ಬೆಂಗಳೂರು: ಅನಾರೋಗ್ಯಕರ ಸ್ಪರ್ಧೆ ತಪ್ಪಿಸಿ ವ್ಯಾಪಾರಿ ನೀತಿಯ ಪಾಲನೆ ಮತ್ತು ಸರ್ವೋದಯ ಅಭಿವೃದ್ಧಿ ಸಹಕಾರಿ ತತ್ವದ ಮೂಲ ಆಶಯವಾಗಿದೆ.
ಹಾಗಾದರೆ ನಂದಿನಿ ಮತ್ತು ಅಮೂಲ್ ವಿವಾದ ಅನಾವಶ್ಯಕ ಮತ್ತು ಪ್ರಚೋದನಕಾರಿಯಾಗಿದೆ. ಇದು ನಿರ್ದಿಷ್ಟ ಒಳಮರ್ಮದ ಒತ್ತಾಯಪೂರ್ವಕ ಹೇರಿಕೆಯ ಜೊತೆಗೆ ಕುತಂತ್ರ ಭಾಗ ಎಂಬ ಸಂಶಯ ಉಂಟಾಗುತ್ತದೆ.
ಅಮುಲ್ ಅಶ್ವಮೇಧದ ಕುದುರೆ ಕರ್ನಾಟಕಕ್ಕೆ ಬರುವ ಎಲ್ಲ ಸಾಧ್ಯತೆಗಳೂ ನಿಚ್ಚಳ. ಅದಕ್ಕೆ ತಯಾರಿಗಳು ನಡೆದಿರಬಹುದೆಂಬುದನ್ನು ನಿರಾಕರಿಸುವಂತಿಲ್ಲ. ಇಲ್ಲಿ ಅವರದೇ ವೆಬ್ಸೈಟಿನಿಂದ, ಇಲ್ಲಿಯ ತನಕ ಅವರ ಬೆಳವಣಿಗೆಯ ಸ್ವರೂಪ ಮತ್ತು ಕಳೆದ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅಮುಲ್ ಅಧ್ಯಕ್ಷರ ಭಾಷಣದಲ್ಲಿ, ಮುಂದಿನ 25 ವರ್ಷಗಳಲ್ಲಿ ಅವರ ನಿರೀಕ್ಷೆಗಳನ್ನು ಬಿಚ್ಚಿಟ್ಟ ಭಾಗವನ್ನು ನೀಡಿದ್ದೇನೆ.
ಭಾರತದ ಡೈರಿ ಉತ್ಪನ್ನಗಳ ಮಾರುಕಟ್ಟೆಯ ಒಟ್ಟು ಗಾತ್ರ ಈಗ 11.35ಲಕ್ಷ ಕೋಟಿ ರೂ.ಗಳದು. 1995-96ರಲ್ಲಿ ಗುಜರಾತಿನ ಅಮುಲ್ ಒಟ್ಟು ವ್ಯವಹಾರ 101ಕೋಟಿ. ಈಗ, 22-23ರಲ್ಲಿ 61,000 ಕೋಟಿ. 2021-22ರಲ್ಲಿ ಅದು ಕೇವಲ 11, 630 ಕೋಟಿ ಇತ್ತು. ಒಂದೇ ವರ್ಷದಲ್ಲಿ ಈ ಹಠಾತ್ ಏರಿಕೆಗೆ ದೇಶದ 400 ದೊಡ್ಡ ನಗರಗಳಲ್ಲಿ ಪ್ರವೇಶ ಮತ್ತು 23-24 ರ ಹೊತ್ತಿಗೆ ಅವರ ಶಾಖೆಗಳನ್ನು ಈಗಿರುವ 82ರಿಂದ 100ಕ್ಕೇ ಏರಿಸುವ ಯೋಜನೆ ಜಾರಿಯಲ್ಲಿರುವುದು ಕಾರಣ ಎಂದು ಸಂಸ್ಥೆಯ ಹೇಳಿಕೆಯೊಂದು ತಿಳಿಸಿದೆ
ಡೈರಿ ಉತ್ಪನ್ನಗಳು ದೇಶದ ಒಳಗೆ ಬೆಳವಣಿಗೆಗೆ ಒಂದು ಸೀಮಿತವಾದ ಮಾರುಕಟ್ಟೆ ಹೊಂದಿರುವಂತಹವು. ಆ ಕಾರಣಕ್ಕೇ ಅವು ಕಾರ್ಪೋರೇಟ್ ಆಗುವ ಬದಲು ಕಾಪರೇಟಿವ್ ಆಗಿಯೇ ಬದುಕಿಕೊಂಡಿವೆ. ಅವು ಹಿಗ್ಗಬೇಕಿದ್ದರೆ ವಿದೇಶಿ ಮಾರುಕಟ್ಟೆಗಳನ್ನು ಅನ್ವೇಷಿಸಬೇಕೇ ಹೊರತು ದೇಶದೊಳಗಿನ ಮಾರುಕಟ್ಟೆಯನ್ನಲ್ಲ ಎಂಬುದು ಸರಳ ಲಾಜಿಕ್.
ಹಾಗಾಗಿ, ದೇಶದ ಜನಸಂಖ್ಯೆ ಬಹುತೇಕ ತನ್ನ ಪೀಕ್ ತಲುಪುತ್ತಿರುವ ಈ ಹೊತ್ತಿನಲ್ಲಿ ಅಮುಲ್ ಬಹಳ ಮಹತ್ವಾಕಾಂಕ್ಷಿ ಬೆಳವಣಿಗೆಯ ಮಾತಾಡುತ್ತಿದೆ ಎಂದರೆ ಅದು ಸ್ವಲ್ಪ ಸಂಶಯಾಸ್ಪದ ಸಂಗತಿಯೇ.
27ವರ್ಷದಲ್ಲಿ ಬೆಳವಣಿಗೆಗೆ ಸ್ಕೋಪ್ ಇದ್ದಾಗ 100ಕೋಟಿಯಿಂದ 11,000 ಕೋಟಿ ಗಾತ್ರಕ್ಕೆ ವಹಿವಾಟು ಬೆಳೆಸಿದ ಅಮುಲ್, ಇನ್ನು 25 ವರ್ಷಗಳಲ್ಲಿ (ಅಂದರೆ 2047 ರ ಹೊತ್ತಿಗೆ) 18 ಲಕ್ಷಕೋಟಿ ವಹಿವಾಟು ಮಾಡುವ ಮಾತನಾಡುತ್ತಿದೆ ಎಂದರೆ, ಒಂದೋ ಅದು ದೇಶದ ಒಳಗೆ ಇರುವ ಬೇರೆ ಸಂಸ್ಥೆಗಳನ್ನು ನುಂಗಿ ಜೀರ್ಣಿಸಿಕೊಳ್ಳಬೇಕು ಅಥವಾ ತನ್ನ ರಫ್ತು ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬೇಕು. ಅದೆರಡೇ ಸಾಧ್ಯತೆಗಳಿರುವುದು. ಯಾಕೆಂದರೆ ಭಾರತದ ಒಟ್ಟು ಮಾರುಕಟ್ಟೆ ಗಾತ್ರವೇ 11ಲಕ್ಷ ಕೋಟಿರೂ.ಗಳದು.
ಅಂದ ಹಾಗೆ, ಕೆ ಎಂ ಎಫ್ನ 21-22 ನೇ ಸಾಲಿನ ವಹಿವಾಟು 19,780 ಕೋಟಿ ರೂ.ಗಳು.
ಭಾರತ ಸರ್ಕಾರ ರೈತರ ಆದಾಯ ದುಪ್ಪಟ್ಟು ಮಾಡುವ ಗಡಿಬಿಡಿಯಲ್ಲಿ ಕೃಷಿ/ಡೈರಿ ಕಾಪರೇಟಿವ್ ವಲಯಗಳನ್ನು ಮೂಗು ಒತ್ತಿ ಬಾಯಿ ಕಳೆಸಲು ಹೊರಟದ್ದರ ಫಲವಾಗಿ ಡೈರಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಈ ಬೆಳವಣಿಗೆಗಳು (ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಲಗ್ಗೆ ಇಡುವ/ಕೆ ಎಂ ಎಫ್ ವಶಪಡಿಸಿಕೊಳ್ಳುವ ವದಂತಿಗಳು) ನಡೆಯುತ್ತಿವೆ ಅನ್ನಿಸುತ್ತದೆ. ಯಾಕೆಂದರೆ, ಮೀನುಗಾರಿಕಾ ವಲಯದಲ್ಲಿ, ಇಲ್ಲಿ ಕರಾವಳಿಯಲ್ಲೂ ಇಂತಹದೇ ಅಸಹಜ ಗುರಿ ತಲುಪುವ ಧಾವಂತವನ್ನು ನಾನು ಗಮನಿಸುತ್ತಿದ್ದೇನೆ.
ವ್ಯಾಪಾರಿಗಳ ಕೈಗೆ ಸಿಕ್ಕ ಕಾಪರೇಟಿವ್ ವಲಯವು ಒಂದು ಸೀಮಿತ ಮಾರುಕಟ್ಟೆಯಲ್ಲಿ, ಹೀಗೆ ಭಸ್ಮಾಸುರರಾಗಿ ತಮ್ಮ ತಲೆಯ ಮೇಲೆ ತಮ್ಮದೇ ಕೈ ಇಟ್ಟುಕೊಳ್ಳಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಾಪರೇಟಿವ್ ಮಾರುಕಟ್ಟೆ ಕಾಪರೇಟಿವ್ ಆಗಿಯೇ ತಾನೂ ಬೆಳೆಯುತ್ತಾ, ಇತರರನ್ನೂ ಬೆಳೆಯಲು ಪ್ರೋತ್ಸಾಹಿಸುತ್ತಾ ಬೆಳೆದರೇ ಚೆಂದ.