ಸುದ್ದಿ ಸಮಾಚಾರ: ಇಲ್ಲಿದೆ ಪ್ರಮುಖ ಸುದ್ದಿಗಳ ರೌಂಡ್ ಅಪ್
ಹವಾಮಾನ ವರದಿ: ತಿಂಗಳಾಂತ್ಯದವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 30ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗಲಿದೆ.
ಸದ್ಯ ಮಲೆನಾಡಲ್ಲಿ ಶೇ. 77, ಕರಾವಳಿಯಲ್ಲಿ ಶೇ. 66, ಉತ್ತರ ಕರ್ನಾಟಕದಲ್ಲಿ ಶೇ. 58 ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶೇ.22 ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ಸಂಸದೀಯ ಭಾಷೆ ಕಲಿತು ವಿಷಯ ತಜ್ಞರಾಗಿ: ಶಾಸಕರಿಗೆ ಮುಖ್ಯಮಂತ್ರಿ ಸಲಹೆ
ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಿ ಎಂದರು.
ಬಸವಣ್ಣನವರ ಬಜೆಟ್: ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಅಂಶವಾಗಿದ್ದು, ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.
ಭಾಷಣದ ಹೈಲೈಟ್ಸ್
- 224 ಶಾಸಕರುಗಳಲ್ಲಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದವರು 70 ಮಂದಿ.
- ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
- ರಾಜ್ಯದ ಮೊದಲ ಬಜೆಟ್ ಕೇವಲ 21 ಕೋಟಿ 3 ಲಕ್ಷ ಇತ್ತು.
- ಈಗಿನ ಬಜೆಟ್ 3 ಲಕ್ಷದ 9 ಸಾವಿರ ಕೋಟಿ ಆಗಿದೆ.
- ಬಡವರ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕೆ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಿಗೆ 50 ಸಾವಿರ ಕೋಟಿಯಷ್ಟು ಹಣ ಬೇಕಾಗುತ್ತದೆ.
ವಿಶ್ವ ಮಾದಕ ವಸ್ತು ವಿರೋಧಿ ದಿನ: ಬೃಹತ್ ಕಾಲ್ನಡಿಗೆ ಜಗೃತಿ ಜಾಥಾದಲ್ಲಿ ಡಿಕೆಶಿ ಭಾಗಿ
ವಿಶ್ವ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಕಾಲ್ನಡಿಗೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪಾಲ್ಗೊಂಡರು.
ವಿದ್ಯಾರ್ಥಿಗಳ ನಡುವೆ ನಿಂತು ಮಾದಕ ವಸ್ತು ವಿರೋಧಿ ದಿನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಶಾಲಾ ಮಕ್ಕಳ ಜತೆಗೂಡಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಹೆಜ್ಜೆ ಹಾಕಿದರು.
ಯುವಜನ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ, ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ ವೂಡೇ ಪಿ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ನಿಲ್ಲಿಸದ ಚಾಲಕ: ಬಸ್’ಗೆ ಕಲ್ಲೆಸೆದ ಮಹಿಳೆಗೆ 5 ಸಾವಿರ ದಂಡ
ಬಸ್ ನಿಲ್ಲಿಸದ ಕಾರಣ ಸಿಟ್ಟಿಗೆದ್ದು ಮಹಿಳೆಯೊಬ್ಬರು ಸರ್ಕಾರಿ ಬಸ್ ಗೆ ಕಲ್ಲು ಎಸೆದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ಭಾನುವಾರ ನಡೆದಿದ್ದು, ಮಹಿಳೆಗೆ ದಂಡ ವಿಧಿಸಲಾಗಿದೆ.
ಬಸ್ ನ ಚಾಲಕ/ ನಿರ್ವಾಹಕ ಮುಕ್ಕಣ್ಣ ಕುಕನೂರು ಅವರು ಕಲ್ಲು ಎಸೆದ ಮಹಿಳೆಯನ್ನು ಎಲ್ಲ ಪ್ರಯಾಣಿಕರ ಸಮೇತ ಬಸ್ ಅನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.
ಗ್ರಾಹಕರ ಪಾಲಿಗೆ ಹುಳಿಯಾದ ಟೊಮ್ಯಾಟೊ: ಉಳಿದ ತರಕಾರಿಗಳೂ ದುಬಾರಿ!
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ತರಕಾರಿಗಳ ಬೆಲೆ ಗಗನಮುಖಿಯಾಗುತ್ತಿದೆ. ಟೊಮ್ಯಾಟೊ ದರ ನೂರು ರೂಪಾಯಿ ಸನಿಹಕ್ಕೆ ಬಂದಿದ್ದು, 15 Kg ಟೊಮ್ಯಾಟೊ ಬಾಕ್ಸ್ ಸಾವಿರ ರೂ ಇದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಾಧಾರಣ ಟೊಮೆಟೊ ಬೆಲೆ ಕೆಜಿಗೆ 30 ರಿಂದ 40 ರೂ. ಇತ್ತು. ಭಾನುವಾರ ಸಂಜೆಯ ವೇಳೆಗೆ ಕೆಜಿಗೆ 50 ರಿಂದ 60 ರೂಪಾಯಿಗೆ ಏರಿಕೆ ಕಂಡಿದೆ. ಉತ್ತಮ ಗುಣಮಟ್ಟದ ಟೊಮೆಟೊ ಬೆಲೆ 80 ರಿಂದ 90 ರೂ. ತನಕ ಏರಿಕೆಯಾಗಿದೆ.
ಇತರ ತರಕಾರಿಗಳ ಬೆಲೆಗಳು ಸಹ ಏರಿಕೆ ಕಂಡಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಶುಂಠಿ ಪ್ರತಿ ಕೆಜಿಗೆ 310 ರೂ. ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬದನೆಕಾಯಿ, ಬಟಾಣಿ ಹಾಗೂ ಮೆಣಸಿನಕಾಯಿ ದರಗಳು ಸಹ ಏರಿಕೆ ಕಂಡಿವೆ.
ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ
ನನಗೆ ಗೊತ್ತಿರುವ ಹಾಗೆ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ. ಪರೀಕ್ಷೆ ಹಾಗೂ ಚುನಾವಣೆ ವೇಳೆ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಈಗ ಮೈಂಟೇನೆನ್ಸ್ ಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಕರೆಂಟ್ ಶಾರ್ಟೇಜ್ ಆಗಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಚ್ ಸ್ಪಷ್ಟಪಡಿಸಿದರು.
ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇನ್ನು ಇದೇ ವೇಳೆ ಜೆಸ್ಕಾ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಕೆಜೆ ಚಾರ್ಜ್, ನಾನೇನು ಹೊಸದಾಗಿ ಮಂತ್ರಿಯಾಗಿಲ್ಲ. ಓವರ್ ಲೋಡ್ ಕಡಿಮೆ ಮಾಡಲು ಏನ್ ಮಾಡುತ್ತೀರಿ. ನಿಮ್ಮ ಕೈಲಾಗದೇ ಇದ್ದರೆ ಹೆಡ್ ಆಫೀಸ್ ಗೆ ಹೇಳಿ. ಅದನ್ನು ಬಿಟ್ಟು ಜನರಿಗೆ ತೊಂದರೆಕೊಡಬೇಡಿ ಎಂದರು.
ಇದೇ ವೇಳೆ ವಿದ್ಯುತ್ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ್ದು,ವಿದ್ಯುತ್ ದರ ಹೆಚ್ಚಿಸಿದ್ದು ಯಾರು? ನಾಲ್ಕು ವರ್ಷ ಯಾರು ಸರ್ಕಾರ ನಡೆಸಿದ್ದು? ಕರೆಂಟ್ ಬಿಲ್ ಕೇಂದ್ರ ಸರ್ಕಾರದ ಕಾಯ್ದೆಯಡಿ ಹೆಚ್ಚಾಗಿದೆ. ನವೆಂಬರ್ ಅಲ್ಲಿ ಕರ್ನಾಟಕ ಇಲೆಕ್ಟ್ರಿಕ್ ಸಿಟಿ ರೆಗ್ಯುಲೇಟರಿ ಅಥಾರಿಟಿ ಕಮಿಷನ್ ಇದನ್ನ ತೆಗೆದುಕೊಂಡಿದ್ದಾರೆ. ಎಸ್ಕಾಂಗಳು,ಇಂಡಸ್ಟ್ರಿ ಅವರು ಸಂಪರ್ಕಿಸಿದ್ದಾರೆ. ಅವರು (ಬಿಜೆಪಿ) ಮಾರ್ಚ್ ನಲ್ಲಿ ತೀರ್ಮಾನಿಸಬೇಕಿತ್ತು.. ಚುನಾವಣೆ ಅಂತ ಮೇ 12 ಕ್ಕೆ ಆದೇಶಿಸಿದ್ದಾರೆ. ಆಗ ಯಾವ ಸರ್ಕಾರ ಇತ್ತು ಎಂದು ಪ್ರಶ್ನಿಸಿದರು.