ಬೆಂಗಳೂರು: ವಿಧಾನಸಭಾ ಚುನಾವಣೆ ಮತಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಆಡಳಿತ ವಿರೋಧಿ ಅಲೆ ಆತಂಕದಲ್ಲಿದ್ದ ಕೇಸರಿ ಪಡೆಗೆ ಮೋದಿ ಆಗಮನ ದೊಡ್ಡ ಆನೆಬಲ ಬಂದತಾಗಿದೆ.
ಬಿಜೆಪಿಗೆ ಸಂಜೀವಿನಿಯಾಗಿ ಮೋದಿ ಆಗಮಿಸಿದ್ದಾರೆ. ಮೋದಿ ಕಾಲಿಟ್ಟಗಿನಿಂದ ಕರುನಾಡಿನ ಚುನಾವಣಾ ಕಣವೇ ಬದಲಾದಂತೆ ಕಾಣುತ್ತಿದೆ. ಕೆಲ ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಮೋದಿ ಮತ್ತೆ ಕರುನಾಡಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಫೈನಲ್ಗೂ ಮುಂಚೆ ಭರ್ಜರಿ ಬ್ಯಾಟಿಂಗ್ ನಡೆಸುವ ಹಾಗೆ ಕಾಣಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಪ್ರಚಾರ ಕಣಕ್ಕೆ ಅಧಿಕೃತವಾಗಿ ಏಪ್ರಿಲ್ 29ರಂದು ಧುಮುಕಿದ್ದು ಗಡಿ ಜಿಲ್ಲೆ ಬೀದರ್ ನ ಹುಮ್ನಾಬಾದ್ನಿಂದ ಪ್ರಚಾರ ಆರಂಭಿಸಿದ ಮೋದಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ರಣಕಹಳೆಯನ್ನೇ ಮೊಳಗಿಸಿದ್ದರು. ಅದಾದ ಬಳಿಕ ವಿಜಯಪುರ, ನಂತರ ಅಂದು ಸಂಜೆಯೇ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಕಮಲಕ್ಕೆ ಬಿಗ್ ಶೊಕ್ ನೀಡಿದ್ದರು.
ಮೋದಿ ಮೊದಲ ಪ್ರಚಾರದ ಎರಡನೇ ದಿನ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಲಿರುವ ಚನ್ನಪಟ್ಟಣ, ಬೇಲೂರು ಹಾಗೂ ಕೋಲಾರದಲ್ಲಿ ಭರ್ಜರಿ ಪ್ರಚಾರ ಗೈದರು. ಅದಾದ ಬಳಿಕ ಮೈಸೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ್ದ ನರೇಂದ್ರ ಮೋದಿ, ದಸರಾ ವೈಭವವನ್ನೇ ಮೈಸೂರಿನಲ್ಲಿ ಪುನರ್ ಸೃಷ್ಟಿಸಿದ್ದರು ಎಂದರೆ ತಪ್ಪಾಗಲಾರದು. ಅದಾದ ನಂತರ ಹಳೇ ಮೈಸೂರಿನಲ್ಲಿ ಕಮಲಕ್ಕೆ ಹೆಚ್ಚಿನ ಬಲ ತುಂಬುವ ಕೆಲಸವನ್ನು ಮೋದಿ ಮಾಡಿದ್ದರು.
ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ, ರಾಮನಗರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಮತಗಳನ್ನು ಬಿಜೆಪಿ ಕಡೆ ತಿರುಗಿಸುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.ಇನ್ನೂ ಪ್ರಧಾನಿ ನರೇಂದ್ರ ಮೋದಿ ಕೋಟೆ ನಾಡು ಚಿತ್ರದುರ್ಗದಿಂದ ಪ್ರಚಾರ ಆರಂಭಿಸಿ ವಿಜಯನಗರ, ಸಿಂಧನೂರು, ಕಲಬುರಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಬುಧವಾರ ಮುಲ್ಕಿ ಅಂಕೋಲಾ, ಕಿತ್ತೂರಿನಲ್ಲಿ ಪ್ರಚಾರ ನಡೆಸಿದ ಮೋದಿ ಕರಾವಳಿಯಲ್ಲಿ ನಮೋ ಅಲೆ ಎಬ್ಬಿಸಲು ಪ್ರಯತ್ನ ಪಟ್ಟರು.
ಮೋದಿ ಮೊದಲ ಹಂತದ ಚುನಾವಣೆ ಬಳಿಕ ಕರ್ನಾಟಕದ ಚುನಾವಣಾ ಕಣವೇ ಬದಲಾದಂತಾಗಿದೆ. ರಾಜ್ಯ ಬಿಜೆಪಿ ನಾಯಕರು ಈಗ ಹೊಸ ಹುಮ್ಮಸ್ಸಿನೊಂದಿಗೆ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಷ್ಟು ದಿನ ಸಮೀಕ್ಷೆಗಳಲ್ಲಿ ಭಾಗಶಃ ಕಾಂಗ್ರೆಸ್ ಮುಂದಿದ್ದು, ಆದರೆ, ಈಗ ಬಿಜೆಪಿ ಕೂಡ ಸಮೀಕ್ಷೆಗಳಲ್ಲಿ ಮುನ್ನಡೆ ಸಾದಿಸುತ್ತಿರುವುದು ಬಿಜೆಪಿ ಮುಖಂಡರಿಗೆ ಧೈರ್ಯ ತಂದಿದೆ.
ಮೇ 6 ಮತ್ತು 7ರಂದು ಕೊನೆಯ ಪ್ರಚಾರ ನಡೆಸಲಿರುವ ಮೋದಿ ಬೆಂಗಳೂರನ್ನು ಪ್ರಧಾನವಾಗಿರಿಸಿಕೊಂಡು, ಮೇ 6ರಂದು ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ನಡೆಸಿದರೆ, ಮೇ 7ರಂದು ಬೆಂಗಳೂರು ಸೆಂಟ್ರಲ್ನಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ಮೋದಿ ಪ್ರಚಾರದ ಕೊನೆಯ ಎರಡು ದಿನ ಕರ್ನಾಟಕ ಬಿಜೆಪಿಗೆ ನಿರ್ಣಾಯಕ ಆಗಲಿದ್ದು, ಮೋದಿ ನಾಮಬಲದಲ್ಲಿ ಎಷ್ಟು ಸಾಧ್ಯ ಆಗುವುದೋ ಅಷ್ಟು ಮತಗಳನ್ನು ಪಡೆಯಲು ಕೇಸರಿ ಪಡೆ ತಯಾರಿ ನಡೆಸಿ, ಕೊನೆ ಹಂತದಲ್ಲಿ ಮೋದಿ ಯಾವ ಪ್ಲಾನ್ ಮಾಡಲಿದ್ದಾರೆ ಎಂಬುದು ವಿಪಕ್ಷಗಳ ನಿದ್ದೆಗೆಡಲು ಕಾರಣವಾಗಿದೆ.
ತಮ್ಮ ನಾಮಬಲದಿಂದಲೇ 2014ರಲ್ಲಿ ಕರ್ನಾಟಕವನ್ನು ಗೆಲ್ಲಿಸಿರುವ ಮೋದಿಯವರು ಕಳೆದ ಜನವರಿಯಿಂದ ಸಾಕಷ್ಟು ಬಾರಿ ರಾಜ್ಯಕ್ಕೆ ಬಂದು ಕರ್ನಾಟಕದಲ್ಲಿ ತಾವರೆಯನ್ನು ಅರಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ಗೆ ಜನರ ಒಲವಿದ್ದರೂ, ಅದರ ಪ್ರಚಾರ ಜೋರಾಗಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಮೋದಿ ಬಿಜೆಪಿಯನ್ನು ಮತ್ತೊಮ್ಮೆ ವಿಧಾನಸೌಧದ ಗದ್ದುಗೆಯಲ್ಲಿ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನ ಕೈ ಹಿಡಿಯತ್ತಾ? ಮೋದಿ ಅಲೆಯಲ್ಲಿ ಮತ್ತೊಮ್ಮೆ ಕಮಲ ಅರಳುತ್ತಾ ಎಂಬ ಪ್ರಶ್ನೆಗೆ ಮೇ 13ಕ್ಕೆ ಕಾಯಬೇಕಿದೆ.