ಲಕ್ನೋ: ಉತ್ತರ ಪ್ರದೇಶದಲ್ಲಿ 14 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಶಾಲೆಯ ಇಬ್ಬರು ಶಿಕ್ಷಕರು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯು ಕೆಳ ಜಾತಿಯ ಬಡ ವರ್ಗಕ್ಕೆ ಸೇರಿದವಳಾಗಿದ್ದು ಆಕೆಯು ಶಾಲಾ ಶುಲ್ಕ ಪಾವತಿಸಿದಾಗ ಶಿಕ್ಷಕಿಯು ಕಡಿಮೆ ಮೊತ್ತಕ್ಕೆ ರಸೀದಿ ನೀಡಿದ್ದಳು. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆಯನ್ನು ಶಿಕ್ಷಕಿ ನಿಂದಿಸಿದ್ದಳು ಎನ್ನಲಾಗಿದೆ.
ರಾಜ್ಯದ ಮುಜಾಫರ್ನಗರದ ಶಿಕ್ಷಕರೊಬ್ಬರು ತಮ್ಮ ಸಹಪಾಠಿಯೊಬ್ಬರಿಗೆ ಸರದಿಯಲ್ಲಿ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಆಯೇಷಾ ಬಾನೊ (ಹೆಸರು ಬದಲಾಯಿಸಲಾಗಿದೆ) ಬಾರಾಬಂಕಿ ಜಿಲ್ಲೆಯ ಅಜಿಮುದ್ದೀನ್ ಅಶ್ರಫ್ ಇಸ್ಲಾಮಿಯಾ ಇಂಟರ್ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದು ಆಕೆಯ ತಾಯಿ ಪತ್ರಕರ್ತರೊಂದಿಗೆ ಮಾತನಾಡಿ “ನನ್ನ ಪತಿ 2018 ರಲ್ಲಿ ಹೃದಯಾಘಾತದಿಂದ ನಿಧನರಾದರು ಮತ್ತು ನಮ್ಮ ಕುಟುಂಬವು ಹಸಿವಿನಿಂದ ಬಳಲುತಿತ್ತು. ಬಹಳ ಕಷ್ಟದಿಂದ ನಾನು ಆಯೇಷಾ ಮತ್ತು ಅವಳ ತಂಗಿಯನ್ನು 2022 ರಲ್ಲಿ ಶಾಲೆಗೆ ಸೇರಿಸಿದೆ” ಎಂದು ಹೇಳಿದರು. ಕಳೆದ ಮೇ 27 ರಂದು, ಆಯೇಷಾ ತನ್ನ ಶಾಲಾ ಶುಲ್ಕ ₹ 1,100 ಪಾವತಿಸಿದ್ದಳು ಆದರೆ ಅವಳ ಶಿಕ್ಷಕಿ ವಾಸ್ಫಿ ಖಾತೂನ್ ಕಡಿಮೆ ಮೊತ್ತಕ್ಕೆ ರಶೀದಿಯನ್ನು ನೀಡಿದ್ದಳು. ಇದನ್ನು ಆಯೇಷಾ ಪ್ರಸ್ತಾಪಿಸಿ ವಿರೋಧಿಸಿದಾಗ ಶಿಕ್ಷಕಿ ಬಡವ ಹಾಗೂ ಕೆಳ ಜಾತಿಯವರಾದರೂ ಮೇಲ್ವರ್ಗದವರಿಗೆ ಸರಿಸಾಟಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದರು.
ವಾಸ್ಫಿ ಮತ್ತು ಒಬ್ಬ ಪುರುಷ ಶಿಕ್ಷಕ ಆಯೇಷಾಳನ್ನು ಆಕೆಯ ಕುಟುಂಬದ ಬಡತನ ಮತ್ತು ಜಾತಿಯ ಬಗ್ಗೆ ಇತರ ವಿದ್ಯಾರ್ಥಿಗಳ ಮುಂದೆ ನಿಯಮಿತವಾಗಿ ದೂಷಿಸುವುದು ಒಂದು ಹಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತ ಆಯೇಷಾ ಆಗಸ್ಟ್ 4 ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ ವಾಸ್ಫಿ ಮತ್ತು ಇತರ ಶಿಕ್ಷಕರ ಪದೇ ಪದೇ ನಿಂದಿಸಿದ್ದರಿಂದ ತಾನು ಈ ಹೆಜ್ಜೆ ಇಡುತ್ತಿದ್ದೇನೆ ಎಂದು ಬರೆದಿದ್ದಾಳೆ.
ನಾಲ್ಕೈದು ದಿನಗಳಿಂದ ನಾನು ಮತ್ತೆ ಮತ್ತೆ ಪೊಲೀಸರನ್ನು ಸಂಪರ್ಕಿಸಿದೆ ಆದರೆ ಅವರು ಎಫ್ಐಆರ್ ದಾಖಲಿಸಲಿಲ್ಲ, ನಾವು ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ ನಂತರವೇ ಅವರು ಇತ್ತೀಚೆಗೆ ಎಫ್ಐಆರ್ ಮಾಡಿದ್ದಾರೆ ಎಂದು ಆಯೇಷಾ ಅವರ ತಾಯಿ ಹೇಳಿದರು. ಅಯೇಷಾಳ ಆತ್ಮಹತ್ಯೆಯ ನಂತರ, ಆಕೆ ಸುಳ್ಳು ಆರೋಪ ಮಾಡಿದ್ದಾಳೆ ಎಂದು ಶಿಕ್ಷಕರು ಆರೋಪಿಸಿದ್ದಾರೆ .
“ತಾಯಿಯ ದೂರಿನ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಗಾಗಿ ಎಫ್ಐಆರ್ ದಾಖಲಿಸಲಾಗಿದೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ಜಮ್ಶೆಡ್ ಅಹ್ಮದ್ ಅವರು ಶಿಕ್ಷಕರ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು ಮತ್ತು ಮೃತಳ “ಕುಟುಂಬವು ಶಾಲೆಯ ದಾಖಲೆಗಳಲ್ಲಿ ಬಾಲಕಿಯ ಉಪನಾಮವನ್ನು ಖಾನ್ ಎಂದು ಬದಲಾಯಿಸಲು ಬಯಸಿದ್ದರು ಆದರೆ ದಾಖಲೆಗಳನ್ನು ಸಲ್ಲಿಸಲಿಲ್ಲ” ಎಂದು ಹೇಳಿದರು.
ಕಳೆದ ವಾರ, ಉತ್ತರ ಪ್ರದೇಶದ ಮುಜಾಫರ್ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಶಾಲಾ ಮಕ್ಕಳಿಗೆ ಮುಸ್ಲಿಂ ಹುಡುಗನೊಬ್ಬನಿಗೆ ಕಪಾಳಮೋಕ್ಷ ಮಾಡುವಂತೆ ಹೇಳುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು.