ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಎನ್ಸಿಪಿ ಪಕ್ಷದ ಪ್ರಮುಖ ನಾಯಕ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ವಿರುದ್ಧ ತೊಡೆತಟ್ಟಿ ಹೊರಬಂದಿದ್ದಾರೆ. ಈ ರಾಜಕೀಯ ತಲ್ಲಣವನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಒಂದಾಗಿದ್ದ ವಿಪಕ್ಷ ನಾಯಕರಿಗೆ ಕಂಟಕ ಪ್ರಾರಂಭವಾಗಿದೆಯೇ? ಎಂಬ ಪ್ರಶ್ನೆ ಕಾಡಲು ಪ್ರಾರಂಭವಾಗಿದೆ.
ದೇಶದಲ್ಲಿ ಮೋದಿಯನ್ನು ಸೋಲಿಸಲು ವಿಪಕ್ಷ ನಾಯಕರನ್ನು ಒಗ್ಗೂಡಿಸುತ್ತಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವೇ ಈಗ ಇಬ್ಬಾಗವಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರು ಸ್ವಪಕ್ಷಕ್ಕೆ ದೊಡ್ಡ ಅಘಾತ ನೀಡಿದ್ದಾರೆ. ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿರಾಕರಿಸಿದ ಬೆನ್ನಲ್ಲೇ ಆಡಳಿತ ಪಕ್ಷ (ಶಿವಸೇನೆ-ಬಿಜೆಪಿ) ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶರದ್ ಪವಾರ್ಗೆ ಅಜಿತ್ ಪವಾರ್ ಸೆಡ್ಡು ಹೊಡೆದಿದ್ದು, ಎನ್ಸಿಪಿಯಲ್ಲಿ ರಾಜಕೀಯ ಬಿರುಕುಂಟಾಗಿದೆ.
ಇಷ್ಟುದಿನ ಎನ್ಸಿಪಿ ಒಳಗೆ ಕುದಿಯುತ್ತಿದ್ದ ಕಿಚ್ಚು ಈಗ ಜ್ವಾಲೆಯಾಗಿದೆ. ಕಳೆದ ಕೆಲವು ತಿಂಗಳಿಂದ ಶರದ್ ಪವಾರ್ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನಕ್ಕೆ ಈಗ ಅಂತಿಮ ಉತ್ತರ ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಮೊದಲೇ ಮಹಾರಾಷ್ಟ್ರ ರಾಜಕೀಯ ದೇಶದ ಗಮನ ಸೆಳೆಯುತ್ತಿದೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದಾನೊಂದು ಕಾಲದಲ್ಲಿ ಪ್ರಬಲ ಪಕ್ಷವಾಗಿ ಗುರುತಿಸಿಕೊಂಡಿದ್ದ ಎನ್ಸಿಪಿ, ಕೇಂದ್ರ ಸರ್ಕಾರ ರಚನೆಯಲ್ಲೂ ಪ್ರಭಾವ ಬೀರುವಷ್ಟು ಬಲವಾಗಿ ಬೆಳೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಎನ್ಸಿಪಿಯ ಸ್ಥಿತಿ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ಕೂಡ ಕೈಕೊಟ್ಟಿದ್ದಾರೆ.
ಹಲವು ಸಮಯದಿಂದ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದ ಎನ್ಸಿಪಿ ನಾಯಕ ಅಜಿತ್ ಪವಾರ್, ಭಾನುವಾರ ತಮ್ಮ 8 ಬೆಂಬಲಿಗ ಶಾಸಕರ ಜತೆಗೂಡಿ ಶಿಂಧೆ ಶಿವಸೇನೆ-ಬಿಜೆಪಿ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಅಜಿತ್ ಪವಾರ್ ಮಹಾರಾಷ್ಟ್ರ ನೂತನ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು, ಪ್ರಮಾಣ ವಚನ ಕೂಡ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಅಜಿತ್ ಪವಾರ್ ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಕೆಲ ಶಾಸಕರ ಜೊತೆ ಸಭೆ ನಡೆಸಿದ್ದರು. ಅದರಲ್ಲಿ ಪವಾರ್ ಪುತ್ರಿ ಸುಪ್ರಿಯಾ ಸುಳೆ ಕೂಡಾ ಭಾಗಿಯಾಗಿದ್ದರು. ಆದರೆ ಸುಪ್ರಿಯಾ ಸಭೆ ಮುಗಿಯುವ ಮುನ್ನವೇ ತೆರಳಿದ್ದರು. ಇದಾದ ಕೆಲವೇ ಹೊತ್ತಿನಲ್ಲೇ ಬಿಜೆಪಿ, ಶಿವಸೇನೆ ನಾಯಕರ ಜೊತೆಗೆ ರಾಜಭವನದಲ್ಲಿ ತೆರಳಿದ ಅಜಿತ್ ಪವಾರ್ ಹಾಗೂ 8 ಬೆಂಬಲಿಗ ಶಾಸಕರ ಎನ್ಡಿಎ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರ ಸೇರುತ್ತಿರುವುದಾಗಿ ಘೋಷಿಸಿದರು.
ಇನ್ನು ಅಜಿತ್ ಪವಾರ್ ಜೊತೆಗೆ 8 ಎನ್ಸಿಪಿ ಶಾಸಕರು ಮಾತ್ರ ಹೋಗಬಹುದು ಎಂದು ಅಂದಾಜು ಮಾಡಲಾಗಿತ್ತು. ಆದ್ರೆ ಲೆಕ್ಕಾಚಾರ ಉಲ್ಟಾ ಆಗಿದೆ. ಸಚಿವರಾದ 9 ಶಾಸಕರು ಸೇರಿ 13 ಶಾಸಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡು ಅಜಿತ್ಗೆ ಬೆಂಬಲ ಸಾರಿದ್ದು, ಎನ್ಸಿಪಿ ನಾಯಕರಿಗೆ ಸಿಡಿಲು ಬಡಿದಂತಾಗಿದೆ.
ಅಜಿತ್ ಪವಾರ್ ಬಂಡಾಯಕ್ಕೆ ಕಾರಣ:
ಶರದ್ ಪವಾರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಹುದ್ದೆ ಏರುವ ಕನಸು ಅಜಿತ್ರದ್ದಾಗಿತ್ತು. ಆದರೆ ಇತ್ತೀಚೆಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿ ಬಳಿಕ ಹಿಂದಕ್ಕೆ ಪಡೆದಿದ್ದ ಶರದ್ ಪವಾರ್, ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಪ್ರಫುಲ್ ಪಟೇಲ್ ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಅವರನ್ನು ನೇಮಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಜಿತ್ ಪವಾರ್, ತಮ್ಮ ಬೆಂಬಲಿಗರೊಡಗೂಡಿ ಬಂಡಾಯ ಏಳಲು ನಿರ್ಧರಿಸಿದರು ಎನ್ನಲಾಗಿದೆ.
ಒಂದೇ ಕಲ್ಲು ಎರಡು ಹಕ್ಕಿ ಹೊಡೆದ ಜಿಜೆಪಿ:
ಲೋಕಸಭೆ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರದ ಬಿಜೆಪಿ ನಾಯಕರಿಗೆ ಈಗ ಪ್ರಮುಖವಾದ ಎದುರಾಳಿ ಎನ್ಸಿಪಿ. ಈಗಾಗಲೇ ಶಿವಸೇನೆ ಛಿದ್ರವಾಗಿದ್ದು, ತನ್ನ ಮತ್ತೊಬ್ಬ ಎದುರಾಳಿಗೆ ಠಕ್ಕರ್ ಕೊಡಲು ಸ್ಥಳೀಯ ಬಿಜೆಪಿ ನಾಯಕರು ಈ ತಂತ್ರ ಅನುಸರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆ ನಡೆದು 5-6 ತಿಂಗಳ ಒಳಗೆ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಇದೇ ಕಾರಣಕ್ಕೆ ಅಜಿತ್ ಪವಾರ್ಗೆ ಗಾಳ ಹಾಕಿದ್ದ ಬಿಜೆಪಿ ನಾಯಕರು, ಈಗ ಡಿಸಿಎಂ ಸ್ಥಾನ ನೀಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
ಈಗ ನೀಡಿರುವ ಡಿಸಿಎಂ ಪಟ್ಟವೇ ಅಂತಿಮವಲ್ಲ, ಏಕೆಂದರೆ ಮುಂದೆ ಏಕನಾಥ್ ಶಿಂಧೆ ನಿಯಂತ್ರಣಕ್ಕೆ ಅಜಿತ್ ಪವಾರ್ ಪವರ್ ನೀಡಬಹುದು. ಇತ್ತೀಚೆಗೆ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕರ ನಡುವೆಯೇ ಕಿತ್ತಾಟ ಜೋರಾಗಿದೆ. ಇಂತಹ ಪರಿಸ್ಥಿತಿ ಬಂದರೆ ಮುಂದೆ ಅಜಿತ್ಗೆ ಸಿಎಂ ಸ್ಥಾನ ಸಿಕ್ಕರೂ ಸಿಗಬಹುದು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅಜಿತ್ ಪವಾರ್ ಬಲ ಸಿಗಲಿದೆ. ಈ ಎಲ್ಲಾ ಕಾರಣದಿಂದ ಈಗ ಅಜಿತ್ ಪವಾರ್ ಸೇರ್ಪಡೆ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪವರ್ ನೀಡಿದೆ. ಅಕಸ್ಮಾತ್ ಈ ರಣತಂತ್ರ ನಿಜವಾಗಿದ್ದೇ ಆದರೆ ಒಂದೇ ಕಲ್ಲಿನಲ್ಲಿ ಬಿಜೆಪಿ ಎರಡು ಹಕ್ಕಿಗೆ ಗುರಿ ಇಟ್ಟಂತಾಗಿದೆ.
ವಿಪಕ್ಷ ನಾಯಕರಲ್ಲಿ ಒದ್ದಾಟ:
ಇನ್ನು ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಉದ್ದೇಶ. ಒಬ್ಬರೇ ಚುನಾವಣೆ ಎದುರಿಸಲು ಆಗದು ಎಂಬ ಕಾರಣಕ್ಕೆ ಬಿಜೆಪಿ ಪಕ್ಷ ಶಿವಸೇನೆ ಜೊತೆ ಮತ್ತು ಕಾಂಗ್ರೆಸ್ ನಾಯಕರು ಎನ್ಸಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೇ ಎನ್ಸಿಪಿ ವಿಭಜನೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಲೋಕಸಭೆ ಚುನಾವಣೆಗೆ ಮುನ್ನ ವಿಪಕ್ಷ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸಭೆ ನಡೆಸಿ, ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಬಿಹಾರ ಸಿಎಂ ಮಾಡುತ್ತಿದ್ದರು. ಆದರೆ ಎನ್ಸಿಪಿ ಪಕ್ಷದ ಬೆಳವಣಿಗೆ ವಿರೋಧ ಪಕ್ಷಗಳ ಒಗ್ಗಟ್ಟಿಗೇ ಆಘಾತ ನೀಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟುವ ನಿರೀಕ್ಷೆಯಲ್ಲಿದ್ದ ವಿಪಕ್ಷಗಳಿಗೆ ದಿಕ್ಕುತೋಚದಂತಾಗಿದೆ.