ಸಂಪ್ರದಾಯದ ಪ್ರಕಾರ ವೃಷಭ ಮಾಸದ ಹತ್ತನೇ ದಿನ “ಪತ್ತನಾಜೆ (ಹತ್ತನಾವಧಿ) ಮಹತ್ವದ ದಿನ. ಈ ವರ್ಷ ಮೇ 24ರಂದು ಪತ್ತನಾಜೆ ಬಂದಿದೆ, ಅಂದಿನಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಉತ್ಸವಗಳು ನಡೆಯು ವುದಿಲ್ಲ. ಯಕ್ಷಗಾನ ಮೇಳಗಳ ಕಲಾವಿದರು ಪ್ರದರ್ಶನ ಮುಗಿಸಿ ಕಾಲಗೆಜ್ಜೆಯನ್ನು ವಿಧಿವತ್ತಾಗಿ ಬಿಚ್ಚುವುದು ಪತ್ತನಾಜೆಯಂದು.
ಸೀಮೆಯ ಪ್ರಧಾನ ದೇವಸ್ಥಾನಗಳ ಕೊಡಿಮರ ಇಳಿಸುವ ಕಾರ್ಯಕ್ರಮವೂ ಪತ್ತನಾಜೆಯ ದಿನವೇ ನಡೆಯುತ್ತದೆ. ಮಳೆಗಾಲದಲ್ಲಿ ಯಾವುದೇ ಜಾತ್ರೆ, ಆಯನ. ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದ ಪ್ರಾರಂಭಕ್ಕೆ ಮುನ್ನ ಉತ್ಸವಾದಿಗಳನ್ನು ಪೂರೈಸಿ
ಕೃಷಿ ಚಟುವಟಿಕೆಗಳಿಗೆ ತಯಾರಿ ಮಾಡಲು ಪತ್ತನಾಜೆ ದಿನವನ್ನು ಉತ್ಸವಗಳ ಕೊನೆಯ ದಿನವನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರಿದಿದೆ.
43 ಮೇಳಗಳ ಒಡೋಲಗಕ್ಕೆ “ಮಂಗಳ’!
ಕರಾವಳಿ ಜಿಲ್ಲೆಗಳಲ್ಲಿ 40ಕ್ಕೂ ಅಧಿಕ ಮೇಳಗಳು ಈ ವರ್ಷ ತಿರುಗಾಟ ನಡೆಸಿವೆ. ಸಾವಿರಾರು ಕಲಾವಿದರು ಹಾಗೂ ಇತರರು ಇಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಮೇಳಗಳು ಈಗಾಗಲೇ ತಮ್ಮ ತಿರುಗಾಟ ನಿಲ್ಲಿಸಿದ್ದರೆ, ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಪಾವಂಜೆ, ಹನುಮಗಿರಿ, ಮಾರಣಕಟ್ಟೆ, ಹಾಲಾಡಿ, ಬಪ್ಪನಾಡು ಸಹಿತ ವಿವಿಧ ಮೇಳಗಳ ಆಟ ಇಂದು-ನಾಳೆ ಮುಕ್ತಾಯವಾಗಲಿದೆ. ಮುಂದಿನ ಆರು ತಿಂಗಳು ಕಲಾವಿದರಿಗೆ ರಜೆ ಇರಲಿದೆ.
ಈ ಪೈಕಿ ಕೆಲವು ಮೇಳದ ಕಲಾವಿದರಿಗೆ ರಜಾ ಸಂಬಳ ಮೇಳದಿಂದ ಸಿಗುತ್ತಿದ್ದರೆ, ಉಳಿದ ಕಲಾವಿದರು ರಜೆ ಸಮಯದಲ್ಲಿ ಇತರ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಮಳೆಗಾಲದ ಸಂದರ್ಭ ಮೇಳ ತಿರುಗಾಟ ಇಲ್ಲದಿದ್ದರೂ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಕರಾವಳಿಯ ವಿವಿಧ ಕಡೆಗಳಲ್ಲಿ ನಡೆಯುತ್ತದೆ. ಚಿಕ್ಕ ಮೇಳ ತಿರುಗಾಟ ಮನೆ ಮನೆ ವ್ಯಾಪ್ತಿಗೆ ಬರಲಿದೆ.
“ಕಟೀಲಿನ ಆರು ಮೇಳಗಳು ಈ ವರ್ಷ ಸುಮಾರು 1,068 ಯಕ್ಷಗಾನ ಪ್ರದರ್ಶನ ನೀಡಿವೆ. ಮುಂದಿನ ದಿನಗಳಲ್ಲಿ 8 ಸಾವಿರಕ್ಕೂ ಪ್ರದರ್ಶನಕ್ಕೆ ಈಗಾಗಲೇ ಬುಕ್ಕಿಂಗ್ ಆಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅಸ್ರಣ್ಣ ತಿಳಿಸಿದ್ದಾರೆ.