ಬೆಂಗಳೂರು: ಕಳೆದ ಆಗಸ್ಟ್ 1 ರಂದು, ಬೆಂಗಳೂರಿನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನೊಬ್ಬ ಗೋವಾದ ಕ್ಯಾಸಿನೊದಲ್ಲಿ 25 ಲಕ್ಷ ರೂಪಾಯಿಗಳನ್ನು ಗೆದ್ದ ನಂತರ ಸಂತೋಷದಿಂದ ಬೀಗುತ್ತಿದ್ದ. ಆದರೆ ಈ ಸಂತೋಷ ಅಲ್ಪಕಾಲಿಕವಾಗಿತ್ತು. ಏಕೆಂದರೆ ಇವನು ನಂಬಿದ್ದ ಸ್ನೇಹಿತರೇ ಇವನನ್ನು ಅಪಹರಿಸಿ 15 ಲಕ್ಷ ರೂಪಾಯಿ ದೋಚಿ ಪರಾರಿ ಆಗಿದ್ದಾರೆ.
ಟೀ ಮಾರಾಟಗಾರನನ್ನು ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ತಿಲಕ್ ಎಂ. ಮಣಿಕಂಠ (32) ಎಂದು ಗುರುತಿಸಿರುವ ಪೊಲೀಸರು, ಅಪಹರಣ, ಸುಲಿಗೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಜುಲೈ 30 ರಂದು ಮಣಿಕಂಠ ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ನಾಲ್ಕು ಲಕ್ಷ ರೂಪಾಯಿ ಹಣದೊಂದಿಗೆ ಹೋಗಿದ್ದ. ಅಲ್ಲಿ ಆಗಸ್ಟ್ 1 ರಂದು ಪಣಜಿಯ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೊದಲ್ಲಿ ಆಟವಾಡಿದ ಮಣಿಕಂಠ 25 ಲಕ್ಷ ರೂ. ಗೆದ್ದುಕೊಂಡಿದ್ದ. ಆದರೆ ಮಣಿಕಂಠ ಈ ಸುದ್ದಿಯನ್ನು ತನ್ನ ಸ್ನೇಹಿತರಿಗೆ ಹೇಳದೇ ಗೌಪ್ಯವಾಗೇ ಇರಿಸಿದ್ದ. ಈ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಎಂದು ಪೊಲೀಸರು ಹೇಳಿದರು.
ಮಣಿಕಂಠ ಅವರ ಪೊಲೀಸ್ ದೂರಿನ ಪ್ರಕಾರ, ಆಗಸ್ಟ್ 5 ರಂದು, ಅವರು ಬೆಂಗಳೂರಿಗೆ ಹಿಂದಿರುಗಿದ ಒಂದು ದಿನದ ನಂತರ, ಅವರು ಅಂಗಡಿಯೊಂದರ ಬಳಿ ನಿಂತು ಧೂಮಪಾನ ಮಾಡುತ್ತಿದ್ದಾಗ, ಅವರ ಸ್ನೇಹಿತರಾದ ಕಾರ್ತಿಕ್, ಪಾಂಡು, ಈಶ್ವರ್, ನಿಶ್ಚಲ್ ಮತ್ತು ಇತರರು ತಮ್ಮ ಜತೆ ಬರುವಂತೆ ಹೇಳಿದರು. ನನಗೆ ಕೆಲಸವಿದೆ ಸ್ವಲ್ಪ ಕಾಯಿರಿ ಎಂದು ಹೇಳಿದಾಗ ಅವರು ಅವರನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮೊಬೈಲ್ ಬ್ಯಾಂಕಿಂಗ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆಗಸ್ಟ್ 5 ರಂದು ಬೆಳಿಗ್ಗೆ 11ರಿಂದ ಆಗಸ್ಟ್ 6 ರ ಬೆಳಿಗ್ಗೆ 8ರ ವರೆಗೆ ಆರೋಪಿಗಳು ಮಣಿಕಂಠನನ್ನು ಹಲವಾರು ಕಡೆಗಳಿಗೆ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿ ಅಂತಿಮವಾಗಿ ನೆಲಮಂಗಲದ ರೆಸಾರ್ಟ್ ಕೋಣೆಯೊಂದರಲ್ಲಿ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಆಗಸ್ಟ್ 6 ರಂದು ಮಣಿಕಂಠ ಪೊಲೀಸರಿಗೆ ದೂರು ನೀಡಿದ್ದರು. ಹನುಮಂತನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 365 (ಅಪಹರಣ), 384 (ಸುಲಿಗೆ), 347 (ಆಸ್ತಿಯನ್ನು ಸುಲಿಗೆ ಮಾಡಲು ಬಂಧಿಸಿರುವುದು ), 324 (ಅಪಾಯಕಾರಿ ವಿಧಾನಗಳಿಂದ ಗಾಯಗೊಳಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಲೊಕೇಷನ್ ಗುರುತಿಸಲಾಗಿದ್ದು ಅವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.