ಕ್ರೀಡೆ, ಶಿಕ್ಷಣ; ಏನೆಲ್ಲಾ ಆಯ್ತು ಇವತ್ತು… ಇಲ್ಲಿದೆ ಇಂದಿನ ಟಾಪ್ 4 ರೌಂಡ್ ಅಪ್
ಐಸಿಸಿ ಟೂರ್ನಿಯಲ್ಲಿ ಭಾರತದ ಟ್ರೋಫಿ ಕನಸು ಭಗ್ನ! ಆಸ್ಟ್ರೇಲಿಯಾ ಜಯಭೇರಿ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಆಸ್ಟ್ರೇಲಿಯಾ ಎತ್ತಿ ಹಿಡಿಯುವ ಮೂಲಕ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ.
ಬ್ಯಾಟರ್ ಗಳ ಕೊರತೆಯಿಂದ ಟೆಸ್ಟ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 209 ರನ್ ಗಳಿಂದ ಸೋಲನುಭವಿಸಿದೆ.
ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 164/3 ರನ್ ಗಳೊಂದಿಗೆ 5ನೇ ದಿನದಾಟವನ್ನು ಆರಂಭಿಸಿತು. ಮಾಜಿ ನಾಯಕ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೇಲೆ ಸಾಕಷ್ಟು ನಿರೀಕ್ಷೆಇಟ್ಟಿದ್ದರು. ಆದರೆ ಇಬ್ಬರೂ ಕೂಡ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲರಾದರು.
444 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 5ನೇ ದಿನದಾಟದಲ್ಲಿ ಲಂಚ್ ಬ್ರೇಕ್ ಗೂ ಮುನ್ನವೇ 234 ರನ್ ನೊಡನೆ ಸರ್ವಪದತ ಕಂಡಿತು. ಈ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.
ಇದರೊಂದಿಗೆ ಕಳೆದ 10 ವರ್ಷಗಳಲ್ಲಿ ಐಸಿಸಿ ಟೂರ್ನಿಯಲ್ಲಿ 4ನೇ ಬಾರಿಗೆ ಭಾರತ ತಂಡ ಫೈನಲ್ ನಲ್ಲಿ ಸೋಲನುಭವಿಸಿದೆ.
2014ರಲ್ಲಿ ಶ್ರೀಲಂಕಾ, 2017ರಲ್ಲಿ ಪಾಕಿಸ್ತಾನ, 2021ರಲ್ಲಿ ನ್ಯೂಜಿಲೆಂಡ್ ಹಾಗೂ ಈಗ 2023ರಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ಸೋತಿದೆ.
ಜಮ್ಮು ಕಾಶ್ಮೀರದಲ್ಲಿ UPSC,CAPF ತೇರ್ಗಡೆಗೊಂಡ ಏಕೈಕ ಮಹಿಳೆ!
ಜಮ್ಮು ಕಾಶ್ಮೀರದ ನೌಶೆರಾ ಪಟ್ಟಣದ ಸಿಮ್ರಾನ್ ಬಾಲಾ ಅವರು UPSC ಸಶಸ್ತ್ರ. ಪೊಲೀಸ್ ಪಡೆಗಳ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅರ್ಹತೆ ಪಡೆದ 151 ಅಭ್ಯರ್ಥಿಗಳಲ್ಲಿ ಸಿಮ್ರಾನ್ ಬಾಲಾ ಅವರು 82ನೇ ರ್ಯಾಂಕ್ ಪಡೆದಿದ್ದಾರೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಮ್ಮು ಮತ್ತು ಕಾಶ್ಮೀರದ ಮೊದಲ ಹುಡುಗಿ ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ನಾನು ಗಡಿ ಪ್ರದೇಶದಲ್ಲಿರುವವಳು. ಅಲ್ಲಿನ ಗುಂಡಿನ ದಾಳಿಗಳನ್ನು ನಾನು ನೋಡಿದ್ದೇನೆ. ಇದು ನಾನು CAPF ಸೇರಲು ಪ್ರೇರೇಪಿಸಿತು. ನಾನು ಗಡಿ ಪ್ರದೇಶದಲ್ಲಿಯೂ ಸೇವೆ ಸಲ್ಲಿಸಬಹುದು ಎಂದು ಸಿಮ್ರಾನ್ ಹೇಳಿದ್ದಾರೆ.
ಏಷ್ಯಾಕಪ್ ಹಾಕಿ ಟೂರ್ನಿ: ಗೆದ್ದು ಬೀಗಿದ ಭಾರತ ವನಿತೆಯರ ತಂಡ
ಭಾರತ ಹಾಗೂ ಕೊರಿಯಾ ನಡುವೆ ಜಪಾನ್ ನಲ್ಲಿ ನಡೆಯುತ್ತಿರುವ ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಚಿನ್ನದ ಪದಕ ಗೆದ್ದು ಬೀಗಿದೆ.
ಫೈನಲ್ ಸುತ್ತಿನಲ್ಲಿ ಭಾರತದ ಕಿರಿಯ ಮಹಿಳೆಯರು ಅದ್ಭುತ ಪ್ರದರ್ಶನ ನೀಡುವ ಮೂಲಕ ಕೊರಿಯಾ ತಂಡವನ್ನು 2-1 ಗೋಲ್ ಅಂತರದಲ್ಲಿ ಭಾರತ ತಂಡ ಜಯ ಸಾಧಿಸಿದೆ.
ಸೆಮಿಫೈನಲ್ ನಲ್ಲಿ ಭಾರತ ಅತಿಥೇಯ ಜಪಾನ್ ವಿರುದ್ದ 1-0 ಗೋಲಿನ ಅಂತರದಿಂದ ರೋಚಕ ಗೆಲುವು ಕಂಡಿತ್ತು.
ಕರ್ನಾಟಕ ಸೇರಿ ದೇಶದ 5 ರಾಜ್ಯಗಳಲ್ಲಿ ಡ್ರಾಪ್ ಔಟ್ ಮಕ್ಕಳ ಸಂಖ್ಯೆ ಹೆಚ್ಚು!
ಪ್ರೌಡ ಶಾಲಾ ಹಂತದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಸರಾಸರಿಗಿಂತ ಹೆಚ್ಚಾಗಿದೆ.
ಕರ್ನಾಟಕ, ಗುಜರಾತ್, ಬಿಹಾರ, ಅಸ್ಸಾಂ ಹಾಗೂ ಪಂಜಾಬ್ ನಲ್ಲಿ ಕೂಡ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಮಕ್ಕಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ ಎಂದು ಯೋಜನಾ ಅನುಮೋದನೆ ಮಂಡಳಿ ತಿಳಿಸಿದೆ.
2030ರ ವೇಳೆಗೆ ಶಾಲೆಗಳಲ್ಲಿ ಒಟ್ಟು ದಾಖಲಾತಿ ಪ್ರಮಾಣ ಶೇ.100ರಷ್ಟಾಗಬೇಕು ಎಂಬ ಗುರಿಯನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ.
ದೇಶದಲ್ಲಿ ಶೇ.33ರಷ್ಟು ಹೆಣ್ಣುಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ ಎಂದು ಯುನಿಸೆಫ್ ನಡೆಸಿದ ಸಮೀಕ್ಷೆ ತಿಳಿಸಿದೆ. ಮಕ್ಕಳನ್ನು ಮನೆಗೆಲಸಕ್ಕೆ, ಕೂಲಿ ಕೆಲಸಕ್ಕೆ ಅಥವಾ ಇತರೆ ಕೆಲಸಗಳಿಗೆ ಕಳಿಸಲು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ ಎನ್ನಲಾಗಿದೆ.
ಮಧ್ಯಪ್ರದೇಶದಲ್ಲಿ ಶೇ.23.8 ರಷ್ಟು ಇದ್ದ ಶಾಲೆ ಬಿಟ್ಟ ವಿದ್ಯಾರ್ಥಿಗಳ ಪ್ರಮಾಣ 2021-2022ರಲ್ಲಿ ಶೇ.10ಕ್ಕೆ ಇಳಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಕೂಡ ಶೇ.11.2 ರಷ್ಟಿದ್ದ ಪ್ರಮಾಣ 2021-2022 ಶೇ.10.7ಕ್ಕೆ ಇಳಿಕೆ ಕಂಡಿದೆ.