ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ವಿಧಾನಮಂಡಲ ಅಧಿವೇಶನ ಇಂದಿನಿಂದ ಪ್ರಾರಂಭಗೊಂಡಿದೆ.
ಇದೇ ವೇಳೆ ಮೊದಲ ದಿನ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಕಾಂಗ್ರೆಸ್ ಪರ ಭಾಷಣ ಮಾಡಿರುವುದು ಅಚ್ಚರಿಯನ್ನುಂಟು ಮಾಡಿದೆ.
ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರವೆಂದು ಕರೆಸಿಕೊಳ್ಳುತ್ತದೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದಂತಾಗಿದೆ.
ರಾಜ್ಯ ಸರ್ಕಾರ ಬಸವಣ್ಣನವರ ತತ್ವ, ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರ ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ ಎಂದರು.
ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ.
ಆಹಾರ ಭದ್ರತೆ ಕಾಯ್ದೆ ಅಡಿ ಪ್ರಸ್ತುತ 5 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಸೇರಿ 10 ಕೆಜಿ ಕೊಡುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತ ಮಾಡಲಿದ್ದೇವೆ. ಪ್ರತಿ ಕೆಜಿಗೆ 34 ರೂ. ವರ್ಗಾವಣೆ ಮಾಡುತ್ತೇವೆ. ಇದಕ್ಕಾಗಿ ಯಾವುದೇ ತ್ಯಾಗ ಮಾಡುತ್ತೇವೆ. ಅನ್ನ ನೀಡದ ಸರ್ಕಾರವನ್ನ ಜನ ದ್ರೋಹಿ ಸರ್ಕಾರ ಎನ್ನುತ್ತಾರೆ ಎಂದು ಹೇಳಿದ ಅವರು ತಮ್ಮದೇ ಕೇಂದ್ರ ಸರ್ಕಾರವನ್ನು ಟೀಕಿಸಿದಂತಾಗಿದೆ.
ಆದರೆ ಕೇಂದ್ರ ಸರ್ಕಾರ ಕೃಷಿ ಹಾಗೂ ರೈತರ ಕಲ್ಯಾಣಕ್ಕಾಗಿ ವಾರ್ಷಿಕವಾಗಿ 6.5 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೆ ತಿಳಿಸಿದ್ದರು.
ಕಳೆದ ಒಂಬತ್ತು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸಿದ್ದು, 15 ಲಕ್ಷ ರೂ. ಕೋಟಿಗೂ ಅಧಿಕ ಹಣವನ್ನು ರೈತರಿಗೆ ನೀಡಲಾಗಿದೆ. ಕಳೆದ ವರ್ಷ ರಸಗೊಬ್ಬರ ಸಬ್ಸಿಡಿಗಾಗಿ 10 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದಿದ್ದರು.
ಇದೀಗ ರಾಜ್ಯ ಸರ್ಕಾರದ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಜನರಿಗೆ ಲಾಭದಾಯಕವಾಗಿದೆ. ಇನ್ನು ರೈತರಿಗೆ ಸಹಾಯವಾಗುವ ಹಾಗೆ ಬಾಕಿಯಾಗಿರುವ ನೀರಾವರಿ ಯೋಜನೆ, ಬೀಜ, ಗೊಬ್ಬರ ಸರಿಯಾಗಿ ಒದಗಿಸಲಿದ್ದೇವೆ ಎಂದು ರಾಜ್ಯಪಾಲರು ಹೇಳಿದರು.
ಕರ್ನಾಟಕದ ರಾಜ್ಯಪಾಲರಾಗಿ ಭಾರತೀಯ ಜನತಾ ಪಕ್ಷದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿರುವುದು ಅಚ್ಚರಿಯಾಗಿದೆ.
ಇದೇ ರೀತಿ ಬಿಜೆಪಿ ಸರ್ಕಾರದ ರಾಜ್ಯಪಾಲರನ್ನು ಹೊಂದಿರುವ ತಮಿಳುನಾಡು ಸರ್ಕಾರವೂ ತಮ್ಮ ರಾಜ್ಯಪಾಲರ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಹೈ ಡ್ರಾಮ ನಡೆದಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸಿ, ರಾಜ್ಯಪಾಲ ಆರ್.ಎನ್. ರವಿ ಅವರು ಅಧಿವೇಶನದ ಮಧ್ಯದಲ್ಲೇ ವಿಧಾನಸಭೆಯಿಂದ ಹೊರನಡೆದಿದ್ದರು.
ರಾಜ್ಯ ಸರ್ಕಾರ ಸಿದ್ಧಪಡಿಸಿದ ರಾಜ್ಯಪಾಲರ ಭಾಷಣವನ್ನು ಮಾತ್ರ ಸ್ಪೀಕರ್ ಅನುಮೋದಿಸಬೇಕು. ರಾಜ್ಯಪಾಲರು ಹೆಚ್ಚುವರಿಯಾಗಿ ಸೇರಿಸಿದ ಮತ್ತು ಭಾಷಣದ ಆಯ್ದ ಭಾಗಗಳನ್ನು ಬಿಟ್ಟ ಅಂಶಗಳನ್ನು ತೆಗೆದು ಹಾಕಬೇಕು ಎಂದು ಸಿಎಂ ಎಂ.ಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಮಂಡಿಸಿದರು. ಬಳಿಕ ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ದಾಖಲಿಸುವ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಿತು.
ಇದರಿಂದ ಕೆರಳಿದ ರಾಜ್ಯಪಾಲ ಆರ್.ಎನ್. ರವಿ, ರಾಷ್ಟ್ರಗೀತೆ ಮುಕ್ತಾಯಕ್ಕೂ ಮುನ್ನವೇ ವಿಧಾನಸಭೆಯಿಂದ ಹೊರನಡೆದಿದ್ದರು.
ಇತ್ತೀಚಿಗೆ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯಪಾಲ ಆರ್. ಎನ್. ರವಿ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ಈ ಆದೇಶವನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ.
ಆದರೆ ರಾಜ್ಯಪಾಲರ ಈ ನಡೆಯನ್ನು ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸುಪ್ರಿಯಾ ಸುಳೆ ಇದು ಸರ್ವಾಧಿಕಾರ ಎಂದು ಟೀಕಿಸಿದ್ದರು. ರಾಜ್ಯಪಾಲರಾದ ರವಿ ಅವರು ತಮಿಳುನಾಡಿನ ರಾಜ್ಯಪಾಲರೆಂಬುದನ್ನು ಮರೆತು ಬಿಜೆಪಿ ರಾಜ್ಯಪಾಲರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣದಲ್ಲಿ ಜೂ.14ರಂದು ಇಡಿ ಬಾಲಾಜಿ ಅವರನ್ನು ಬಂಧಿಸಿತ್ತು. ಇದು ಮಾತ್ರವಲ್ಲಿದೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳಲ್ಲಿ ಬೇರೆ ಸರ್ಕಾರಗಳು ಇರುವುದರಿಂದ ಈ ರೀತಿಯಾದ ಸಮಸ್ಯೆಗಳು ಎದುರಾಗುತ್ತಿದ್ದು, ಜನತೆ ಸರ್ಕಾರಗಳ ಯೋಜನೆ ಹಾಗೂ ಮುಂದಿನ ಹೆಜ್ಜೆಗಳ ಬಗ್ಗೆ ಗೊಂದಲ ಉಂಟು ಮಾಡುವ ಅನೇಕ ಪರಿಸ್ಥಿತಿಗಳು ಎದುರಾಗಬಹುದು.