ಬೆಂಗಳೂರು: ಆದಾಯಕ್ಕಿಂತ ನೂರಾರು ಪಟ್ಟು ಅಧಿಕ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೋಲೀಸರಿಂದ ಬಂಧನಕ್ಕೊಳಗಾಗಿದ್ದ ಕೆ. ಆರ್. ಪುರ ತಾಲ್ಲೂಕಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ನಗರದ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇಂದು ಅಜಿತ್ ಅವರ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ನ್ಯಾಯಾಲಯ-24ರ ನ್ಯಾಯಾಧೀಶ ರಾಧಾಕೃಷ್ಣ ಅವರು ವಿಚಾರಣೆ ನಡೆಸಿದರು. ಅರ್ಜಿದಾರ ಅಜಿತ್ ರೈ ಪರ ಹೈಕೋರ್ಟ್ ಹಿರಿಯ ವಕೀಲ ಎಂ. ಎಸ್. ಶ್ಯಾಮಸುಂದರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದರು. ಅಜಿತ್ ರೈ ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ವಜಾ ಮಾಡಿತ್ತು.
ಲೋಕಾಯುಕ್ತ ಪೊಲೀಸರು ಕಳೆದ ಜೂನ್ 28ರಂದು ಅಜಿತ್ ರೈ ಮನೆ ಮೇಲೆ ದಾಳಿಮಾಡಿ ಶೋಧ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ಜೂನ್ 29ರಂದು ಬಂಧಿಸಲಾಗಿತ್ತು. ವಿಚಾರಣೆಗಾಗಿ ಕೆಲವು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು.
ಆರಂಭದಲ್ಲಿ ತಹಶೀಲ್ದಾರ್ ಅಜಿತ್ ರೈ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಇದೊಂದು ಸಾಮಾನ್ಯ ಭ್ರಷ್ಟಾಚಾರ ಪ್ರಕರಣ ಎಂದು ಭಾವಿಸಿದ್ದರು, ಆದರೆ ದಾಳಿ ವೇಳೆ ಪತ್ತೆಯಾದ ದಾಖಲೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ₹500 ಕೋಟಿಗೂ ಅಧಿಕ ಅಕ್ರಮ ಆಸ್ತಿ ಸಂಪಾದಿಸಿರುವುದು ಕಂಡು ಬೆಚ್ಚಿಬಿದ್ದಿದ್ದರು. ಕೇವಲ 21 ವರ್ಷಗಳ ಸೇವೆಯಲ್ಲಿ 500 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ತಹಶೀಲ್ದಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ತನಿಖೆಗೆ ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು.
ಇಬ್ಬರು ಡಿವೈಎಸ್ಪಿಗಳು ಮತ್ತು ನಾಲ್ವರು ಇನ್ಸ್ಪೆಕ್ಟರ್ಗಳು ಸೇರಿದಂತೆ ಲೋಕಾಯುಕ್ತ ಬೆಂಗಳೂರು ನಗರ ಘಟಕದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಿತ್ತು. ಭ್ರಷ್ಟ ಅಧಿಕಾರಿಯೊಬ್ಬನ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಲೋಕಾಯುಕ್ತವು ಎಸ್ಐಟಿ ರಚನೆ ಮಾಡಿದ್ದು, ಇದೇ ಮೊದಲಾಗಿದೆ. ಕಳೆದ ಜೂನ್ 28 ರಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಅಜಿತ್ ರೈ ಅವರ ಮನೆ ಮತ್ತು ಅವರ ಬೇನಾಮಿ ಎಂದು ಶಂಕಿಸಲಾದ ಹಲವರ ಮನೆಗಳು ಸೇರಿದಂತೆ 11 ಸ್ಥಳಗಳ ಮೇಲೆ ದಾಳಿ ನಡೆಸಿದರು. ಧಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ 150 ಎಕರೆಗೂ ಹೆಚ್ಚು ಭೂಮಿ ಮತ್ತು 11 ದುಬಾರಿ ಐಷಾರಾಮಿ ಕಾರುಗಳು ಸೇರಿದಂತೆ ನೂರಾರು ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಆದಾಯ ಮೀರಿದ ಆಸ್ತಿ ಹೊಂದಿರುವ ಆರೋಪದ ಮೇಲೆ ಅಜಿತ್ ರೈ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೆ, ಪ್ರಕರಣ ಹಗರಣವಾಗಿ ಮಾರ್ಪಟ್ಟ ನಂತರ ಬಹು ಆಯಾಮದ ತನಿಖೆಯ ಅಗತ್ಯಕ್ಕಾಗಿ SIT ಅನ್ನು ರಚಿಸಲಾಗಿತ್ತು. ಲೋಕಾಯುಕ್ತ ಬೆಂಗಳೂರು ನಗರ ಘಟಕದ ಎಸ್ಪಿ ಕೆ. ವಿ. ಅಶೋಕ್ ಅವರ ನೇತೃತ್ವದಲ್ಲಿ ಎಸ್ಐಟಿ ತನಿಖೆ ನಡೆಸಿದೆ.
11 ಸ್ಥಳಗಳಲ್ಲಿ ಶೋಧ ನಡೆಸಿದಾಗ ಸಾವಿರಾರು ಪುಟಗಳ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತನಿಖಾ ತಂಡ ಅವುಗಳನ್ನು ಪರಿಶೀಲಿಸಿ ವಿಂಗಡಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ಅಜಿತ್ ರೈ ಜೊತೆ ಬೇನಾಮಿ ವ್ಯಕ್ತಿಗಳು ನಿಕಟ ಸಂಪರ್ಕ ಹೊಂದಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ದಾಖಲೆಗಳ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ವಿಸ್ತರಿಸಲು ಸಿದ್ಧತೆ ನಡೆಸಲಾಗಿದೆ. ಆರೋಪಿಯ ಸಹೋದರ ಆಶಿತ್ ರೈ ಮತ್ತು ನಿಕಟವರ್ತಿಗಳಾದ ಗೌರವ್ ಶೆಟ್ಟಿ ಮತ್ತು ಕೃಷ್ಣಪ್ಪ ಅವರ ಹೆಸರಿನಲ್ಲಿ ಹಲವು ಸ್ಥಿರಾಸ್ತಿಗಳಿವೆ. ಬೇನಾಮಿ ಎಂದು ಗುರುತಿಸಲಾಗಿರುವ ಎಲ್ಲ ವ್ಯಕ್ತಿಗಳ ವಿಚಾರಣೆ ಯನ್ನೂ ತನಿಖಾ ತಂಡ ನಡೆಸಿದೆ.
ತಮ್ಮ ಅಧಿಕಾರಾವಧಿಯಲ್ಲಿ ಅಜಿತ್ ಕುಮಾರ್ ರೈ ಒಟ್ಟು ₹1.20 ಕೋಟಿ ವೇತನ ಮತ್ತು ಭತ್ಯೆಗಳನ್ನು ಪಡೆದಿದ್ದರು. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಆತನ ವಶದಲ್ಲಿ ಹನ್ನೊಂದು ದುಬಾರಿ ಕಾರುಗಳು ಪತ್ತೆಯಾಗಿದ್ದು, ಒಂದು ಲ್ಯಾಂಡ್ ಕ್ರೂಸರ್ (₹2.5 ಕೋಟಿ) ಸೇರಿದಂತೆ ಆರೋಪಿಯ ಒಟ್ಟು ವೇತನ ಭತ್ಯೆಗಿಂತ ಎರಡು ಪಟ್ಟು ಹೆಚ್ಚು ವೆಚ್ಚವಾಗಿದೆ.
ಪುತ್ತೂರಿನವರಾದ ರೈ ಅವರು 2002ರಲ್ಲಿ ಅನುಕಂಪದ ಆಧಾರದ ಮೇಲೆ ಎಫ್ಡಿಎ ಆಗಿ ಕಂದಾಯ ಇಲಾಖೆಯಲ್ಲಿ ಸ್ಥಾನ ಪಡೆದರು. ನಂತರ 2008ರಲ್ಲಿ ತಹಶೀಲ್ದಾರ್ ಆದರು. ಈ ದೊಡ್ಡ ಭ್ರಷ್ಟಾಚಾರ ಪ್ರಕರಣ ರಾಜ್ಯದ ಜನರ ಗಮನ ಸೆಳೆದಿತ್ತು.
ಈ ಭ್ರಷ್ಟ ಅಧಿಕಾರಿಗಳಿಸಿರುವ ಕೋಟ್ಯಾಂತರ ರೂಪಾಯಿಯ ಆಸ್ತಿಯ ವಿವರ ಲೋಕಾಯುಕ್ತ ಪೋಲೀಸರು ಛಾರ್ಜ್ಶೀಟ್ ಸಲ್ಲಿಸಿದ ನಂತರವೇ ತಿಳಿಯಲಿದೆ.