ಬೆಂಗಳೂರು: ಮೋಟಾರು ವಾಹನ (ಎಂವಿ) ಕಾಯಿದೆ ಸೂಚಿಸುವ ಕೇವಲ ದಂಡವನ್ನು ಹಾಕುವ ಬದಲು ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಸಂಚಾರ ಉಲ್ಲಂಘನೆಯ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ನಗರ ಟ್ರಾಫಿಕ್ ಪೊಲೀಸರು ನಿರ್ದಿಷ್ಟವಾಗಿ ಮೂರು ಪ್ರಮುಖ ಅಪರಾಧಗಳನ್ನು ಪಟ್ಟಿ ಮಾಡಿಕೊಂಡಿದ್ದು ಏಕಮುಖ ಸಂಚಾರ ನಿಯಮ ಉಲ್ಲಂಘನೆ, ಫುಟ್ಪಾತ್ನಲ್ಲಿ ವಾಹನ ಚಲಾವಣೆ ಮಾಡುವುದು ಮತ್ತು ಅಕ್ರಮ ಪಾರ್ಕಿಂಗ್- ಮಾಡುವ ವಾಹನ ಚಾಲಕರ ವಿರುದ್ದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಈ ಮೂರು ಉಲ್ಲಂಘನೆಗಳು ಸಂಚಾರ ದಟ್ಟಣೆ ಮತ್ತು ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣಗಳು ಎಂದು ಗುರುತಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಹೇಳಿದ್ದಾರೆ. ಮೋಟಾರು ವಾಹನ ಕಾಯಿದೆಯು ಅಂತಹ ಅಪರಾಧಗಳಿಗೆ ದಂಡವನ್ನು ಮಾತ್ರ ವಿಧಿಸುತ್ತದೆ. ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳು ಸಂಚಾರ ಪೊಲೀಸರಿಗೆ ವಾಹನಗಳನ್ನು ವಶಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉಲ್ಲಂಘಿಸುವವರು ಅವರ ವಾಹನಗಳ ಬಿಡುಗಡೆಗಾಗಿ ನ್ಯಾಯಾಲಯದ ಮೊರೆ ಹೋಗಿ ವಕೀಲರನ್ನು ನೇಮಿಸಿಕೊಂಡು ಬಿಡಿಸಿಕೊಳ್ಳಬೇಕಾಗುತ್ತದೆ.
“ಐಪಿಸಿಯ ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ..ಇದು ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ವಾಹನ ಚಲಾವಣೆ ಅಥವಾ ಅಡಚಣೆಯ ಆರೋಪಕ್ಕೆ ಶಿಕ್ಷೆ ವಿಧಿಸುತ್ತದೆ. ಈ ಕಾಯ್ದೆಯು ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡುತ್ತದೆ ಮತ್ತು ನ್ಯಾಯಾಲಯ ಮಾತ್ರ ಅವರ ಬಿಡುಗಡೆಯನ್ನು ಅಧಿಕೃತಗೊಳಿಸಬಹುದು ಎಂದು ಅನುಚೇತ್ ಹೇಳಿದರು.
ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ. ಎ. ಸಲೀಂ ಅವರನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಿದ ನಂತರ ಇಲಾಖೆಯ ಸ್ವತಂತ್ರ ಉಸ್ತುವಾರಿ ವಹಿಸಿಕೊಂಡ ಅನುಚೇತ್, “ಜನವರಿಯಿಂದ ಈ ಸೆಕ್ಷನ್ ಅಡಿಯಲ್ಲಿ ನಾವು 4,200 ಪ್ರಕರಣಗಳನ್ನು ದಾಖಲಿಸಿದ್ದೇವೆ. ಹೆಚ್ಚಿದ ದಂಡಗಳು ಸಹ ಚಾಲಕರನ್ನು ಸರಿದಾರಿಗೆ ತರಲು ವಿಫಲವಾಗುವುದನ್ನು ನಾವು ಗಮನಿಸಿದ್ದೇವೆ. ಆದಾಗ್ಯೂ, ವಾಹನವನ್ನು ವಶಪಡಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ಸಾಬೀತು ಆಗಿದೆ. ವಿಶೇಷವಾಗಿ ನ್ಯಾಯಾಲಯದ ಮುಂದೆ ಹಾಜರಾಗುವ ಅಗತ್ಯತೆಯಿಂದಾಗಿ ಮುಂದಿನ ದಿನಗಳಲ್ಲಿ ಈ ಉಪಕ್ರಮವನ್ನು ವ್ಯಾಪಕವಾಗಿ ವಿಸ್ತರಿಸಲು ನಾವು ಉದ್ದೇಶಿಸಿದ್ದೇವೆ.
ಈ ಹಿಂದೆ ಟ್ರಾಫಿಕ್ಗೆ ವಿಶೇಷ ಆಯುಕ್ತರಾಗಿದ್ದ ಎಂ. ಎ. ಸಲೀಂ ಅವರು ಉಲ್ಲಂಘನೆಗಳ ಜಾರಿಯಿಂದ ಸಂಚಾರ ನಿಯಂತ್ರಣದತ್ತ ಗಮನ ಹರಿಸಿದರು. ಉಲ್ಲಂಘನೆಗಾಗಿ ಸ್ಪಾಟ್ ಚೆಕ್ ಅನ್ನು ನಿಲ್ಲಿಸುವಂತೆ ಅವರು ಪೊಲೀಸರಿಗೆ ಆದೇಶಿಸಿದ್ದರು ಮತ್ತು ಸಂಚಾರವನ್ನು ನಿಯಂತ್ರಿಸಲು ಆ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡಲು ಪೋಲೀಸರನ್ನು ನಿಯೋಜಿಸಿದ್ದರು.
ಆದಾಗ್ಯೂ, ಮೇಲೆ ತಿಳಿಸಿದ ಮೂರು ಅಪರಾಧಗಳಿಗೆ, ಹೊಸ ಸಂಚಾರ ಮುಖ್ಯಸ್ಥ ಅನುಚೇತ್, ಪೊಲೀಸರು ಈಗ ಸ್ಥಳದಲ್ಲೇ ಪ್ರಕರಣಗಳನ್ನು ದಾಖಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. “ಎಲ್ಲಾ ಇತರ ಉಲ್ಲಂಘನೆಗಳಿಗೆ, ಮೊದಲಿನಂತೆ, ನಾವು ಕ್ಯಾಮೆರಾಗಳನ್ನು ಬಳಸುವುದನ್ನು ಮುಂದುವರಿಸುತ್ತೇವೆ” ಎಂದು ಅನುಚೇತ್ ಹೇಳಿದ್ದಾರೆ.
ಟ್ರಾಫಿಕ್ ಪೊಲೀಸರು ಅಕ್ರಮ ನಿಲುಗಡೆಗೆ ಕಡಿವಾಣ ಹಾಕಲು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದರೂ, ವಾಹನ ಟೋಯಿಂಗ್ ಅನ್ನು ಮತ್ತೆ ಪರಿಚಯಿಸುವ ಯಾವುದೇ ಯೋಜನೆ ಇಲ್ಲ. ಕಳೆದ ವರ್ಷ, ಫೆಬ್ರವರಿ 3 ರಂದು, ಜಾರಿ ವಿಧಾನಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ನೀಡುವವರೆಗೆ ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೊತ್ತುಪಡಿಸದ ಪ್ರದೇಶಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಎಳೆಯುವುದನ್ನು ನಿಲ್ಲಿಸಿ ಆದೇಶಿಸಿದ್ದರು.
ಟೋಯಿಂಗ್ ಕಾರ್ಯಾಚರಣೆ ವೇಳೆ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಅಂಗವಿಕಲ ಮಹಿಳೆಯ ಮೇಲೆ ದೈಹಿಕವಾಗಿ ಮತ್ತು ಮೌಖಿಕವಾಗಿ ಹಲ್ಲೆ ನಡೆಸಿದ ಘಟನೆಯಿಂದ ಟೋಯಿಂಗ್ನ್ನು ರದ್ದು ಪಡಿಸಲಾಗಿತ್ತು. ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಇದು , ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಕಾನೂನು ಜಾರಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಆಕ್ರೋಶವನ್ನು ಹೆಚ್ಚಿಸಿತು.
ವಿವಾದಿತ ಟೋವಿಂಗ್ ಪದ್ಧತಿಯನ್ನು ಮರುಸ್ಥಾಪಿಸುವ ಯಾವುದೇ ಯೋಜನೆ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬದಲಾಗಿ, ವಾಹನಗಳನ್ನು ವಶಪಡಿಸಿಕೊಳ್ಳುವ ಮೊದಲು ಟ್ರಾಫಿಕ್ ಪೊಲೀಸರು ಲಾಕ್ ಮಾಡುತ್ತಾರೆ.
ಇದಲ್ಲದೆ ಬೆಂಗಳೂರು ಪೊಲೀಸರಿಂದ ನೇಮಕಗೊಂಡ ಖಾಸಗಿ ಗುತ್ತಿಗೆದಾರರು, ವಶಪಡಿಸಿಕೊಂಡ ವಾಹನಗಳನ್ನು ಬಿಡುಗಡೆ ಮಾಡಲು ಲಂಚ ಕೇಳುತ್ತಿದ್ದಾರೆ ಮತ್ತು ಚಾಲಕರ ವಿರುದ್ಧ ಅನುಚಿತ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂಬ ದೂರುಗಳಿವೆ.