ಮನುಷ್ಯನನ್ನು ಕಿತ್ತು ತಿನ್ನುವ ಕಾಯಿಲೆ ಕ್ಯಾನ್ಸರ್. ಕ್ಷಣ ಕ್ಷಣಕ್ಕು ನೋವು ಹತಾಶೆಯೊಂದಿಗೆ ಬದುಕುವ ಕ್ಯಾನ್ಸರ್ ಪೀಡಿತರನ್ನು ಕಂಡಾಗ ವಿಚಿತ್ರವಾದ ಸಂಕಟದ ಅನುಭವಾಗುತ್ತದೆ. ನೋವಲ್ಲೂ ಕೆಲವು ಪೀಡಿತರು ಸಂತೋಷದಿಂದ ಇರಲು ಬಯಸುತ್ತಾರೆ.
ಸಾಮಾನ್ಯವಾಗಿ ಕ್ಯಾನ್ಸರ್ ಪೀಡಿತರು ಹೆಚ್ಚು ಸಂಕಟ ಅನುಭವಿಸುವುದು ಅವರ ತಲೆಕೂದಲು ಸಂಪೂರ್ಣವಾಗಿ ಉದುರಿದಾಗ. ಮನಸ್ಸು ಮುರಿದು ಹೋಗುತ್ತದೆ. ಇಂತವರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಲು ಕೆಲವೊಂದು ಎನ್ಜಿಒಗಳು ಶ್ರಮಿಸುತ್ತದೆ.
ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಿ ಜನರಲ್ಲಿ ಕೇಶದಾನದ ಬಗ್ಗೆಯು ಸಾಕಷ್ಟು ಅರಿವನ್ನು ಮೂಡಿಸುತ್ತಿದೆ. ಕೇಶ ದಾನ ಮಾಡಿದ ಕೂದಲನ್ನು ವಿಗ್ ಮಾಡಿ ಕಾನ್ಸರ್ ಪೀಡಿತರಿಗೆ ಉಚಿತವಾಗಿ ನೀಡುವ ಕಾರ್ಯವನ್ನು ಮಾಡುವುದರ ಮೂಲಕ ನೆರವಾಗುತ್ತಿದ್ದಾರೆ.
ಈ ಮಹಾನ್ ಕಾರ್ಯದಲ್ಲಿ ಹೆಚ್ಚು ಒಲವು ತೋರಿರುವವರಲ್ಲಿ ನಮ್ಮ ಯುವ ಪೀಳಿಗೆನೇ ಹೆಚ್ಚು. ಕೇಶ ದಾನ ಮಾಡಲು ಕೂದಲು ಕನಿಷ್ಠ 10 ಇಂಚು ಬೆಳೆದಿರಬೇಕು.ಆದ್ದರಿಂದ ಕೆಲವು ಯುವತಿಯರು ತಮ್ಮ ತಲೆ ಕೂದಲನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಹುಡುಗರು ಎನು ಕಮ್ಮಿ ಇಲ್ಲ . ಕೇಶ ದಾನ ಮಾಡಲೆಂದೆ ತಮ್ಮ ತಲೆ ಕೂದಲನ್ನು ಚೆನ್ನಾಗಿ ಬೆಳೆಸಿ ನಂತರ ದಾನ ಮಾಡುತ್ತಾರೆ.
ಈ ಕೇಶ ದಾನದಲ್ಲಿ ಬಹುತೇಕ ಚಲನಚಿತ್ರ ನಟ ನಟಿಯರು ಕೂಡ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ನಟಿ ಕಾವ್ಯ ಶಾಸ್ತಿç, ಕಾರುಣ್ಯ ರಾಮ್, ನಟ ಧ್ರವ ಸರ್ಜಾ ತಮ್ಮ ಕೇಶವನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ವರ್ಷ ಉಡುಪಿಯ ಎರಡು ವರ್ಷದ ಬಾಲಕಿ ಆದ್ಯಾ ಕುಲಾಲ್, ಮೈಸೂರಿನ ಸ್ವರ್ಣ ಕೇಶದಾನ ಮಾಡಿರುವ ಕುರಿತು ಸಾಕಷ್ಟು ಮಾಧ್ಯಮದಲ್ಲಿ ವರದಿಗಳು ಪ್ರಕಟವಾಗಿದೆ.
ಬ್ಯೂಟಿ ಪಾರ್ಲರ್ಗೆ ಹೋಗಿ ಕೂದಲನ್ನು ಕತ್ತರಿ ಹಾಗೆ ಬರುವ ಬದಲು ಕತ್ತರಿಸಿದ ಕೂದಲನ್ನು ಎನ್ಜಿಒ ನೀಡಿ ಮಾನವೀಯತೆ ಮೆರೆಯಬಹುದು. ಕ್ಯಾನ್ಸರ್ ಪೀಡಿತರ ಮೊಗದಲ್ಲಿ ನಗುವೊಂದನ್ನು ಮೂಡಿಸುವ ಸಣ್ಣ ಪ್ರಯತ್ನವು ಎಲ್ಲ ಕಡೆ ನಡೆಯಲಿ.