಅತಿ ಎತ್ತರದ ರಾಜಗೋಪುರ (249 ಅಡಿ) ನಿರ್ಮಿಸಿ ದೇಗುಲಕ್ಕೆ ಸಮರ್ಪಣೆ ಮಾಡಿದರು.123 ಅಡಿ ಎತ್ತರದ ಈಶ್ವರನ ಪ್ರತಿಮೆ ನಿರ್ಮಿಸಿದರು. ಇಡೀ ಮುರುಡೇಶ್ವರ ದೇವಾಲಯ ಮತ್ತು ಊರನ್ನು ಪ್ರೇಕ್ಷಣೀಯ ಆಗಿ ಕಟ್ಟಿ ನಿಲ್ಲಿಸಿದರು. ಕಲ್ಯಾಣ ಮಂಟಪ, ಯಾತ್ರಿ ನಿವಾಸ, ರೆಸ್ಟಾರೆಂಟ್ ಕಟ್ಟಿ ತನ್ನ ಹುಟ್ಟಿದ ಊರನ್ನು ಸರ್ವಾಂಗ ಸುಂದರವಾಗಿ ಮಾಡಿದರು. ಹುಟ್ಟೂರಿನ ಋಣ ತೀರಿಸಿದರು.
ಅಂತಹ ಆರ್ ಎನ್ ಶೆಟ್ಟಿಯವರು ಇಂದು ನಮ್ಮನ್ನು ಅಗಲಿದ್ದಾರೆ.
ಅಂತಹ ಸಾಧಕರಿಗೆ ನೂರಾರು ಪ್ರಶಸ್ತಿ, ಸನ್ಮಾನಗಳು ದೊರೆತಿವೆ. ಗೌರವ ಡಾಕ್ಟರೇಟ್, ವಿಶ್ವೇಶ್ವರಯ್ಯ ಪ್ರಶಸ್ತಿ…..ಮುಂತಾದ ಪ್ರಶಸ್ತಿಗಳು ದೊರಕಿವೆ.