೧೯ ನೇ ಶತಮಾನದ ಕಾಲಘಟ್ಟದಲ್ಲಿ ಮುಧೋಳ ಸಂಸ್ಥಾನಕ್ಕೆ ಸೇರಿದ ಹಲಗಲಿ ಎಂಬ ಹಳ್ಳಿಯಲ್ಲಿ ನಡೆದ ಸ್ವಾತಂತ್ರ ಸಂಗ್ರಾಮದಿಂದ ಉಂಟಾದ ದುರಂತದ ಚಿತ್ರಣವನ್ನು ಲಾವಣಿಕಾರರು ಮನಕರಗುವ ರೀತಿಯಲ್ಲಿ ವರ್ಣಿಸಿದ್ದಾರೆ. ೧೯೫೭ ರಲ್ಲಿ ಬ್ರಿಟಿಷರು ಆಯುಧ ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಜಾರಿಗೆ ತಂದಾಗ ಈ ದೇಶದ ಜನರಿಗಾದ ಸ್ವಾತಂತ್ರ್ಯ ಹರಣ ಹೇಳತೀರದು . ಈ ದೇಶದ ಜನರ ಅಸಹಾಯಕತೆಯ ಚಿತ್ರಣವು ‘ಹಲಿಗಲಿ’ ಎಂಬ ಸ್ಥಳದಲ್ಲಿ ನಡೆದ ದುರ್ಘಟನೆಯಿಂದ ತಿಳಿಯುತ್ತದೆ. ಆಯುಧವನ್ನು ನಂಬಿ ಬದುಕುತ್ತಿದ್ದ ಜನರ ಸ್ಥಿತಿ ಡೋಲಾಯಮಾನವಾಗುತ್ತದೆ. ಬ್ರಿಟೀಷರ ಕಾಯ್ದೆಗಳು ದಬ್ಬಾಳಿಕೆ ಅತಿರೇಕಕ್ಕೆ ಹೋಗುತ್ತದೆ. ಹಲಿಗಲಿಯ ಪೂಜಾರಿ ಹಣಮಾ, ಬಾಲ, ಜಡಗ, ರಾಮ ಇವರ ಮುಂದಾಳತ್ವದಲ್ಲಿ ಬ್ರಿಟೀಷರ ಕಾಯ್ದೆಯ ವಿರುದ್ಧ ಮಾಡಿದ ಹೋರಾಟ ಭಯಂಕರವೂ ಆಗಿತ್ತು: ದುರಂತವೂ ಆಗಿತ್ತು. ಒಂದು ಹಳ್ಳಿಯ ಬೇಡ ಸಮುದಾಯದವರಾದ ಇವರು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದ ಪರಿಣಾಮ ಮಾಡಿದ ಹೋರಾಟ ದೇಸೀ ಮತ್ತು ಸ್ವಾತಂತ್ರ್ಯ ಪ್ರಜ್ಞೆಯನ್ನು ಮೂಡಿಸುತ್ತಿದೆ.
ಜನರಲ್ಲಿರುವ ಎಲ್ಲ ಆಯುಧಗಳನ್ನು ಸರ್ಕಾರ ಸಂಗ್ರಹಿಸಬೇಕೆಂದು ಸರ್ಕಾರದಿಂದ ಆಜ್ಞೆ ಬಂತು, ವಿವಿಧ ರೀತಿಯ ಹಲವಾರು ಆಯುಧಗಳನ್ನು ಒಂದು ಚೂರು ಬಿಡದೆ ಸಂಗ್ರಹಿಸಬೇಕೆಂಬುದೇ ಕಾಯ್ದೆಯ ತಿರುಳಾಗಿತ್ತು. “ಮುಚ್ಚಿ ಇಟ್ಟವರಿಗೆ ಮೂರು ವರ್ಷದ ಬೇಡಿ, ಕೊಡದೆ ದಿಟಾಯಿ (ಮೊಂಡುತನ ಪ್ರತಿಭಟನೆ) ಮಾಡಿದವರಿಗೆ ಮರಣ.” ಆಜ್ಞೆ ಮುಟ್ಟಿದ ಕ್ಷಣದಲ್ಲಿ ಜನ ಋಷಿಯಿಂದ ತಂದೊಪ್ಪಿಸಬೇಕು. ಈ ಆಜೆಯ ಡಂಗೂರವನ್ನು ಕೇಳಿದ ‘ಶೂರ ಸಿಪಾಯಿಜನ ಮಾತ್ರ ಕಣ್ಣಲ್ಲಿ ನೀರು ತಂದರು. ಆಯುಧ ಕೈ ಬಿಡುವಾಗ ಅವರು ದುಃಖಿತರಾದರು. ಬ್ರಿಟೀಷರ ಕಠಿಣವಾದ ಆಜ್ಞೆಯಿಂದ ಜನ ಭಯಭೀತರಾದರು. ಜಾಯಿತ ಸಾಹೇಬ ಬಂದು ಮನೆ ಮನೆಯ ಸಂದುಗೊಂದು ಮೂಲೆ ಮುಡಕಲುಗಳನ್ನು ಹುಡುಕಿಸಿದ, ಸಾಲಸೋಲ ಮಾಡಿ ದನಕರು ಮಾಡಿ ಹಬ್ಬದಲ್ಲಿ ತಂದ ಅಮೂಲ್ಯ ಆಯುಧಗಳನ್ನು ಅವರಿಗೊಪ್ಪಿಸಿದರು. ಚಿನ್ನಬೆಳ್ಳಿಯ ಬೆಲೆಬಾಳುವ ಆಯುಧಗಳೂ ಕವಚಗಳೂ ಕುಂಪಣಿಯವರ ಕೈಸೇರಿದವು, ಆಯುಧಗಳನ್ನು ಕಳೆದುಕೊಂಡದ್ದಕ್ಕೆ ಹೊಟ್ಟೆಬೇನೆ ತಂದುಕೊಂಡ ಜನ ಸಾಯುವುದಕ್ಕೆ ಸಿದ್ಧರಾದರು.ಆಯುಧಗಳನ್ನು ಕಳೆದುಕೊಂಡು ಜನರ ಸ್ಥಿತಿ ಶೋಚನೀಯವಾಯಿತು. “ಹಲ್ಲ ಕಿತ್ತಿದಾ ಹಾಂವಿನ ಪರಿಯು ನಮಗ ಆದಿತಲ್ಲಾ ನಮ್ಮ ಮಾನ ಉಳಿಯುವದಿಲ್ಲಾ, ಸತ್ತ ಹೆಣಕ್ಕೆ ಶೃಂಗಾರ ಮಾಡಿದ ಪರಿ, ಆದಿತಲ್ಲಾ” ಎಂದು ಗೋಳಾಡಿದರು.
‘ಹಗಲಿನಲ್ಲಿ ಮನೆ ಹೊಕ್ಕು ಹಣವನ್ನು ಒಯ್ದರೆ ಕೇಳುವವರು ಯಾರೂ ಇಲ್ಲವಲ್ಲ. ನಮ್ಮ ಜೀವವೇ ಹೋಯಿತಲ್ಲಾ’ ಎಂದು ಸಾಹುಕಾರರು ಚಿಂತೆ ಮಾಡುತ್ತಾರೆ. ಪುಂಡು ಪಾಳೇಗಾರರೂ ಹಟ ಮಾಡದೆ ದಂಡನ್ನಾಳುವ ದೊರೆಗಳ ದೌಲತ್ತಿಗೆ ಅಂಜಿ ಕುಳಿತುಬಿಟ್ಟರು. ಒಟ್ಟಿನಲ್ಲಿ ಜನಗಳ ಸ್ಥಿತಿ ‘ಪಕ್ಕಾ ಕಿತ್ತ ಪಕ್ಷಿ ಗತಿ ಆಗಿ ಚಿಂತಿ ಆದರ ಮನಕ’ ಎಂಬಂತಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಮುಧೋಳ ರಾಜ್ಯದಲ್ಲಿ ‘ಹಲಗಲಿ’ ಎಂಬ ಹಳ್ಳಿಯೊಂದಿತ್ತು. ಅಲ್ಲಿಯ ನಾಲ್ಕು ಮಂದಿ-ಪೂಜಾರಿ ಹಣಮ, ಬಾಲ, ಜಡಗ, ರಾಮ ಇವರು ಬ್ರಿಟಿಷರ ಕಾಯ್ದೆಯ ವಿರುದ್ಧ ಮಸಲತ್ತು ನಡೆಸುತ್ತಾರೆ. ಈ ನಾಲ್ಕು ಮಂದಿ ‘ನಮ್ಮಲ್ಲಿರುವ ಹತಾರಗಳನ್ನು ಕೊಡಬಾರದು. ಕೊಟ್ಟರೆ ನಮ್ಮ ಜೀವ ಹೋದಂತೆ’ ಎಂದು ಪ್ರತಿಜ್ಞೆ ಮಾಡುತ್ತಾರೆ. ಕುಂಪಣಿ ಸರ್ಕಾರಕ್ಕೆ ಆಯುಧಗಳನ್ನು ಒಪ್ಪಿಸಬೇಡಿ, ಜಗಳ ಮಾಡಿರಿ, ನಿಮಗೆ ಸಹಾಯಕರಾಗಿ ನಾವು ಇರುತ್ತೇವೆ ಎಂದು ಸುತ್ತಲಿನ ಹಳ್ಳಿಯ ಜನರಿಗೆ ಮತ್ತು ದೊರೆಗಳಿಗೆ ತಿಳಿಸುತ್ತಾರೆ. ಬೇಡ ಸಮುದಾಯದವರೆಲ್ಲ ಒಂದೆಡೆ ಸೇರಿ ರಹಸ್ಯವಾಗಿ ವಚನ ಕೊಡುತ್ತಾರೆ. ಆಯುಧಗಳನ್ನು ಸಂಗ್ರಹಿಸಲು ಬಂದ ಕಾರಕೂನನ ಕಪಾಳಕ್ಕೆ ಕೊಟ್ಟರು. ಸಿಪಾಯಿ ನೆಲಕ್ಕೆ ಬಿದ್ದ. ದುಖಃದಿಂದ ಅವರು ಸಾಹೇಬರಿಗೆ ಹೇಳಿಕೊಂಡರು. ಇದನ್ನು ಕೇಳಿದ ಸಾಹೇಬ ಸಿಟ್ಟಿಗೆದ್ದು ಕುಂದರಗಿಯ ಗೌಡ ಕೃಷ್ಣನಾಯಕನನ್ನು ಸಂಧಾನ ಮಾಡುವುದಕ್ಕೆ ಕಳುಹಿಸಿದ.
ಸಂಧಾನ ಮಾಡುವುದಕ್ಕೆ ಬಂದ ಕೃಷ್ಣನಾಯಕ ನಿಮ್ಮ ಹತಾರಗಳನ್ನೆಲ್ಲ ಸಾಹೇಬನಿಗೆ ಒಪ್ಪಿಸಿ ಎಂದ ಆತನಿಗೆ ಕೈಯಲ್ಲಿ ಬಳೆ ತೊಟ್ಟಿಲ್ಲ, ಯಾವನೂ ಬಂದರೂ ಜೀವ ಹೋದರೂ ಕೊಡುವುದಿಲ್ಲ, ಸುಮ್ಮನೇ ಹೋಗಿರಿ’ ಎಂದು ನಿರಾಕರಿಸಿದರು. ಈ ಸಾಹೇಬನಿಗೆ ತಿಳಿದು ಮುಂಗೈಯನ್ನು ಕಟ್ಟನೆ ಕಡಿದುಕೊಂಡು ಹುಕುಮು ಕೊಟ್ಟ, ಬ್ರಿಟೀಷ್ ಸೈನಿಕರು ಕುದುರೆಯ ಮೇಲೆ ಕುಳಿತು ಹಲಗಲಿಯನ್ನು ಮುತ್ತಿದರು. ಅಷ್ಟರಲ್ಲಿ ಒಳಗಿನ ಹಲಗಲಿಯ ಮಂದಿ ಮುಂಗಾರು ಮಳೆ ಸುರಿದಂತೆ ಹೊಡೆತಗಳನ್ನು ತಿರುಗಿಸಿದರು. ಹೊರಗಿನ ಮಂದಿ ಆ ಗುಂಡಿನ ಹೊಡೆತಗಳನ್ನು ಹತ್ತಿಕ್ಕಲಾರದೆ ಹಿಂದಕ್ಕೆ ತಿರುಗಿದರು. ಆನಂತರ ಇನ್ನಷ್ಟು ಬ್ರಿಟೀಷ್ ಸೈನಿಕರನ್ನು ಹಲಗಲಿಗೆ ಕರೆಸಿದರು. ಮಧ್ಯರಾತ್ರಿಯಲ್ಲಿ ಆ ಪಡೆ ಊರನ್ನು ಮುತ್ತಿತ್ತು. ಗುಂಡುಗಳ ಸುರಿಮಳೆ ಸುರಿಸಿದರು. ಕಕ್ಕಾಬಿಕ್ಕಿಯಾದ ಮಂದಿ ಅಂಜಿ ಪೇರಿಕಿತ್ತಿತ್ತು. ಓಡಿದವರ ಬೆನ್ನುಹತ್ತಿದರು. ಇವರು. ಹೆಣಗಳು ಸೂರೆಯಾಗಿ ಬಿದ್ದವು. ಏನೂ ಉಳಿಯದಂತೆ ಮತ್ತೆಮತ್ತೆ ಕಡಿದರು. ಹೆಬಲಕ್ ಸಾಹೇಬನ ಸವಾರಿ ಊರ ಹೆಬ್ಬಾಗಿಲಿಗೆ ಬಂತು ನಿಂತಿತು. “ಕವಳ ಕೊಡುತ್ತೇವೆ. ವ್ಯರ್ಥವಾಗಿ ಸತ್ತುಹೋಗಬೇಡಿ’ ಎಂದು ಬುದ್ಧಿಯ ಮಾತು ಹೇಳಿದ.
ಸಾಹೇಬನ ಮಾತಿನಲ್ಲಿ ನಂಬಿಕೆ ಸಾಲದ ಹಣ ಮುಂದೆ ಬಂದು ನಿಂತ. ವಿಶ್ವಾಸಘಾತುಕರು ಇವರು, ಹೊಡಿ ಇವರನ್ನು’ ಎಂದು ಜಡಗೆ ಅಬ್ಬರಿಸಿದ. ಮೋಸಮಾಡಿ ನಮ್ಮ ದೇಶವನ್ನು ವಶಪಡಿಸಿಕೊಳ್ಳುತ್ತಾರೆಂದು ಮತ್ತೆಮತ್ತೆ ಹೊಡೆದರು. ಒಂದೇ ಗುಂಡಿಗೆ ಸಾಹೇಬ ಉರುಳಿಬಿದ್ದ, ಈ ಸುದ್ದಿ ಕೇಳಿದ ಮತ್ತೊಬ್ಬ ಕಾರ್ ಸಾಹೇಬ ಎಂಬಾತ ಬೆಂಕಿಯ ಚೂರಾದ ಊರನ್ನು ಲೂಟಿ ಮಾಡಲು ಆಜ್ಞೆಯಿತ್ತ. ಅದೇ ಹುರುಪಿನಲ್ಲಿ ಗುಂಡಿನ ಮಳೆ ಸುರಿಯಿತು. ನಾವು ಒಂದಷ್ಟು ಗುಂಡು ಹೊಡೆದು ಕೆಡವೋಣವೆಂದು ಹಣಮ ಸಜ್ಜಾದ ತನ್ನ ಮೇಲೆ ಬರುವ ಮುನ್ನೂರು ಮಂದಿಯನ್ನು ಎದುರಿಸುವಷ್ಟು ಧೈರ್ಯವಂತ ಅವನು. ಭೀಮ ಎಂಬುವನು ದಂಡಿಗೆದುರಾಗಿ ಐನೂರು ಮಂದಿಗೆ ಮುಳುವಾದ. ಬಾಲ ಕಸರತ್ತು ಮಾಡಿ ಹತ್ತು ಕುದುರೆಗಳನ್ನು ಕಡಿದ, ರಾಮನ ಹೋರಾಟವೇನೂ ಕಡಿಮೆಯಾಗಲಿಲ್ಲ. ‘ಕಾವಲಿ ಹರಿತೊ ರಕ್ತಾ’ ಸಾವಿರ ಅಳಿಗೆ ಒಂಟಿಯಾಗಿ ಎದುರಾದವನೂ ‘ಕಡಿಯಿರಿ, ಕಡಿಯಿರಿ’ ಎಂದು ಅಬ್ಬರಿಸಿ ಮುನ್ನುಗ್ಗುತ್ತಿದ್ದ. ಹೀಗೆ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಪ್ರತೀಕವಾಗಿ ಹಲಗಲಿಯ ಈ ನಾಲ್ಕು ಮಂದಿ ವೀರವೇಶದಿಂದ ಹೋರಾಡಿ ಬ್ರಿಟೀಷರಿಗೆ ಸಿಂಹಸ್ವಪ್ನವಾದರೂ ಕೂಡ ಕೊನೆಗೆ ಬ್ರಿಟೀಷರ ಆಧುನಿಕ ಮಾದರಿಯ ಮದ್ದುಗುಂಡುಗಳಿಗೆ ಬಲಿಯಾದರೂ ಜನಕ್ಕೆ ನೆಚ್ಚಿನ ಬಂಟರಾಗಿಯೇ ಇಂದಿಗೂ ಚಿರಸ್ಮರಣೀಯವಾಗಿದ್ದಾರೆ.
ಆ ಭಯಂಕರವಾದ ಹೋರಾಟದಲ್ಲಿ ಹಣಮನಿಗೆ ಆರುಗುಂಡುಗಳು ತಾಕಿದ್ದು, ಅವನು ಕೆಳಗೆ ಬಿದ್ದದ್ದು ಯಾರಿಗೂ ಕೇಳಿಸಲಿಲ್ಲ. ಆಯುಧವನ್ನು ತೆಗೆದುಕೊಳ್ಳಲು ಶೂರನೊಬ್ಬ ಬಹಳ ಜೋರು ಮಾಡಿದ. ಅದರ ನಡವೆ ಈತ ಏರಿಬರುತ್ತಿದ್ದ ಶೂರನ ಕುದುರೆಯ ಕಾಲನ್ನೂ ಕಡಿದ. ಸವಾರ ನೆಲೆಕ್ಕೆ ಬಿದ್ದ. ಹಲಗಲಿಯಲ್ಲಿನ ಹೆಣ್ಣುಮಕ್ಕಳಲ್ಲಿಯೂ ಬ್ರಿಟೀಷರ ವಿರುದ್ಧ ಹೋರಾಡುವ ಕಿಚ್ಚು ಇತ್ತು ಎಂಬುದಕ್ಕೆ ಪ್ರತೀಕವಾಗಿ ರಾಮಿ ಎಂಬ ಮಹಿಳೆ ಇವರ ಅಟ್ಟಹಾಸಕ್ಕೆ ಬೇಸತ್ತು ಮೂರು ಮಂದಿಯ ತಲೆಗೆ ಗುಂಡಿಕ್ಕಿದಳು; ಆರು ಕುದುರೆಗಳನ್ನು ಕಡಿದಳು. ಅನಂತರ ಊರೆಲ್ಲ ಲೂಟಿಯಾಗಿ ಹೋಗಿ ಬಿಕೊ ಎನ್ನುತ್ತಿತ್ತು. ಬ್ರಿಟೀಷರ ಪಡೆ ಮನೆಮನೆಯೊಳಗೆ ಹೊಕ್ಕು ದಾಳಿ ಮಾಡಿದರು. ದನಕರುಗಳು ನಾಶವಾದವು. ಸಣ್ಣಕೂಸುಗಳು ಸತ್ತುಹೋದವು. ಕೊನೆಗೆ ಬೆಂಕಿ ಹಚ್ಚಿ ಊರನ್ನು ಸುಟ್ಟರು. ಆ ಊರಿನ ಮನೆಯಲ್ಲಿದ ಬೆಳ್ಳಿ, ಬಂಗಾರ ಮುಂತಾದ ಅನೇಕ ವಸ್ತುಗಳನ್ನು ಲೂಟಿ ಮಾಡಿದರು. ಹಲಗಲಿಯ ಗುರುತು ಎಳಷ್ಟು ಕಾಣಿಸದಂತೆ ಸುಟ್ಟು ಬೂದಿಯಾಯಿತು. ಇದು ಕೇವಲ ಹಲಗಲಿಯ ಕಥೆಯಲ್ಲ ಇಂತಹ ಅನೇಕ ಕಥೆಗಳು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆದಿವೆ ಅವರ ತ್ಯಾಗ ಮತ್ತು ಬಲಿದಾನಕ್ಕೆ ಸಮನಾದದ್ದು ಯಾವುದೂ ಇಲ್ಲ ಇಂತಹ ಹೋರಾಟಗಳು ಜನರಿಗೆ ತಲುಪಬೇಕು ದೇಶಕ್ಕಾಗಿ ಕೆಲವೇ ಕೆಲವು ಮನೆತನಗಳು ಪ್ರಾಣವನ್ನು ಬಿಟ್ಟಿಲ್ಲ ಎಲೆ ಮರೆಯ ಕಾಯಿಗಳಂತೆ ಅಸಂಖ್ಯಾತ ಜನರ ಬಲಿದಾನವಿದೆ. ಎಂಬುದು ಇತಿಹಾಸ .