ಬೇಸಿಗೆ ಕಳೆದು ಮುಂಗಾರು ಸುರಿಯುತ್ತಿದ್ದಂತೇ ಜ್ವರ, ಶೀತ, ಭೇದಿ, ಅಜೀರ್ಣ ಹೀಗೆ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ನಮ್ಮ ಆಹಾರ ಪದ್ಧತಿ ಮತ್ತು ಚಟುವಟಿಕೆಗಳನ್ನು ಈ ಋತುವಿಗೆ ಅನುಗುಣವಾಗಿ ಬದಲಾಯಿಸಿದಲ್ಲಿ ಕೆಲವಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಅದಲ್ಲದೆ, ಡೆಂಗ್ಯೂ, ಮಲೇರಿಯ, ಇಲಿಜ್ವರ ಮುಂತಾದ ಮಾರಕ ರೋಗಗಳೂ ಈ ಋತುವಿನಲ್ಲಿ ಜಾಸ್ತಿ. ಹಾಗಿದ್ದರೆ ಮಳೆಗಾಲದಲ್ಲಿ, ನಮ್ಮ ಆರೋಗ್ಯವನ್ನು ಹೇಗೆ ಆಯುರ್ವೇದದ ಮೂಲಕ ಕಾಪಾಡಿಕೊಳ್ಬೋದು ನೋಡೋಣ.
ಮಳೆಗಾಲದಲ್ಲಿ ನಮ್ಮ ಜೀರ್ಣ ಶಕ್ತಿಯು ಕಡಿಮೆ ಇರುವ ಕಾರಣ ಆದಷ್ಟು ಜೀರ್ಣಕ್ಕೆ ಹಗುರವಾದ ಆಹಾರವನ್ನು ಸೇವಿಸುವುದು ಉತ್ತಮ . ಆಹಾರದಲ್ಲಿ ಹಳೆ ಅಕ್ಕಿ (ಒಂದು ವರ್ಷ ಹಳೆಯದು) ಗೋಧಿ, ಧಾನ್ಯಗಳಿದ್ದರೆ ಒಳ್ಳೆಯದು. ನವ ಅಕ್ಕಿ, ಧಾನ್ಯಗಳು ಜೀರ್ಣಕ್ಕೆ ಕಷ್ಟ ಹಾಗೇ ದೇಹದಲ್ಲಿ ಕಫ ದೋಷವನ್ನು, ನೀರಿನಂಶವನ್ನು ಜಾಸ್ತಿ ಮಾಡುತ್ತದೆ. ಮಾಂಸಾಹಾರದಲ್ಲಿ ಆಡು ,ಕೋಳಿ ಇತ್ಯಾದಿ ಮಾಂಸರಸಕ್ಕೆ (ಸೂಪ್ )ಶುಂಠಿ, ತುಪ್ಪ ಹಾಕಿ ತೆಗೆದುಕೊಳ್ಳಬಹುದು.
ವಿವಿಧ ರೀತಿಯ ಸಾರುಗಳು ಉದಾಹರಣೆಗೆ ಹುರುಳಿ ( ಪಿತ್ತ ಪ್ರಕೃತಿಯವರಿಗೆ ಬೇಡ ), ಪುನರ್ಪುಳಿ ಕಪ್ಪು ಕಡ್ಲೆ , ಹಾಗೇ ಜೀರ್ಣಕ್ಕೆ ಹಗುರವಾದ ತರಕಾರಿಗಳಾದ ಮಂಗಳೂರು ಸೌತೆ , ಹೀರೆ,
ಪಟ್ಲ, ಕುಂಬಳ, ಸೊರೆಕಾಯಿ ಯ ಬಳಕೆ ಉತ್ತಮ. ಅಡುಗೆಯಲ್ಲಿ ಶುಂಠಿ , ಕಾಳುಮೆಣಸು, ಬೆಳ್ಳುಳ್ಳಿ, ಹಿಪ್ಪಲಿ ಗಳನ್ನು ಮಿತ ಪ್ರಮಾಣದಲ್ಲಿ ಬಳಸಬೇಕು. ಒಟ್ಟಿನಲ್ಲಿ ಹೇಳುವುದಾದರೆ ಮಳೆಗಾಲದಲ್ಲಿ ವಾತ ದೋಷವು ಜಾಸ್ತಿಯಾಗುವ ಕಾರಣ ವಾತವನ್ನು ಜಾಸ್ತಿ ಮಾಡುವಂತಹ ಕಹಿ, ಚೊಗರು ಆಹಾರ, ಜಾಸ್ತಿ ವ್ಯಾಯಾಮ, ತಣ್ಣನೆ ಗಾಳಿಗೆ ಮೈ ಒಡ್ಡುವುದನ್ನ ಆದಷ್ಟು ಕಡಿಮೆ ಮಾಡಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮಳೆಗಾಲದಲ್ಲಿ ಏನು ತಿನ್ನಬೇಕು
* ದಾಳಿಂಬೆ, ಮಾವು, ಹಣ್ಣುಗಳನ್ನು ಮಿತವಾಗಿ ಸೇರಿಸಿಕೊಳ್ಳಲು ಅಡ್ಡಿಯಿಲ್ಲ.
* ಕಪ್ಪು ಉಪ್ಪು ( Black salt ) ನ್ನು ಆಹಾರದಲ್ಲಿ ಬಳಸಿದಲ್ಲಿ ಜೀರ್ಣ ಶಕ್ತಿ ಹೆಚ್ಚು ವುದರ ಜೊತೆಗೆ ಮಳೆಗಾಲದಲ್ಲಿ ಕಾಡುವ ಮಲಬದ್ಧತೆಯೂ ಕಡಿಮೆಯಾಗುತ್ತದೆ.
*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಉತ್ತಮ.
* ಆಹಾರದಲ್ಲಿ ಬಾರ್ಲಿ, ಗೋಧಿ ಇರಲಿ.
* ಕಾಳುಮೆಣಸು ಅಥವಾ ಹಿಪ್ಪಲಿ ಚಿಟಿಕೆಯಷ್ಟು ಹಾಕಿದ ಮಜ್ಜಿಗೆ ಇರಲಿ .
* ಕುದಿಸಿ ಆರಿಸಿದ ನೀರನ್ನೇ ಬಳಸಿ
*ಮಾಂಸರಸ (Soup) ಮಿತವಾಗಿರಲಿ
*ಬೇಯಿಸಿದ ತರಕಾರಿ ಸಲಾಡ್ ಬಳಸಿ. ಹಸಿ ಬೇಡ
* ನೀರಿಗೆ (ಬಿಸಿ ನೀರು ಅಲ್ಲ)ಸ್ವಲ್ಪ ಜೇನುತುಪ್ಪ ಹಾಕಿ ವಾರದಲ್ಲೆರಡು ಸಲ ಸೇವಿಸಬಹುದು
*ಮನೆಯಲ್ಲೇ ತಯಾರಿಸಿದ ಸೂಪ್ ಕುಡಿಯಬಹುದು
*ಹದ ಬಿಸಿನೀರಿಗೆ ನಿಂಬೆಹುಳಿ ರಸ ಹಾಗೇ ಕಪ್ಪುಉಪ್ಪು ಹಾಕಿ ತೆಗೆದುಕೊಳ್ಳಬಹುದು
* ಮನೆಯಲ್ಲಿ ಆದಷ್ಟು ಸೊಳ್ಳೆ ಪರದೆ ಉಪಯೋಗ ಹಾಗೇ ಹೊರಗೆ ಹೋಗುವಾಗ ಲೆಮನ್ ಗ್ರಾಸ್ ಮುಂತಾದವುಗಳಿಂದ ಮಾಡಿದ ಸೊಳ್ಳೆ ನಿವಾರಕ ಕ್ರೀಮ್ ಗಳ ಬಳಕೆ ಮಾಡಿ.
ಮಳೆಗಾಲದಲ್ಲಿ ಏನನ್ನು ಬಿಡಬೇಕು
*ಐಸ್ ಕ್ರೀಮ್ ನಂತಹ ತಣ್ಣನೆ ಆಹಾರ ಬೇಡ
* ಬಜ್ಜಿ, ಬೋಂಡ , ಚಾಟ್ಸ್ ಇತ್ಯಾದಿಗಳನ್ನು ಆದಷ್ಟು ಹೊರಗಡೆಯಿಂದ ತಿನ್ನದಿದ್ದರೆ ಉತ್ತಮ. ನೀರು ಕಲುಷಿತವಾಗಿರುವ ಕಾರಣ ಇದು ಆಮಶಂಕೆ ಭೇದಿ ಗಳಿಗೆ ಕಾರಣವಾಗಬಹುದು
* ಹಾಗಲ ಕಾಯಿಯಂತಹ ಕಹಿಯಾಗಿರುವ ತರಕಾರಿ ಮತ್ತು ಗಿಡಮೂಲಿಕೆಯಾದ ಬೇವು ಬೇಡ.
*ಪಾಲಕ್ ಮತ್ತು ಬಸಳೆಯಂತಹ ಹಸಿರೆಲೆ ತರಕಾರಿಗಳು ಹೆಚ್ಚು ಬೇಡ.
*ಹಣ್ಣಿನ ಜ್ಯೂಸ್ ಬೇಡ
* ಆಲೂಗಡ್ಡೆ, ಹೂಕೋಸು, ಬೆಂಡೆ, ಸಿಹಿ ಗೆಣಸು, ಬೀಟ್ರೂಟ್, ಅವರೆಕಾಳು, ಬಟಾಣಿ, ಮೊಳಕೆ ಭರಿಸಿದ ಧಾನ್ಯಗಳು, ಕಿಡ್ನಿ ಬೀನ್ಸ್ ಮತ್ತು ಬೇರೆ ಬೀನ್ಸ್ ನ್ನು ಉಪಯೋಗಿಸದಿದ್ದಲ್ಲಿ ಉತ್ತಮ.
*ಹಸಿ ತರಕಾರಿ ಸಲಾಡ್ ಗಳು ಜೀರ್ಣಕ್ಕೆ ಕಷ್ಟ ವಾದ್ದರಿಂದ ಬೇಡ
* ವ್ಯಾಯಾಮ ಜಾಸ್ತಿ ಬೇಡ . ಕೆಲವಷ್ಟು stretching ಗಳು ಮಾತ್ರ ಸಾಕು.
ಆಯುರ್ವೇದವು, ನಮ್ಮ ಆಹಾರ ವಿಹಾರಗಳು ಋತುವಿಗೆ ಅನುಗುಣವಾಗಿದ್ದು
ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತಿದ್ದು, ದೋಷಗಳ ಸಮತೋಲನವನ್ನು ಕಾಯ್ದುಕೊಂಡಿರುವಂತೆ ನೋಡಿಕೊಂಡಲ್ಲಿ ಉತ್ತಮ ಆರೋಗ್ಯ ಖಂಡಿತ ಎಂದಿದೆ.