ಬಾಗಲಕೋಟೆ: ನಾವು ಬರೀ ರೈತರ ಅಸಾಹಯಕತೆ, ಸಾಲ ಬಾಧೆ, ಅವರ ಆತ್ಮಹತ್ಯೆ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದರೆ ಇಲ್ಲೊಂದು ರೈತರ ಸ್ಟೋರಿ ಅವರ ಸಾಹಸಗಾಥೆ ಬಗ್ಗೆ ಸಾರಲಿದೆ.
ಸಿಎಂ ಮಾತನ್ನು ಸವಾಲಾಗಿ ಸ್ವೀಕರಿಸಿ ಜಲಾಶಯ ನಿರ್ಮಿಸಿದ ರೈತ ಪಡೆ!
1985 ರಲ್ಲಿ ರೈತರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಳಿ ಚಿಕ್ಕಪಡಸಲಗಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಕೋರಿದರು. ಆದರೆ ಅನುದಾನ ನೀಡುವ ಮೊದಲು 5 ಲಕ್ಷ ರೂಪಾಯಿ ಸಂಗ್ರಹ ಮಾಡುವಂತೆ ಹೆಗಡೆ ಸೂಚಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದು ನ್ಯಾಮಗೌಡ ನೇತೃತ್ವದ ರೈತರ ಗುಂಪು ಕೃಷ್ಣಾ ತೀರದ ರೈತ ಸಂಘ ಹೆಸರಿನಲ್ಲಿ ಕೃಷ್ಣಾ ಬ್ಯಾಂಕ್ ರೈತರ ಸಂಘ ಸ್ಥಾಪಿಸಿ ಪ್ರತಿಯೊಬ್ಬ ರೈತರಿಂದ 500 ರು ಹಣ ಸಂಗ್ರಹಿಸಿದರು. ಸುಮಾರು 30 ಹಳ್ಳಿಗಳ ಜನರು, ತಮ್ಮ ಹಣ ಹಾಗೂ ಭೂಮಿಯನ್ನು ನೀಡಿದರು.
ಶ್ರಮಬಿಂದು ಸಾಗರ ಕಟ್ಟಿದ ಕಥೆಯೇ ರೋಚಕ
ರೈತರೇ ನಿರ್ಮಿಸಿದ ಶ್ರಮಬಿಂದು ಸಾಗರಕ್ಕೆ ಸುಮಾರು ನಾಲ್ಕು ದಶಕಗಳ ಇತಿಹಾಸ ಇದೆ. ದೇಶದಲ್ಲೆ ಮೊದಲ ಬಾರಿಗೆ ರೈತರೇ ಹಣ ಸಂಗ್ರಹಿಸಿ ಶ್ರಮದಾನ ಮಾಡಿ ನಿರ್ಮಿಸಿದ ಬ್ಯಾರೇಜ್ ಇದಾಗಿದೆ. ಹೌದು, 1980ರ ಸಮಯದಲ್ಲಿ ಈ ಭಾಗದ ಜಮೀನುಗಳ ರೈತರು ನೀರಾವರಿ ಸೌಲಭ್ಯ ಇರಲಿಲ್ಲ. ಕೃಷ್ಣಾ ನದಿ ಹರಿದರೂ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಎಷ್ಟು ಸಾಮರ್ಥ್ಯದ ಜಲಾಶಯ?
ಅಂದಾಜು 4 ಟಿಎಂಸಿ ನೀರಿನ ಸಾಮರ್ಥ್ಯ ಇರುವ ಬ್ಯಾರೇಜ್, ಮಹಾರಾಷ್ಟ್ರದ ಕೋಯ್ನಾ ಡ್ಯಾಂನಿAದ ನೀರು ಬಿಟ್ಟರೆ 6 ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯದಿಂದ ಮತ್ತು ಆಲಮಟ್ಟಿ ಹಿನ್ನೀರಿನಿಂದ ಒಟ್ಟು 4 ಟಿಎಂಸಿ ನೀರು ಸಂಗ್ರಹಿಸಲಾಗುತ್ತಿತ್ತು. ಸದ್ಯ ಹಿಪ್ಪರಗಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ 0.80 ಟಿಎಂಸಿ ನೀರು ಇದೆ.
ಸರ್ಕಾರದ ಮೇಲೆ ಅವಲಂಬನೆಯೇ ಬೇಡ!
ಹಿಪ್ಪರಗಿ ಜಲಾಶಯದಿಂದ ಬರುವ ನೀರನ್ನು ನಿಲ್ಲಿಸಿ ಬಳಸಿಕೊಳ್ಳುವ ಉದ್ದೇಶದಿಂದ ಬ್ಯಾರೇಜ್ ನಿರ್ಮಾಣಕ್ಕೆ ರೈತರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಆದ್ರೆ ಸರ್ಕಾರದಿಂದ ಸರಿಯಾಗಿ ಸ್ಪಂದನೆ ಸಿಗದ ಕಾರಣ, ಅಂದಿನ ರೈತ ಮುಖಂಡ ದಿ ಸಿದ್ದು ನ್ಯಾಮಗೌಡ ಅವರು, ಸರ್ಕಾರದ ಮೇಲೆ ಅವಲಂಬಿತರಾಗದೇ ತಮಗೆ ಅವಶ್ಯಕತೆಯಿರುವ ನೀರನ್ನು ತಾವೇ ಪಡೆದುಕೊಳ್ಳುವಂತೆ ಜಮಖಂಡಿ ರೈತರಿಗೆ ಸಲಹೆ ನೀಡಿ, ಆ ನಿಟ್ಟಿನಲ್ಲಿ ರೈತರನ್ನು ಒಗ್ಗೂಡಿಸಿ ಕೆಲಸ ಮಾಡಿದರು.
ಕೈಲಿದ್ದ ವಸ್ತು ಮಾರಿ ಹಣ ಸಂಗ್ರಹ
ಕೆಲವರು ತಮ್ಮ ಬಳಿಯಲ್ಲಿದ್ದದ್ದನ್ನು ಮಾರಿ ಜಲಾಶಯ ನಿರ್ಮಾಣ ಮಾಡಲು ಧನಸಹಾಯ ಮಾಡಿದರು. ನಂತರ ಸಿಎಂ ಅವರನ್ನು ಭೇಟಿ ಮಾಡಿ ತಾವು ಹಣ ಸಂಗ್ರಹಿಸಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು.
ಅದಾದ ನಂತರ ಬೆಳಗಾವಿ ಜಿಲ್ಲಾ ಪರಿಷತ್ ಅಧ್ಯಕ್ಷ ಅಮರಸಿಂಹ ಪಾಟೀಲ್ ಸಣ್ಣ ಬ್ಯಾರೇಜ್ ನಿರ್ಮಾಣಕ್ಕಾಗಿ 5 ಲಕ್ಷ ರು ಹಣ ಬಿಡುಗಡೆ ಮಾಡಿದರು. ಕಪಾರ್ಟ್ ಯೋಜನೆಯಡಿ ಕೇಂದ್ರ ಸರ್ಕಾರ 28 ಲಕ್ಷ ರು ಹಣ ಬಿಡುಗಡೆ ಮಾಡಿತು. ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಿಸಿದ ನಂತರ ಸಿದ್ದು ನ್ಯಾಮಗೌಡ ಬ್ಯಾರೇಜ್ ಹೀರೋ ಎಂದು ಇಂದಿಗೂಪ್ರಸಿದ್ದರಾಗಿದ್ದಾರೆ.