ಬಾಗಲಕೋಟೆ: ಜೂನ್ ಆರಂಭವಾಗಿ ಒಂದು ವಾರ ಕಳೆದರು ಜಿಲ್ಲೆಯಲ್ಲಿ ಸೂರ್ಯತಾಪ ಸ್ವಲ್ಪ ಕಡಿಮೆಯಾಗಿಲ್ಲ. ಬೇಸಿಗೆ ದಿನಗಳೇ ಮರೆಯಾಗುತ್ತಿಲ್ಲ ಅಂತ ಪರಿತಪಿಸುತ್ತಿದ್ದಾರೆ. ಕಾರ ಹುಣ್ಣಿಮೆ ಕಳೆದರು ಹನಿ ನೀರು ಆಕಾಶದಿಂದ ಉದುರುತ್ತಿಲ್ಲ. ಇದರಿಂದ ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದ ಅನ್ನದಾತರ ಮೊಗದಲ್ಲಿ ಕಾರ್ಮೋಡ ಆವರಿಸಿದೆ.
ಜಿಲ್ಲಾ ಕೇಂದ್ರ ಸ್ಥಾನ ಸ್ಥಾನ ಬಾಗಲಕೋಟೆ ಸೇರಿದಂತೆ ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಇಳಕಲ್ಲ, ಗುಳೇದಗುಡ್ಡ, ಹುನಗುಂದ, ರಬಕವಿ-ಬನಹಟ್ಟಿ ಭಾಗದಲ್ಲಿ ನಿತ್ಯವು 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಎಲ್ಲ ರೀತಿಯಿಂದ ಭೂ ತಾಯಿಯನ್ನು ಸಿದ್ಧಪಡಿಸಿರುವ ರೈತರು ಮಳೆರಾಯ ಬಾರದ ಹಿನ್ನಲೆಯಲ್ಲಿ ಚಿಂತೆಗೆ ಜಾರಿದ್ದಾರೆ. ಮುಂಗಾರು ಹಂಗಾಮು ಕೈ ಕೊಡುತ್ತಾ ಅಂತ ದಿಕ್ಕ ತೋಚದಂತಾಗಿದ್ದಾರೆ.
ಹೆಸರು ಬಿತ್ತನೆಗೆ ಹಿನ್ನಡೆ:
ಉತ್ತರ ಕರ್ನಾಟಕ ಭಾಗದಲ್ಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ಹೆಸರು ಬಿತ್ತನೆ ಭರಪೂರ ನಡೆಯುತ್ತದೆ. 28 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಜೂನ್ ಸಾಥ್ ವೇಳೆಗೆ ಬಹುತೇಕ ಬಿತ್ತನೆ ಕಾರ್ಯ ಅರ್ಧದಷ್ಟು ಪೂರ್ಣಗೊಳ್ಳುತ್ತದೆ. ಅದರಲ್ಲೂ ಹುನಗುಂದ, ಬಾಗಲಕೋಟೆ, ಬಾದಾಮಿ ತಾಲೂಕಿನಲ್ಲಿ ಹೆಸರು ಬಿತ್ತನೆಗೆ ಮಾಡುವುದು ಅಽಕ. ಕಡಿಮೆ ಖರ್ಚಿನಲ್ಲಿ ಹೆಚ್ಚಿಗೆ ಲಾಭದಾಯಕವಾಗುವ ಹೆಸರು ಬೆಳೆ ಈ ವರ್ಷ ತೀವ್ರ ಹಿನ್ನಡೆಯಾಗಿದೆ. ಮಳೆ ಸಮಯಕ್ಕೆ ಸರಿಯಾಗಿ ಬಾರದ ಹಿನ್ನಲೆಯಲ್ಲಿ ಇಳುವರಿಯಲ್ಲಿ ಕುಂಠಿತವಾಗುವ ಲಕ್ಷಣ ಇದೆ. ಇನ್ನು ಈ ವರ್ಷ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹೆಸರಿನ ಬೆಲೆ 130 ರೂ. ಗಡಿದಾಟಿದೆ. ಅಂತಹದರಲ್ಲಿ ಬಿತ್ತನೆಗೆ ತಡವಾಗುತ್ತಿರುವುದು ಮುಂಬರುವ ದಿನಗಳಲ್ಲಿ ದರ ಹೆಚ್ಚವಾಗುವ ಸಾಧ್ಯತೆ ದಟ್ಟವಾಗಿದೆ.
ವರುಣ ದೇವನ ಕೃಪೆ ಯಾವಾಗ?
ಈ ಸಾರಿ ನಿರೀಕ್ಷೆಯಂತೆ ಪೂರ್ವ ಮುಂಗಾರ ಆಗಿಲ್ಲ. ಅಲ್ಲಲ್ಲಿ ಸ್ಥಳೀಯ ಮಳೆಯಾಗಿದೆ ಹೊರತು ಭೂಮಿ ತಾಪ ತಣಿಸುವಲ್ಲಿ ಯಶಸ್ವಿಯಾಗಿಲ್ಲ. ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರ ಪ್ರವೇಶವಾಗಬೇಕಿತ್ತು. ಆದರೇ ಈ ಸಾರಿ ಆಗಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಭೂಮಿ, ಸಮುದ್ರ ಮೇಲಿನ ತಾಪಮಾನದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಮಳೆಯಾಗುತ್ತಿಲ್ಲ. ಹವಮಾನ ಇಲಾಖೆ ಜೂ.4 ಕ್ಕೆ ಕೇರಳಕ್ಕೆ ಮುಂಗಾರ ಪ್ರವೇಶ ಮಾಡಿ ಉತ್ತರ ಒಳನಾಡು ಜೂ.7 ಅಥವಾ 8 ಕ್ಕೆ ಮುಂಗಾರ ಪ್ರವೇಶ ಆಗಬೇಕಿತ್ತು. ತಡವಾಗಿರುವ ಕಾರಣಕ್ಕೆ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಒಳನಾಡು ಪ್ರದೇಶದಲ್ಲಿ ಮುಂಗಾರು ಪ್ರವೇಶವು ಜೂ.15, 16 ಆಗಲಿದೆ. ವಾಡಿಕೆಯಂತೆ ಭರವಸೆಯ ಮಳೆ ಆಗಲಿದೆ. ಇದರಲ್ಲಿ ಆತಂಕ ಪಡುವ ಅಗತ್ಯವಿಲ್ಲ. ನಿಶ್ಚಿತವಾಗಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರವೀಣ ಗುಳೇದ ತಿಳಿಸಿದರು.
ಹವಮಾನ ಇಲಾಖೆ ನೀಡಿದ ಮಾಹಿತಿ ಅನ್ವಯ ನಾಲ್ಕು, ಐದು ದಿನ ವ್ಯತ್ಯಾಸ ಬಿಟ್ಟರೇ ನಿಶ್ಚಿತವಾಗಿ ಮಳೆಯಾಗಿದೆ. ಈ ವರ್ಷ ದಿರ್ಘಾವಽ ಮಳೆಯನ್ನು ಅಲ್ಲಗಳೆದಿಲ್ಲ. ಈ ಹಿಂದಿನ ವರ್ಷ ದಾಖಲಾತಿ ಇದು ಬಹಿರಂಗವಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ನೋಡಿ..!
ವರ್ಷ-ಮುಂಗಾರು ಆಗಮನ-ಮುನ್ನೂಚನೆ ದಿನಾಂಕ
2018- 29 ಮೇ -29 ಮೇ
2019- 8 ಜೂನ್-6 ಜೂನ್
2020-1 ಜೂನ್-5 ಜೂನ್
2021-3 ಜೂನ್- 31 ಮೇ
2022- 29 ಮೇ -27 ಮೇ
2023-ಜೂನ್ 4 ಅಥವಾ 8
ಸಮುದ್ರ, ಭೂಮಿ ಮೇಲಿನ ತಾಪಮಾನ ವ್ಯತ್ಯಾಸ ಆಗಿದ್ದರಿಂದ ಮುಂಗಾರ ಮಳೆ ಪ್ರವೇಶ ತಡವಾಗಿದೆ. ಕೇರಳಕ್ಕೆ ಜೂ.8 ರ ನಂತರ ಮುಂಗಾರ ಪ್ರವೇಶವಾಗುವ ಸಾಧ್ಯತೆ ಇದೆ. ನಮ್ಮ ಉತ್ತರ ಒಳನಾಡು ಭಾಗದಲ್ಲಿ ಜೂ.15, 16 ವೇಳೆ ಪ್ರವೇಶವಾಗುತ್ತದೆ. ವಾಡಿಕೆಯಂತೆ ಮಳೆಯಾಗುತ್ತದೆ. ದಕ್ಷಿಣ ಭಾರತದಲ್ಲಿ ಮಳೆ ಕೊರತೆಯಾಗುವ ಲಕ್ಷಣ ಇಲ್ಲ. ರೈತರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಹವಾಮಾನ ತಜ್ಞ ಪ್ರವೀಣ ಗುಳೇದ ಹೇಳಿದರು.
ಬಿತ್ತನೆ ಕಾರ್ಯಕ್ಕೆ ಭೂಮಿ ಈಗಾಗಲೇ ಹದಗೊಳಿಸಿದ್ದು, ಮಳೆ ಬಾರದ ಹಿನ್ನಲೆಯಲ್ಲಿ ಚಿಂತೆಯಾಗಿದೆ. ವರುಣ ದೇವ ಕೃಪೆ ತೋರಬೇಕು. ಮಳೆಯಾದ ಕೂಡಲೇ ತೊಗರಿ, ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಮುಂಗಾರಿನ ಬೆಳೆಗಳನ್ನು ಬಿತ್ತನೆಯನ್ನು ಮಾಡಲಾಗುವುದು ಎಂದು ಹುನಗುಂದ ತಾಲೂಕು ರೈತ ರಮೇಶ ಗುಡದಪ್ಪನವರ ಬೇವಿನಮಟ್ಟಿ ಹೇಳಿದರು.