ವೈದ್ಯವೃತ್ತಿಯು ಅಂದಿಗೂ ಇಂದಿಗೂ ಮಹತ್ವದ್ದು. ಜಗತ್ತಿನ ಎರಡು ಪವಿತ್ರ ವೃತ್ತಿಗಳಲ್ಲಿ ಒಂದು ವೈದ್ಯಕೀಯ ವೃತ್ತಿ ಮತ್ತೊಂದು ಶಿಕ್ಷಕ ವೃತ್ತಿ ಎಂದು ನಮ್ಮ ಪ್ರೊಫೆಸರ್ ಒಬ್ಬರು ಹೇಳುತ್ತಿದ್ದರು. ವೈದ್ಯ ಜೀವ ಉಳಿಸುತ್ತಾನೆ ಅಂದರೆ ಕೊಡುತ್ತಾನೆ, ಶಿಕ್ಷಕ ಜೀವನ ನೀಡುತ್ತಾನೆ. “ಜೀವ ಉಳಿದರೆ ಜೀವನ” ಎನ್ನುವುದೂ ಖರೆ. ಹಾಗಾಗಿ ಮೊದಲ ಸ್ಥಾನವನ್ನು ಡಾಕ್ಟರಿಗೇ ಕೊಡೋಣ.
ಎಲ್ಲರಿಗೂ ಆರೋಗ್ಯದ ಬಗ್ಗೆ ಎಲ್ಲಿಲ್ಲದ ಪ್ರೀತಿ, ಹಾಗಾಗಿಯೇ ಅದರ ಬಗ್ಗೆ ವಿಪರೀತ ಕಾಳಜಿ. ಆದರೆ ಆ ಕಾಳಜಿಯೆಲ್ಲ ಗಾಬರಿಯಾಗುವುದು, ಅದರ ಬಗ್ಗೆಯೇ ಮಾತನಾಡುವುದು, ಇತ್ತಿತ್ತಲಾಗಿ ವೈದ್ಯಕೀಯ ವೆಚ್ಚ ಅತಿಶಯ ಏರಿರುವುದು, ಬಡವರಿಗೆ ಒಳ್ಳೆಯ ಚಿಕಿತ್ಸೆ ಸಿಗಲಾರದು ಎಂದೆಲ್ಲ ಹಲುಬುವುದು ಇದರಲ್ಲೇ ವ್ಯಕ್ತವಾಗುತ್ತದೆಯೇ ಹೊರತು ಹಿತಮಿತವಾದ ಆರೋಗ್ಯಕರ ಆಹಾರ, ನಿಯಮಿತವಾದ ವ್ಯಾಯಾಮ, ಒಳ್ಳೆಯ ಹವ್ಯಾಸಗಳು, ದುಶ್ಚಟಗಳಿಂದ ಅಂತರ ಕಾಯ್ದುಕೊಳ್ಳುವುದು ಇವುಗಳಲ್ಲಿ ಪ್ರಕಟವಾಗುವುದಿಲ್ಲ. ಹೀಗಾಗಿ ಮೇಲಿಂದ ಮೇಲೆ ಡಾಕ್ಟರ್ ಶಾಪಿಗೆ ಭೇಟಿ ಅನಿವಾರ್ಯವಾಗುತ್ತದೆ.
ಮತ್ತೆ ಮತ್ತೆ ಹೋಗಿ ಭೇಟಿ ಕೊಡಲು ನಾವೇನೂ ಇಚ್ಛಿಸುವುದಿಲ್ಲ. ದಾವಾಖಾನೆಗೆ, ಕೋರ್ಟಿಗೆ ಮತ್ತು ಪೋಲಿಸ್ ಠಾಣೆಗೆ ಯಾಕಾದರೂ ಯಾರಾದರೂ ಹೋಗಬಯಸುತ್ತಾರೆ? (ಇದರ ಜೊತೆಗೆ ಶಾಲೆಗಳನ್ನೂ ಸೇರಿಸಬೇಕು ಅಂತ ನಮ್ಮ ಮಕ್ಕಳು ಪಟ್ಟು ಹಿಡಿಯಬಹುದು) ಹಾಗೆ ಬಯಸುವವರು ವೈದ್ಯರು, ವಕೀಲರು ಮತ್ತು ಪೋಲೀಸರು ಮಾತ್ರ, ಏಕೆಂದರೆ ಅವರಿಗದು ಹೊಟ್ಟೆ ಪಾಡು. ನಮಗೆ ಹೊಟ್ಟೆ ನೋವು, ಯಾಕೆಂದರೆ ಜೇಬು ಖಾಲಿಯಾಗುವ ಜಾಗಗಳವು. ಆದರೂ ಹೋಗಬೇಕಾಗುತ್ತದೆ, ಬಾರಿ ಬಾರಿ. ಇವರನ್ನು ಮಿತ್ರರೂ ಎನ್ನಲಿಕ್ಕಾಗದು, ಆದರೆ ಅವರು ಶತ್ರುಗಳಂತೂ ಅಲ್ಲವೇ ಅಲ್ಲ. ಹಿತ ಶತ್ರುಗಳು ಎನ್ನಬಹುದು, ಉತ್ತಮ ವಿಲನ್.
ಹಳೆಯ ಕಾಲದ ಕಾದಂಬರಿಗಳನ್ನು ಓದಿದವರಿಗೆ ಫ್ಯಾಮಿಲಿ ಡಾಕ್ಟರ್ ರ ಬಗ್ಗೆ ಒಂದಿಷ್ಟು ಪ್ರೀತಿ ಹುಟ್ಟಿರುತ್ತೆ. ಏಕೆಂದರೆ ಈ ಫ್ಯಾಮಿಲಿ ಡಾಕ್ಟರು ರಾತ್ರಿ- ಅಪರಾತ್ರಿ ಎನ್ನದೇ ಯಾವಾಗ ಕರೆದರೂ ಕೈಯಲ್ಲೊಂದು ಕಪ್ಪು ಮೆಡಿಕಲ್ ಕಿಟ್ ಹಿಡಿದುಕೊಂಡು ಹಾಜರ್! ಅವರಿಗೆ ಇವರ ಕುಟುಂಬದ ಇತಿಹಾಸವೆಲ್ಲಾ ಗೊತ್ತು. ಮನೆಯ ಅಜ್ಜನ ಅಪ್ಪನಿಂದ ಹಿಡಿದು ಈಗಷ್ಟೇ ಹುಟ್ಟಿದ ಮಗುವಿನ ವರೆಗೆ ಎಲ್ಲರ ಆರೋಗ್ಯದ ಜಾತಕ ಅವರ ಮನಸ್ಸಿನಲ್ಲಿ ಅಚ್ಚೊತ್ತಿರುತ್ತವೆ. ದೈಹಿಕ ಅನಾರೋಗ್ಯಕ್ಕೆ ಕಾರಣೀಭೂತವಾದ ಮಾನಸಿಕ ಕ್ಲೇಷಗಳು, ಮನೆಯಲ್ಲಿನ ಮಹಾಭಾರತ, ರಾಮಾಯಣಗಳದ್ದೂ ಅಷ್ಟಿಷ್ಟು ಪರಿಚಯವಿರುವುದರಿಂದ ತಿನ್ನಲು ಕೊಡುವ ಕಹಿ ಮಾತ್ರೆಗಳು ಮತ್ತು ಕುಡಿಯಲು ಕೊಡುವ ಸಿಹಿ ಔಷಧಗಳ ಜೊತೆಗೆ ಒಂದೆರಡು ಹುಳಿ-ಒಗರು ಸಲಹೆಗಳನ್ನೂ ಮನೆಯ ಉನ್ನತ ಸ್ಥಾನದಲ್ಲಿ ಕುಳಿತು ಮನೆಮಂದಿಯನ್ನು ಶೋಷಿಸುತ್ತಿರುವ ಪೀಠಾಧಿಪತಿ ಯಜಮಾನರಿಗೋ, ಮನೆಮಂದಿಯ ತಲೆಕೆಡಿಸುವಂಥ ಹೇರಸ್ಟೈಲ್ ಮಾಡಿಕೊಂಡು ಓಡಾಡುತ್ತಿರುವ ಉಂಡಾಡಿಗುಂಡ ಯೌವನಿಗ ಮಗನಿಗೋ ಕೊಟ್ಟೇ ಹೋಗುತ್ತಾರೆ. ಮನೆಗೆ ಡಾಕ್ಟರ್ ಬಂದಿದ್ದಾರೆಂದರೆ ಅದೇನು ಸಾಮಾನ್ಯದ ಮಾತೇ? ಮನೆ ಹೆಣ್ಣುಮಕ್ಕಳ ಸಂಭ್ರಮ, ಗಡಬಡಿಸಿ ಅವರು ಒಲೆಯ ಮೇಲಿಟ್ಟ ಚಹಾದಂತೆಯೇ ಉಕ್ಕುತ್ತಿರುತ್ತೆ. ವೈದ್ಯರ ಸಲಹೆಗಳನ್ನೆಲ್ಲ ಭಗವಂತನ ಬಾಯಿಂದ ಬಂದ ವರಪ್ರಸಾದದಂತೆ ಭಕ್ತಿಯಿಂದ ಆಲಿಸಿ, ಚಹಾದ ಜೊತೆಗೆ ಚೂಡಾ, ಚಕ್ಲಿ, ಉಂಡಿಗಳೇನಿದ್ದರೂ ಈ ವೈದ್ಯೋ ನಾರಾಯಣ ಹರಿಗೆ ಅರ್ಪಿಸಿ ಧನ್ಯತಾ ಭಾವದಿಂದ ಬೀಗುತ್ತಾರೆ. ಡಾಕ್ಟರ್ ಎಂದರೆ ಅದೇಕೋ ಏನೋ ಜನಸಾಮಾನ್ಯರಿಗೆ ಯಾವತ್ತೂ ಒಂದು ಕೌತೂಕ, ಅಚ್ಚರಿ, ಮೆಚ್ಚುಗೆ, ಈರ್ಷೆ, ಹರ್ಷ, ಸಿಟ್ಟು, ಏನೆಲ್ಲ ಭಾವಗಳ ಕಲಸುಮೇಲೋಗರ.
ಇತ್ತೀಚಿನ ದಿನಗಳಲ್ಲಿ ಈ ಫ್ಯಾಮಿಲಿ ಡಾಕ್ಟರ್ ಎನ್ನುವ ಕಾನ್ಸೆಪ್ಟ್ ಮರೆತು ಹೋಗುತ್ತಿದೆ. ವೈದ್ಯರು ಮತ್ತು ಅವರಿಗಿಂತ ಹೆಚ್ಚಾಗಿ ರೋಗಿಗಳು ಬಹಳ ಸ್ಪೆಷಲ್ ಆಗಿದ್ದಾರೆ. ಹೀಗಾಗಿ ಮೊದಲಿನಂತೆ ಯಾವುದೇ ಕಾಯಿಲೆಯಿರಲಿ ಒಬ್ಬನೇ ವೈದ್ಯ ಎನ್ನುವ ಸಿಂಗಲ್ ವಿಂಡೋ ಸರ್ವಿಸ್ ಕಡಿಮೆಯಾಗಿದೆ. ಹಲ್ಲಿನ ನೋವಿಗೆ ಡೆಂಟಿಸ್ಟ್ ಕಣ್ಣಿನ ತ್ರಾಸಿಗೆ ಕಣ್ಣಿನ ಡಾಕ್ಟರ್, ಕಿವಿಗೆ ಮತ್ತೊಬ್ಬರು, ಹೀಗೆ ಪ್ರತಿ ಅವಯವಕ್ಕೂ ಒಬ್ಬೊಬ್ಬ ಸ್ಪೆಷಲಿಸ್ಟ್ ವೈದ್ಯ ಇರುವುದರಿಂದ ಒಂದೇ ವರ್ಷದಲ್ಲಿ ಹತ್ತಾರು ದಾವಾಖಾನೆಗಳ ಮೆಟ್ಟಿಲು ಹತ್ತಿ ಇಳಿಯುವುದಾಗುತ್ತದೆ. ಇದರ ಮೇಲೆ ಕೈ ಇಟ್ಟಂತೆ ಕಾರ್ಪೋರೆಟ್ ಆಸ್ಪತ್ರೆಗಳು. ಇನ್ನೂ ಮುಂದುವರೆದು ಮೂಗಿನ ಎಡ ಹೊಳ್ಳೆಗೆ ಬೇರೆ, ಬಲ ಹೊಳ್ಳೆಗೆ ಬೇರೆ, ಮೇಲಿನ ಹಲ್ಲುಗಳ ಸಾಲಿನ ತಜ್ಞ, ಕೋರೆ ಹಲ್ಲುಗಳ ವೈದ್ಯ, ಎಂದೆಲ್ಲ ಬರಬಹುದು! ಬಲಗಾಲಿನ ಮೂಳೆ ತಜ್ಞ ಎಡಗಾಲನ್ನು ನೋಡುವುದಿಲ್ಲ ಎನ್ನಬಹುದು. ಆದರೆ ಮೊದಲೆಲ್ಲ ಹೀಗಿರಲಿಲ್ಲ, ಹಲ್ಲು ನೋವು ಬಂದಾಗ ನಮ್ಮ ರೆಗ್ಯುಲರ್ ವೈದ್ಯರೇ ಒಂದು ಸಣ್ಣ ಇಕ್ಕಳದಿಂದ ಹಲ್ಲನ್ನು ಎಳೆದು ತೆಗೆದುಬಿಡುತ್ತಿದ್ದರು. ಕೈ, ಕಾಲು ನೋವಿಗೆ ಆರ್ಥೋ, ನ್ಯೂರೋ ಎಂದೆಲ್ಲ ಸ್ಪೆಷಲಿಸ್ಟಗಳು ಬೇಕೇ ಇರಲಿಲ್ಲ. ನಮ್ಮ ಮನೆಯ ಹತ್ತಿರದ ವೈದ್ಯರೇ ಆಲ್ ಇನ್ ಒನ್ ಆಗಿರುತ್ತಿದ್ದರು. ಹೀಗಾಗಿ ಅವರು ದೇಹದ ಬಗ್ಗೆ ಇಡಿಯಾಗಿ ವಿಚಾರ ಮಾಡುತ್ತಿದ್ದರು. ಒಮ್ಮೊಮ್ಮೆ ಇದೇ ಬಹಳ ಮಹತ್ವದ್ದಾಗಿರುತ್ತದೆ. ಬಹಳಷ್ಟು ಸಲ ಮಾನಸಿಕ ಒತ್ತಡಕ್ಕೂ ದೈಹಿಕ ಸಮಸ್ಯೆಗೂ ಹತ್ತಿರದ ಸಂಬಂಧವಿರುತ್ತದೆ. ಹಾಗಾಗಿ ಬಿಡಿಯಾಗಿ ವಿಚಾರ ಮಾಡುವವರಿಗಿಂತ ಇಡಿಯಾಗಿ ವಿಚಾರ ಮಾಡುವ ಜನರಲ್ ಡಾಕ್ಟರ್ ಬೇಕಾಗುತ್ತಾರೆ. ಫ್ಯಾಮಿಲಿ ಡಾಕ್ಟರಗಳಲ್ಲಿ ಈ ಇಡಿಯಾಗಿ ವಿಚಾರ ಮಾಡುವ ಸಾಮರ್ಥ್ಯ ಸಹಜವಾಗಿ ಬೆಳೆದಿರುತ್ತದೆ, ಏಕೆಂದರೆ ಅವರಿಗೆ ಕುಟುಂಬಗಳ ಜೊತೆಗೆ ಒಂದು ಮಾನಸಿಕ ಸಂಬಂಧ ಏರ್ಪಟ್ಟಿರುತ್ತದೆ.