ಬೆಂಗಳೂರು: ನಗರದ ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಎಂದು ಗುರುತಿಸಲಾಗಿದೆ.
ಕಳೆದ ಜುಲೈ 4ರಂದು ಮಹಾರಾಷ್ಟ್ರದಿಂದ ರಾಜ್ಯದ ಕೆಲವೆಡೆ ಮಸೀದಿಗಳಿಗೆ ಭೇಟಿ ನೀಡಿದ ನಂತರ ಬೆಂಗಳೂರಿಗೆ ಬಂದಿದ್ದ ಸೈಯದ್ ಮಹಮ್ಮದ್ ಅನ್ವರ್, ಮದರಸಾ ಹೆಸರಿನಲ್ಲಿ ಮಸೀದಿಗಳ ಸಮಿತಿಯ ಮುಖಂಡರ ಬಳಿ ಚಂದಾ ಸಂಗ್ರಹ ಮಾಡುತಿದ್ದ. ಕಳೆದ ವಾರ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿಯ ಮುಖಂಡರ ಬಳಿ ಚಂದಾ ಹಣವನ್ನು ಪಡೆದುಕೊಂಡಿದ್ದ ಸೈಯದ್ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಆದರೆ ಇದಕ್ಕೆ ಮಸೀದಿಯ ಅವಕಾಶ ನೀಡದೇ ವಾಪಾಸ್ ಕಳಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಆರೋಪಿಯು ಮೆಜೆಸ್ಟಿಕ್ಗೆ ತೆರಳಿ ಆಂದ್ರ ಪ್ರದೇಶದ ಮಸೀದಿಗಳಲ್ಲಿ ಚಂದಾ ಸಂಗ್ರಹಿಸಲು ಕರ್ನೂಲ್ ಬಸ್ ಹತ್ತಿದ್ದಾನೆ. ಬಸ್ ದೇವನಹಳ್ಳಿ ದಾಟುತ್ತಿದ್ದಂತೆ 112ಗೆ ಕರೆ ಮಾಡಿದ್ದ ಸೈಯದ್ ಮಸೀದಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಬಾಂಬ್ ಇರಲಿಲ್ಲ. ಆದರೆ ಹುಸಿ ಕರೆ ಮಾಡಿದ ಆರೋಪಿಯ ವಿರುದ್ದ ಶಿವಾಜಿನಗರ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಆರೋಪಿಯ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ನಡೆಸಿದಾಗ ಆತ ಆಂಧ್ರ ಪ್ರದೇಶದಲ್ಲಿರುವುದು ಪತ್ತೆ ಆಯಿತು. ನಂತರ ಆಂಧ್ರಕ್ಕೆ ತೆರಳಿದ್ದ ಆರೋಪಿ ಸೈಯದ್ನನ್ನು ಶಿವಾಜಿನಗರ ಪೊಲೀಸರು ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ನಗರಕ್ಕೆ ತೆರಳುತಿದ್ದಾಗ ಬಂಧಿಸಿದ್ದಾರೆ. ಆರೋಪಿ ಸೈಯದ್ ಮಹಮ್ಮದ್ ಬಿಎಸ್ಸಿ ಪದವಿ ಮುಗಿಸಿದ್ದು ಕೆಲಸ ಇರಲಿಲ್ಲ. ಹೀಗಾಗಿ ಊರೂರು ಸುತ್ತಿ ಮಸೀದಿಗಳ ಮುಖಂಡರ ಬಳಿ ಮಹಾರಾಷ್ಟ್ರದ ಮದರಸಾಗಳಿಗೆ ಸಹಾಯ ಮಾಡುವಂತೆ ಚಂದಾ ಕೇಳುತ್ತಿದ್ದ. ಅದೇ ಹಣದಲ್ಲಿ ಆರೋಪಿ ಸೈಯದ್ ಮಹಮ್ಮದ್ ಜೀವನ ಸಾಗಿಸುತ್ತಿದ್ದನು.ಈತನು ಕಳೆದ 7-8 ವರ್ಷಗಳಿಂದಲೂ ಇದೇ ರೀತಿ ಯಾವುದೇ ದುಡಿಮೆ ಮಾಡದೆ ಜೀವನ ನಿರ್ವಹಿಸುತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
ಈತನನ್ನು ಏಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.