ಶಿಕ್ಷಕರ ಕೊರತೆಯಿಂದ ಶಾಲೆಗಳು ಮುಚ್ಚುತ್ತಿರುವಂತಹ ಘಟನೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಅಂತಹದ್ದೇ ಘಟನೆಗೆ ಈಗ ಶತಮಾನ ಪೂರೈಸಲಿಸು ಸಮೀಪಿಸಿದ್ದ ಶಾಲೆಯೊಂದು ಸಾಕ್ಷಿಯಾಗಿದೆ.
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಕೊರತೆಯಿಂದ ಶಾಲೆ ಪ್ರಾರಂಭಗೊಂಡ ಮೂರೇ ತಿಂಗಳಲ್ಲಿ ಶಾಲೆಯ ಇದ್ದ 5 ಜನ ಮಕ್ಕಳನ್ನು ಇನ್ನೊಂದು ಶಾಲೆಗೆ ಸೇರಿಸಲಾಗಿದೆ.
ಶಾಲೆಯಲ್ಲಿ 8ನೇ ತರಗತಿ ತನಕ ಕಲಿಕೆಗೆ ಅವಕಾಶವಿದ್ದು,ಈ ಬಾರಿ ಒಟ್ಟು 45 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಂಟನೇ ತರಗತಿಗೆ 5 ಜನ ವಿದ್ಯಾರ್ಥಿಗಳು ದಾಖಲಾಗಿದ್ದು, ಶಿಕ್ಷಕರ ಕೊರತೆಯಿಂದ ಆ ಶಾಲೆಯನ್ನು ತೊರೆಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.
ಎಂಟನೇ ತರಗತಿಗೆ ಬೋಧನೆಯ ಅರ್ಹತೆ ಹೊಂದಿರುವ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ಇಬ್ಬರು ಅತಿಥಿ ಶಿಕ್ಷಕರು, ಸ್ಥಳೀಯ ಶಾಲೆಯಲ್ಲಿ ನಿಯೋಜನೆ ಮೇರೆಗೆ ಆಗಮಿಸಿರುವ ಓರ್ವ ಶಿಕ್ಷಕಿ ಕರ್ತವ್ಯದಲ್ಲಿದ್ದಾರೆ. ಇನ್ನು ಶಿಕ್ಷಕರ ಕೊರತೆ ಅನ್ನುವ ಮಾಹಿತಿ ಪಡೆದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನೇತೃತ್ವದ ತಂಡವು ಆ. 3ರಂದು ಶಾಲೆಗೆ ಭೇಟಿ ನೀಡಿತ್ತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ವಿಷಯವಾರು ಶಿಕ್ಷಕರ ಕೊರತೆ ಮತ್ತು ಪ್ರಯೋಗಾಲಯ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಎಲ್ಲೆಡೆ ಶಿಕ್ಷಕರ ಕೊರತೆ ಇದ್ದು ನಿಯೋಜನೆಗೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ 8ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ಸೇರಿಸುವಂತೆ ಬಿಇಒ ಸೂಚನೆ ನೀಡಿದರು. ಇದರಂತೆ ಎಸ್ಡಿಎಂಸಿ ಶಾಲೆಗೆ ಸೇರ್ಪಡೆಗೊಂಡರು. ಅಧ್ಯಕ್ಷರು ಮಕ್ಕಳ ಪೋಷಕರಿಗೆ ದೂರವಾಣಿ ಮೂಲಕ ಮತ್ತು ಮನೆಗೆ ತೆರಳಿ ಈ ಮಾಹಿತಿ ನೀಡಿದರು. ಆ. 4ರಂದು ಎಲ್ಲ ಐವರು ಮಕ್ಕಳಿಗೆ ವರ್ಗಾವಣೆ ಪತ್ರ ನೀಡಿ ಬೆಳ್ಳಾರೆ ಕೆಪಿಎಸ್ನಲ್ಲಿ ದಾಖಲಾತಿ ಮಾಡಲಾಗಿದೆ.
ಶಾಲೆ ತೊರೆಯುವಾಗ ಕಣ್ಣೀರಿಟ್ಟ ಮಕ್ಕಳು:
3 ತಿಂಗಳಿನಿಂದ ಕಲಿಯುತ್ತಿದ್ದ ಶಾಲೆಯನ್ನು ಬಿಟ್ಟು ಹೋಗಬೇಕು ಅನ್ನುವ ವಿಷಯ ತಿಳಿದ ಐವರು ಮಕ್ಕಳು ಕಣ್ಣೀರಿಟ್ಟರು. ಸಹಪಾಠಿಗಳು ಬೇರೆ ಶಾಲೆಗೆ ಹೋಗುತ್ತಾರೆ ಅನ್ನುವ ಸುದ್ದಿ ತಿಳಿದು 7, 6, 5ನೇ ತರಗತಿಯ ಮಕ್ಕಳೂ ಭಾವುಕರಾದರು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳಬೇಕಾದ ಸ್ಥಿತಿ ಉಂಟಾಗಿರುವ ಬಗ್ಗೆ ಶಿಕ್ಷಣ ಅಧಿಕಾರಿಗಳು, ಎಸ್ಡಿಎಂಸಿ, ಶಿಕ್ಷಕರು ವಿದ್ಯಾರ್ಥಿಗಳ, ಪೋಷಕರ ಮನವೊಲಿಸಿದರು. ಕೊನೆಗೂ ಭಾರವಾದ ಹೃದಯದೊಂದಿಗೆ ತಮ್ಮೂರಿನ ಶಾಲೆ ತೊರೆದು ಐವರು ವಿದ್ಯಾರ್ಥಿಗಳು ಆರು ಕಿ.ಮೀ. ದೂರದ ಶಾಲೆಗೆ ಸೇರ್ಪಡೆಗೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್ ಕಲಿತ ಶಾಲೆ:
ಮುಕ್ಕೂರು ಸರಕಾರಿ ಹಿ.ಪ್ರಾ. ಶಾಲೆಯು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಶಾಲೆ. ನಳಿನ್ ಅವರು ಸಂಸದರ ನಿಧಿ ಸೇರಿದಂತೆ , ವಿವಿಧ ಮೂಲಗಳಿಂದ ಶಾಲೆಗೆ ಬೇಕಾದ ಕಟ್ಟಡದ ವ್ಯವಸ್ಥೆಯನ್ನು ಒದಗಿಸಿದ್ದಾರೆ. ಸಂಸದರ ಶಿಫಾರಸಿನಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡ ಸಿದ್ಧವಾಗಿದ್ದು ಉದ್ಘಾಟನೆಗೆ ಬಾಕಿ ಇದೆ. ಆದರೆ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿನ ಕುಸಿತ, ಶಿಕ್ಷಕರ ಕೊರತೆಯಿಂದ ಶಾಲೆಯ ಸ್ಥಿತಿ ಮಾತ್ರ ಹದಗೆಟ್ಟಿದೆ.