ಎಲ್ಲಿ ಜಲಪಾತವಿರುತ್ತದೆ ಅಲ್ಲಿ ಜನ ಸಾಗರ ಹರಿದು ಬರುತ್ತದೆ .ಅದೇ ರೀತಿ ಕೃಷ್ಣ ರಾಜಸಾಗರ ಜಲಾಶಯ ಹಾಗೂ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್ ನೀರು ಕಾವೇರಿ ನದಿಗೆ ಹರಿದು ಬರುತ್ತಿರುವುದರಿಂದ ತಾಲೂಕಿನ ಶಿವನಸಮುದ್ರಂ ಬಳಿ ಇರುವ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಮೈದುಂಬಿ ಹರಿಯುತ್ತಿರುವುದು ಪ್ರವಾಸಿಗರನ್ನು ಕೈ ಬೀಸಿ ಕರೆದಂತ್ತಿರುತ್ತದೆ.
ಹಲವು ತಿಂಗಳಿಂದ ನದಿಗಳಲ್ಲಿ ನೀರು ಹರಿಯದ ಕಾರಣ ಎರಡು ಜಲಪಾತಗಳು ಪ್ರವಾಸಿಗರಿಲ್ಲದೇ ಬರಡಾಗಿತ್ತು. ಆದರೆ, ಶ್ರೀರಂಗಪಟ್ಟಣದ ಕೆಆರ್ಎಸ್ ಜಲಾಶಯ ಹಾಗೂ ಎಚ್.ಡಿ.ಕೋಟೆ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್ ನೀರು ಕಾವೇರಿ ನದಿಗೆ ಬಿಟ್ಟಿರುವುದರಿಂದ ‘ಪ್ರಕೃತಿಯ ವೈಭವದ ಜಲಸಿರಿಗೆ ಸರಿಸಾಟಿ ಯಾರಿಲ್ಲ’ ಎಂಬಂತೆ ಮತ್ತೆ ಗಗನಚುಕ್ಕಿ, ಭರಚುಕ್ಕಿ ಜಲಾಪತಗಳು ಮೈದುಂಬಿ ಹರಿದು ಕಣ್ಮನ ಸೆಳೆಯುವಂತಿರುತ್ತದೆ.
ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಈಗಾಗಲೇ ಕಬಿನಿ ಜಲಾಶಯ ಭರ್ತಿಯಾಗಿದೆ. ಕೆಆರ್ಎಸ್ ಜಲಾಶಯದಲ್ಲಿಯೂ 113 ಅಡಿಯಷ್ಟುನೀರು ಸಂಗ್ರಹವಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಸಾವಿರಾರು ಕ್ಯುಸೆಕ್ ನೀರನ್ನು ಈಗಾಗಲೇ ನದಿಗೆ ಬಿಡಲಾಗುತ್ತಿದೆ. ತಾಲೂಕಿನ ವಿಶ್ವ ವಿಖ್ಯಾತ ಗಗನಚುಕ್ಕಿ ಹಾಗೂ ಸಮೀಪದಲ್ಲೇ ಇರುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತಗಳು ಮೈತುಂಬಿ ಹಾಲ್ನೊರೆಯಂತೆ ನೀರು ಭೊರ್ಗರೆಯುವ ದೃಶ್ಯ ನೋಡುಗರನ್ನು ಆಕರ್ಷಿಸುದೆ ಇರಲಾರದು.
ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಜೀವನದಿ 320 ಕಿಲೋ ಮೀಟರ್ ಹರಿದು ಕೆಆರ್ಎಸ್ ಅಣೆಕಟ್ಟೆಗೆ ಸೇರುತ್ತದೆ. ನಂತರ ಕೆಆರ್ಎಸ್ನಿಂದ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹರಿದು ಸತ್ಯಗಾಲದ ಮೂಲಕ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ದುಮ್ಮಿಕ್ಕಿ ಹರಿದು ಮುತ್ತತ್ತಿಯನ್ನು ಸುತ್ತಿಕೊಂಡು ಮೇಕೆದಾಟು ಮೂಲಕ ಹೊಗೆನಕಲ್ ತಲುಪಲಿದೆ. ನಂತರ ತಮಿಳುನಾಡಿಗೆ ತಲುಪಿ 416 ಕಿ.ಮೀ.ದೂರ ಹರಿಯುತ್ತಾಳೆ. ಬಹುತೇಕ ವರ್ಷಗಳಲ್ಲಿ ಜುಲೈ ತಿಂಗಳ ಆರಂಭದಲ್ಲಿಯೇ ಸಮೃದ್ಧಿವಾದ ಮಳೆಯಾಗಿ ಅವಳಿ ಜಲಪಾತಗಳು ದುಮ್ಮಿಕ್ಕಿ ಹರಿಯುತ್ತಿರುವುದು ಪ್ರಕೃತಿಯ ಸೌಂದರ್ಯಕ್ಕೆ ಮತ್ತಷ್ಟುಮೆರಗು ಮೂಡಿಸುತ್ತಿದೆ.
ಗಗನಚುಕ್ಕಿ ಜಲಾಕರ್ಷಣೆಯ ನಯನ ಮೋನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುವ ಜೊತೆಗೆ ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಮೈಸೂರು ಮತ್ತು ಬೆಂಗಳೂರಿನಿಂದ ಪ್ರವಾಸಿಗರು ತಂಡ ತಂಡವಾಗಿ ಆಗಮಿಸಿ ದುಮ್ಮುಕ್ಕುತ್ತಿರುವ ಜಲಧಾರೆ ಕಂಡು ಮೊಬೈಲ್ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿರುವುದು ಕಣಸಿಗುತ್ತಿದೆ.
ನಿಸರ್ಗ ಸೌಂದರ್ಯವನ್ನು ನೋಡಿ ಆನಂದ ಪಡಲು ಬರುವ ಪ್ರವಾಸಿರಿಗೆ ಮೂಲ ಸೌಲಭ್ಯ ಒದಗಿಸುವ ಜೊತೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸಿ ವಿಶ್ವ ಪ್ರಸಿದ್ಧಿ ಪಡೆದಿರುವ ಜಲಪಾತದ ವೈಭವ ಹೆಚ್ಚು ಮಾಡಬೇಕು ಎನ್ನುವುದು ಪರಿಸರ ಪ್ರೇಮಿಗಳು, ಪ್ರವಾಸಿಗಳ ಆಶಯವಾಗಿದೆ.
ಗಗನಚುಕ್ಕಿ ಜಲಪಾತದಲ್ಲಿ ಹಲವು ತಿಂಗಳಿಂದ ನೀರಿಲ್ಲದೇ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿತ್ತು. ಇದರಿಂದ ವ್ಯಾಪಾರ ವಹಿವಾಟು ಕುಂಠಿತವಾಗಿತ್ತು. ಇದೀಗ ಭರಚುಕ್ಕಿ, ಗಗನಚುಕ್ಕಿ ಜಲಪಾತಗಳು ತನ್ನ ವೈಭವ ಪಡೆದುಕೊಂಡಿದ್ದು ನಮ್ಮ ವ್ಯಾಪಾರವು ಸುಧಾರಿಕೊಳ್ಳಲು ಸಹಾಯ ಮಾಡುತ್ತಿವೆ ಎಂದು ಅಲ್ಲಿನ ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸುತ್ತಾರೆ.