ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. ಇದಕ್ಕೆಅನೇಕ ಕಾರಣಗಳಿವೆ ಅವುಗಳ ಕುರಿತು ತಿಳಿದುಕೊಳ್ಳ ಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಒಬ್ಬ ಜನ ಸಾಮಾನ್ಯನ ದೃಷ್ಠಿಯಲ್ಲಿ ನೋಡೋಣ, ತಂದೆ ತಾಯಿಯಾದವರು ತಮ್ಮ ಮಕ್ಕಳ ಉನ್ನತ ಮತ್ತು ಉತ್ತಮ ಶಿಕ್ಷಣಕ್ಕಾಗಿ ಶತಾಯ ಗತಾಯ ಪ್ರಯತ್ನ ಮಾಡಿ ಒಂದು ಉತ್ತಮ ಶಾಲೆಯಲ್ಲಿ ತಮ್ಮ ದಾಖಲಾತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ಆದರೆ ಅವರು ಕನ್ನಡ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡದೆ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ದಾಖಲಾತಿಯನ್ನು ಮಾಡುತ್ತಾರೆ ಇದರಲ್ಲೇನು ಮಹಾ ? ಎಂದು ಭಾವಿಸಬೇಡಿ ಅದರ ಹಿಂದೆ ತಮ್ಮ ಅನುಭವ ಮತ್ತು ಸಮಾಜದಲ್ಲಿ ತಮ್ಮ ಸ್ಥಾನ ಮಾನ ಏನಾಗುತ್ತದೆ ಎಂಬ ವಿಚಾರ ಅವರ ಮನಸ್ಸಿನಲ್ಲಿರುತ್ತದೆ. ತಮ್ಮ ಸಂಬಂಧಿಕರ ಮಕ್ಕಳು ಕಾನ್ವೆಂಟ್ ಶಾಲೆಗಳಿಗೆ ಹೋಗುತ್ತಾರೆ ನಮ್ಮ ಮಕ್ಕಳು ಮಾತ್ರ ಕನ್ನಡ ಮಾಧ್ಯಮದ ಶಾಲೆಗೆ ಹೋಗಬೇಕೆ ಎಂದು ತಮ್ಮ ಪ್ರತಿಷ್ಠೆಯ ಪ್ರತೀಕವಾಗಿ ತೆಗೆದುಕೊಂಡು ಎಷ್ಟು ಖರ್ಚಾದರೂ ಅಡ್ಡಿಯಿಲ್ಲ ಎಲ್ಲರಂತೆ ನಮ್ಮ ಮಕ್ಕಳೂ ಸಹ ಆಂಗ್ಲ ಮಾಧ್ಯಮದಲ್ಲೇ ಓದಬೇಕು ಎಂದು ಲಕ್ಷಾಂತರ ರೂಪಾಯಿಗಳನ್ನು ಕಟ್ಟಿ ಆಂಗ್ಲ ಮಾಧ್ಯಮದಲ್ಲಿ ದಾಖಲಾತಿಯನ್ನು ಪಡೆಯುತ್ತಾರೆ. ಎಲ್ಲರ ಮನೆಯಲ್ಲಿ ಇದೇ ರೀತಿಯಾದರೆ ಕನ್ನಡದ ಶಾಲೆಗಳು ಮುಚ್ಚಲಾರದೆ ಏನಾಗುತ್ತದೆ ಯೋಚಿಸಿ. ಇದು ಕೇವಲ ಒಂದು ನಗರದ ಕಥೆಯಲ್ಲ ಇಂತಹ ಕಥೆಗಳು ಹಳ್ಳಿ ಹಳ್ಳಿಗಳಿಗೆ ಹಬ್ಬಿವೆ. ಮುಖ್ಯವಾಗಿ ಕನ್ನಡ ಶಾಲೆಗಳು ಉಸಿರಾಡುತ್ತಿರುವುದೆ ಹಳ್ಳಿಗಳಿಂದ ಅಂತಹದ್ದರಲ್ಲಿ ಗ್ರಾಮೀಣ ಭಾಗದ ಶಾಲೆಗಳೆ ಕಾಯಿಲೆ ಬಂದು ಬಿದ್ದರೆ ಮುಂದೆ ಹೇಗೆ ಎಂಬ ಚಿಂತೆ ಈಗಾಗಲೇ ಪ್ರಾರಂಭವಾಗಿದೆ.
ನನ್ನ ಮಗು ಇಂಗ್ಲಿಷ್ನಲ್ಲೇ ಕಲಿತರೆ ಸರ್ಕಾರಿ ಮತ್ತು ಖಾಸಗಿ ನೌಕರಿ ಲಭಿಸುವುದು ಸುಲಭ ಎಲ್ಲವನ್ನೂ ಪಡೆಯಲು ಕನ್ನಡ ಬೇಕು ಆದರೆ ಯಾರೂ ಕನ್ನಡ ಕಲಿಯಲು ಮುಂದೆ ಬರುವುದಿಲ್ಲ. ಸದಾ ಮಕ್ಕಳ ಅಭಿವೃದ್ಧಿಯನ್ನೇ ಬಯಸುವ ಪೋಷಕರು ಇಂದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ನಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಿದರೆ ಅವರಿಗೆ ಮುಂದೆ ಸೂಕ್ತ ಉದ್ಯೋಗ ದೊರೆಯದಿದ್ದರೆ ನಮ್ಮ ಮಕ್ಕಳ ಭವಿ಼ಷ್ಯವನ್ನು ಪಾಲಕರಾದ ನಾವೇ ನಮ್ಮ ಕೈಯಾರೆ ಮುಗಿಸಿದಂತಾಗುತ್ತದೆ ಎಂಬ ಭೀತಿ ಇಂದಿನ ಪಾಲಕರಲ್ಲಿ ಮನೆ ಮಾಡುತ್ತಿದೆ.
ಇದಕ್ಕೆಲ್ಲ ಕಾರಣ ಆಂಗ್ಲ ಮಾಧ್ಯಮದ ಶಿಕ್ಷಣವೆಂದು ದೂರಲಾಗುವುದಿಲ್ಲ. ಕನ್ನಡದ ಶಾಲೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಒಂದು ವಿದ್ಯಾರ್ಥಿಗೆ ದೊರೆಯ ಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬುದು ಸಹ ಮುಖ್ಯವಾದ ಕಾರಣಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಂದೆ ತಾಯಿಗಳು ಓದು ಬರಹ ಕಲಿಯದೇ ಇದ್ದರೂ ತಮ್ಮ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಬೇಕೆಂದು ಬಯಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕನ್ನಡ ಭಾಷೆ ಕಲಿಕೆ ಎಲ್ಲಿಯವರಿಗೆ ಉಳಿಯಲು ಸಾಧ್ಯ? ನ್ಯಾಯಾಲಯಗಳು ಭಾಷಾ ಕಲಿಕೆಯ ವಿಷಯದಲ್ಲಿ ಮಕ್ಕಳ ಪೋಷಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಲು ಬರುವದಿಲ್ಲ. ಕನ್ನಡ ಕಲಿತರೆ ನಮ್ಮ ಮಗು ಕರ್ನಾಟಕದಲ್ಲೇ ಇರಬೇಕು, ಇಂಗ್ಲಿಷ್ ಕಲಿತರೆ ಎಲ್ಲಿ ಬೇಕಾದರೂ ಹೋಗಬಹುದು. ಕೆಲಸ ಬೇಗ ಸಿಗುತ್ತದೆ ಎಂಬುದು ತಂದೆತಾಯಿಗಳ ಅಭಿಮತ. ಆದರಲ್ಲಿ ಸಲ್ಪಮಟ್ಟಿಗೆ ಸತ್ಯಾಂಶವೂ ಇದೆ.ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂಲೇ ಇಂಗ್ಲಿಷ್ ಕಲಿಕೆ ಆರಂಭವಾಗಿದೆ, ಆದರೆ ಎಲ್ಲ ಹಳ್ಳಿಗಳಲ್ಲಿ ಕಾನ್ವೆಂಟ್ ಶಾಲೆಗಳು ಸ್ಥಾಪನೆಯಾಗಿ ತನ್ನ ಆಂಗ್ಲ ಮಾಧ್ಯಮದ ಶಿಕ್ಷಣದ ಬೇರನ್ನು ವ್ಯಾಪಿಸಿದೆ. ತಮ್ಮ ಮಕ್ಕಳು ಕಾನ್ವೆಂಟ್ಗೆ ಹೋಗುತ್ತಾರೆ ಎಂಬ ಹೆಮ್ಮೆ ತಂದೆತಾಯಿಗಳಿಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಅಂಕ ಬರುವುದಿಲ್ಲ,ಮೆರಿಟ್ ಸೀಟು ಸಿಗೋಲ್ಲ. ಕನ್ನಡ ಕಲಿತು ಏನಾಗಬೇಕಿದೆ, ಮನೆಯಲ್ಲೇ ಕನ್ನಡ ಹೇಳಿ ಕೊಟ್ಟರಾಯಿತು ಎಂದು ಹೇಳುವವರೂ ಇದ್ದಾರೆ.
ಹೀಗಾಗಿ ಅನೇಕ ನಗರ ಹಾಗೂ ಬೃಹತ್ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಾಗುತ್ತಿಲ್ಲ.ಮುಂದೆ ಅವರೊಂದು ದಿನ ಸರ್ಕಾರಿ ಕಚೇರಿಗಳಿಗೆ ಹೋದಾಗ ಆಂಗ್ಲ ಮಾಧ್ಯಮದಲ್ಲೇ ವ್ಯವಹಾರ ಮಾಡಲು ಬಯಸುತ್ತಾರೆ . ಅನೇಕ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಸಲಹೆ ನೀಡುವುದಿಲ್ಲ. ಹಲವಾರು ಇಲಾಖೆಗಳಲ್ಲಿ ಇಂಗ್ಲಿಷ್ನಲ್ಲಿ ಬರೆದ ಅರ್ಜಿಗೆ ಹೆಚ್ಚಿನ ಮನ್ನಣೆ, ಹೀಗಾಗಿ ಕನ್ನಡದಲ್ಲಿ ನೀಡಿದ ಅರ್ಜಿಗಳು ಮೂಲೆ ಗುಂಪಾಗುತ್ತವೆ ಹೀಗಾಗಿ ಅನೇಕ ಜನರು ತಮ್ಮ ಅರ್ಜಿಗಳನ್ನು ಆಂಗ್ಲ ಮಾಧ್ಯಮದಲ್ಲೇ ಬರೆಯಲು ಪ್ರಾರಂಭಿಸಿದ್ಧಾರೆ.
ಅನೇಕ ಸಿಬಿಎಸ್ಸಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಶಾಲೆಯ ಆವರಣದಲ್ಲಿ ಮಾತನಾಡುವಂತಿಲ್ಲ ಒಂದು ವೇಳೆ ಎನಾದರೂ ಮಾತನಾಡಿದರೆ ಭಾರಿ ಪ್ರಮಾಣದ ದಂಡವನ್ನು ಕಟ್ಟಬೇಕೆಂಬ ಸ್ವಅನುಷ್ಠಾನಿತ ನಿಯಮಗಳನ್ನು ಹಾಕಿಕೊಂಡಿವೆ . ಶಿಕ್ಷಣ ತಜ್ಞರ ಪ್ರಕಾರ ಪ್ರಾಥಮಿಕ ಶಿಕ್ಷಣ ಸ್ಥಳೀಯ ಭಾಷೆ ಆಥವಾ ಮಾತೃಭಾಷೆಯಲ್ಲಿ ನಡೆಯಬೇಕು ಇದರಿಂದಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದೇ ಮಾತೃಭಾಷೆಯನ್ನು ಮಗುವಿನ ಪಾಲಕರು ತಮ್ಮ ಸಾಮಾಜಿಕ ಸ್ಥಿತಿ-ಗತಿಗಳಿಗಾಗಿ ತಿರಸ್ಕರಿಸಿದರೆ ಮುಂದೆ ಮಾಡುವುದೇನು? ಇಂಗ್ಲಿಷ್ ಕಲಿತವನು ಬುದ್ಧಿವಂತ, ಕನ್ನಡ ಕಲಿತವನು ದ್ವಿತೀಯ ದರ್ಜೆ ಎಂಬ ಭಾವನೆ ನಮ್ಮ ಸಮಾಜದಲ್ಲಿ ಬಂದಿದೆ. ಈ ಭಾವನೆ ಇಂದಿನ ಡಿಜಿಟಲ್ ಯುಗದಲ್ಲೂ ಉಳಿದಿರುವುದು ಆಶ್ಚರ್ಯ ಕರವಾಗಿ ಕಂಡರೂ ನಿಜ ಎಂಜನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಸಾಕಷ್ಟು ಪೂರಕ ಪಠ್ಯಗಳು ದೊರೆಯುತ್ತಿಲ್ಲ ವಿಪರ್ಯಾಸದ ಸಂಗತಿ.
ಸೂರ್ಯ ಮುಳುಗದ ಸಾಮ್ರಜ್ಯವನ್ನು ಕಟ್ಟಿದ ಇಂಗ್ಲಿಷರು ಸಂಪೂರ್ಣ ಜಗತ್ತಿನಲ್ಲೇ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು ಆದರೆ ,ಜಗತ್ತಿನ ಎಲ್ಲ ದೇಶಗಳಲ್ಲಿ ನಮ್ಮ ಭಾರತದಂತೆ ಇಂಗ್ಲಿಷ್ ಪಾರಮ್ಯ ಇಲ್ಲ. ಬಹುತೇಕ ದೇಶಗಳು ತಮ್ಮ ತಮ್ಮ ಭಾಷೆಯನ್ನು ರಕ್ಷಿಸಿಕೊಂಡು ಬಂದಿವೆ ಉದಾರಣೆಗೆ ರಷ್ಯಾ, ಜರ್ಮನಿ, ಇಟಲಿ, ಸ್ಪೇನ್, ಚೀನಾ , ಜಪಾನ ನಂತಹ ದೇಶಗಳು ಮೊದಲು ತಮ್ಮ ದೇಶದ ಭಾಷೆ ನಂತರದಲ್ಲಿ ಆಂಗ್ಲ ಭಾಷೆಯನ್ನು ಬಳಿಸುತ್ತವೆ ಆದರೆ ಏಷ್ಯಾ ಖಂಡದ ಅನೇಕ ರಾಷ್ಟ್ರಗಳು ಇನ್ನೂ ಸಹ ಕಾಮನ್ ವೆಲ್ತ ಸಂಸ್ಕ್ರತಿಯನ್ನು ಪಾಲಿಸಿಕೊಂಡು ಬರುತ್ತಿರುವುದನ್ನು ಕಾಣುತ್ತೇವೆ. ಇಂದು ನಮ್ಮ ಯುವಕ ಯುವತಿಯರು ವಿದೇಶದಲ್ಲಿ ಉದ್ಯೋಗವನ್ನು ಕಂಡು ಕೊಳ್ಳಲು ಜರ್ಮನಿ ಹಾಗೂ ಇನ್ನಿತರ ಭಾಷೆಗಳನ್ನು ಸಾವಿರಾರೂ ರೂಪಾಯಿಗಳನ್ನು ವ್ಯಯಿಸಿ ಕಲಿಯುತ್ತಿರುವುದನ್ನು ಕಾಣುತ್ತಿದ್ದೇವೆ ಇದರ ಬದಲಾಗಿ ಸ್ವಲ್ಪವೂ ಹಣ ಖರ್ಚಾಗದೆ ಮನೆಯಲ್ಲಿರುವ ಹಿರಿಯರಿಂದಲೇ ಸುಂದರವಾದ ಕನ್ನಡವನ್ನು ಕಲಿಯಲು ಮನಸ್ಸು ಮಾಡುತ್ತಿಲ್ಲ ಎಂಬುದೇ ಖೇದಕರವಾದ ವಿಚಾರವಾಗಿದೆ.
ಮುಂದುವರೆಯುತ್ತದೆ