ಕರ್ನಾಟಕದಲ್ಲಿ ನಂದಿನಿ ಮತ್ತು ಅಮುಲ್ ನಡುವೆ ಉಂಟಾದ ವಿವಾದ ತಣ್ಣಗಾದ ಬೆನ್ನಲ್ಲೇ ನಂದಿನಿ ವರ್ಸ್ಸ್ ಮಿಲ್ಮಾ ಹಾಲಿನ ಸಮರ ಜೋರಾಗಿದೆ. ನಂದಿನಿ ಹಾಲು ಕಳಪೆ ಗುಣಮಟ್ಟದ್ದಲ್ಲಿದೆ ಅದನ್ನು ಖರೀದಿಸಬೇಡಿ ಎಂದು ಕೇರಳದ ಸಚಿವೆಯ ಹೇಳಿಕೆಯಿಂದ ಈ ವಿವಾದ ಹುಟ್ಟಿಕೊಂಡಿದೆ. ಇದೀಗ ಕೇರಳ ಸರಕಾರ ಈ ವಿವಾದದಲ್ಲಿ ಮಧ್ಯ ಪ್ರವೇಶ ಮಾಡಲು ನಿರ್ಧರಿಸಿದೆ. ಈ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸರಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಕೇರಳ ಸರಕಾರದ ಅನುಮತಿ ಇಲ್ಲದೆ ನಂದಿನಿ ರಾಜ್ಯಾದ್ಯಂತ ತನ್ನ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡುತ್ತಿದೆ. ಕರ್ನಾಟಕ ಸರಕಾರವೂ ತಕ್ಷಣವೇ ಮಧ್ಯೆ ಪ್ರವೇಶಿಸಿ ಈ ವಿವಾದವನ್ನು ಬಗೆ ಹರಿಸಬೇಕೆಂದು ಕೇರಳದ ಇಚ್ಛೆಯಾಗಿದೆ ಎಂದು ಪಿಣರಾಯ್ ವಿಜಯನ್ ಕರ್ನಾಟಕಕ್ಕೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ತನ್ನ ನಂದಿನಿ ಡೈರಿ ಉತ್ಪನ್ನಗಳ 3 ಮಳಿಗೆಗಳನ್ನು ಕೇರಳದಲ್ಲಿ ಪ್ರಾರಂಭಿಸಿತ್ತು. ನಂತರ ತನ್ನ ಮಳಿಗೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ತೆರೆಯಿತು .ಮಲಪ್ಪುರಂ ಜಿಲ್ಲೆಯ ಮಂಚೇರಿ ಹಾಗೂ ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ ಹಾಗೂ ಪಟ್ಟಣಂತಿಟ್ಟಜಿಲ್ಲೆಯ ಪಂಡಲಂನಲ್ಲಿ ನಂದಿನಿ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದೆ. ಇದಲ್ಲದೆ ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್ಗಳಲ್ಲಿ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಇದರಿಂದಾಗಿ ಕೇರಳ ಸಹಕಾರ ಹಾಲು ಮಾರಾಟ ಒಕ್ಕೂಟದ ಉತ್ಪನ್ನವಾದ ಮಿಲ್ಮಾಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಜೊತೆಗೆ ಕೇರಳದ ಸಹಕಾರ ಕ್ಷೇತ್ರಕ್ಕೆ ತೊಂದರೆಯಾಗಿ ಸ್ಥಳೀಯ ರೈತರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುವ ಸಾಧ್ಯತೆಗಳಿವೆ. ಹೀಗಾಗಿ ಸಹಕಾರಿ ಕ್ಷೇತ್ರದಲ್ಲಿ ಇಂತಹ ಅನಾರೋಗ್ಯಕರ ಸ್ಪರ್ಧೆ ತರವಲ್ಲ ಎಂದು ಕೇರಳ ಸರ್ಕಾರ ಅಭಿಪ್ರಾಯಪಟ್ಟಿದೆ.
ನಂದಿನಿ ವಿರುದ್ದ ಕಿಡಿಕಾರಿದ ಸಚಿವೆ:
ಅನುಮತಿ ಪಡೆಯದೆ ತನ್ನ ರಾಜ್ಯದಲ್ಲಿ ನಾಲ್ಕು ಮಾರಾಟ ಮಳಿಗೆಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತೆರೆದಿದೆ ಎಂದು ಕೇರಳ ಸರ್ಕಾರ ಹಾಗೂ ಕೇರಳ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡಲೂ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಪಶುಸಂಗೋಪನಾ ಸಚಿವೆ ಜೆ.ಚಿಂಚುರಾಣಿ ‘ಒಂದು ರಾಜ್ಯದಲ್ಲಿ ವ್ಯವಹಾರ ನಡೆಸಲು ಪ್ರವೇಶ ಬಯಸುತ್ತೀರಿ ಎಂದಾದರೆ ಅಲ್ಲಿನ ಸರ್ಕಾರಗಳಿಂದ ಅನುಮತಿಯನ್ನು ಪಡೆಯಲೇಬೇಕಾಗುತ್ತದೆ. ಆದರೆ ಕೆಎಂಎಫ್ನ ‘ನಂದಿನಿ’ ಬ್ರ್ಯಾಂಡ್ ಆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದೆ. ‘ಮಿಲ್ಮಾ’ ದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಲು ಪೂರೈಸುತ್ತದೆ. ನಂದಿನಿ ಅಷ್ಟೇನೂ ಉತ್ತಮ ಗುಣಮಟ್ಟದ್ದಲ್ಲ. ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು’. ಕೇರಳದಲ್ಲಿ ಯಾರೂ ನಂದಿನಿಯನ್ನು ಖರೀದಿಸಬಾರದು ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಡೈರಿ ಮಂಡಳಿಗೆ ದೂರು ನೀಡಲು ಮುಂದಾದ ಕೇರಳ ಸರ್ಕಾರ:
ಕೇರಳ ಸರಕಾರ ನಂದಿನಿ ಮತ್ತು ಮಿಲ್ಮಾ ವಿವಾದಕ್ಕೆ ಸಂಬಂಧಿಸಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೂ ದೂರು ನೀಡಲು ನಿರ್ಧರಿಸಿದೆ. ಒಂದು ವೇಳೆ ಮಂಡಳಿಯಿಂದ ಸಹಕಾರ ಸಿಗದೇ ಇದ್ದರೆ, ನಂದಿನಿ ಮಳಿಗೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಗ್ಗೆ ಕೇರಳ ಸರ್ಕಾರ ಚಿಂತನೆ ನಡೆಸಿದೆ.
ಮಿಲ್ಮಾ ಬ್ರ್ಯಾಂಡ್ನ ಅಧ್ಯಕ್ಷ ಕೆ.ಎಸ್.ಮಣಿ ಪ್ರತಿಕ್ರಿಯೆ:
ದೀರ್ಘಾವಧಿಯಿಂದ ಪಾಲಿಸಿಕೊಂಡು ಬಂದಿರುವ ಅಭ್ಯಾಸ ಹಾಗೂ ಸಂಪ್ರದಾಯಗಳನ್ನು ಉಲ್ಲಂಘನೆ ಮಾಡುವುದು ಯಾವುದೇ ಹಾಲು ಒಕ್ಕೂಟಕ್ಕೆ ನೈತಿಕವಾಗಿ ಸರಿಯಾದುದಲ್ಲ. ಕೇರಳದಲ್ಲಿ ಮಳಿಗೆ ಸ್ಥಾಪಿಸುವ ಮುನ್ನವೇ ವಿರೋಧಿಸಿ ಕೆಎಂಎಫ್ಗೆ ಪತ್ರ ಬರೆದಿದ್ದೆ. ಆದರೆ ಅವರು ಅದಕ್ಕೆ ಉತ್ತರ ನೀಡಿಲ್ಲ.
ಇನ್ನು ಕರ್ನಾಟಕದಲ್ಲಿ ಅಮುಲ್-ನಂದಿನಿ ವಿವಾದ ಭುಗಿಲೇಳುವ ಮೊದಲೇ ಕೆಎಂಎಫ್ ಕೇರಳದಲ್ಲಿ ತನ್ನ ವ್ಯವಹಾರ ವಿಸ್ತರಿಸಲು ನಿರ್ಧರಿಸಿತ್ತು. ಕರ್ನಾಟಕದಲ್ಲಿ ಅಮುಲ್ ತನ್ನ ವ್ಯವಹಾರ ಆರಂಭಿಸುವುದು ತಪ್ಪು. ಆದರೆ ಅದೇ ವೇಳೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ರಾಜ್ಯದ ಸಹಕಾರಿ ಸಂಸ್ಥೆ ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಮೂಗು ತೂರಿಸುವುದು ಸಹಕಾರ ಸಿದ್ಧಾಂತ ಹಾಗೂ ಮೂಲಮೌಲ್ಯಗಳಿಗೆ ವಿರುದ್ಧವಾದುದು ಎಂದಿದ್ದಾರೆ.
ಕೆಎಂಎಫ್ ಹೇಳುವುದೇನು:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಎಫ್ ಎಂಡಿ ಬಿಎಂ ಸತೀಶ್, ಕೇರಳ ಜೊತೆಯಲ್ಲಿ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. “ನಾವು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇವೆ ಮತ್ತು ಓಣಂ ಮತ್ತು ಇತರ ಹಬ್ಬದ ಋತುಗಳಲ್ಲಿ ಹೆಚ್ಚಿನ ಹಾಲು ಮತ್ತು ಇತರ ಉತ್ಪನ್ನಗಳನ್ನು ಒದಗಿಸುವ ಮೂಲಕ ನಾವು ಯಾವಾಗಲೂ ಅವರನ್ನು ಬೆಂಬಲಿಸುತ್ತೇವೆ. “
ರಾಜ್ಯದಲ್ಲಿ ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ:
ಕೇರಳದಲ್ಲಿ ನಂದಿನಿ ವರ್ಸಸ್ ಮಿಲ್ಮಾ ನಡುವಿನ ಜಟಾಪಟಿಯ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಏಕೆ ಮೌನವಾಗಿದೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, “ನಮ್ಮ ಹೆಮ್ಮೆಯ ನಂದಿನಿಯನ್ನು ಚುನಾವಣೆ ಸರಕನ್ನಾಗಿ ಮಾಡಿಕೊಂಡು ನಂದಿನಿ-ಅಮುಲ್ ವಿಷಯದಲ್ಲಿ ಅಪಪ್ರಚಾರ ಮಾಡಿ ರಾಜ್ಯಗಳ ಮಧ್ಯೆ ಹುಳಿ ಹಿಂಡಿ ಆಟವಾಡಿದ ಕರ್ನಾಟಕ ಕಾಂಗ್ರೆಸ್ ಈಗೇಕೆ ಮಾತನಾಡದೇ ಮೌನವಾಗಿದೆ? ಅವರು ರಾಜ್ಯದಲ್ಲಿ ಮಾಡಿದ್ದನ್ನೇ ಕೇರಳದಲ್ಲಿ ಅವರ ಸಹವರ್ತಿಗಳು ಮಾಡುತ್ತಿರುವುದಕ್ಕೆ ಅವರ ಸಮ್ಮತಿ ಇದೆಯೇ? ನಂದಿನಿ ಮೇಲಿನ ‘ಪ್ರೀತಿ’ ಚುನಾವಣೆಗೆ ಕೊನೆಯಾಯಿತೇ?” ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.