ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರು ಕಲುಷಿತ ಆಹಾರ ಸೇವನೆಯಿಂದ ಜೀವಗಳು ಬಲಿಯಾಗಿವೆ. ಅನೇಕರು ಆನಾರೋಗ್ಯಕ್ಕೆ ತುತ್ತಾಗಿದ್ದರೆ ಇಂತಹ ಪರಿಸ್ಥಿತಿಯಲ್ಲಿ ನಮಗೆ ಆಹಾರ ಸುರಕ್ಷತೆ ಪ್ರಾಮುಖ್ಯತೆ ಅರಿವಾಗುತ್ತದೆ. ದೇಹವನ್ನು ಆರೋಗ್ಯಕರವಾಗಿಡುವಲ್ಲಿ ನಾವು ಸೇವಿಸುವಂತಹ ಆಹಾರದ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿಯು ವಿವಿಧ ರೀತಿಯ ಕೆಮಿಕಲ್ಗಳನ್ನು ಒಳಗೊಂಡಿದೆ. ಇದರಿಂದಾಗಿ ಮಾರಣಾಂತಿಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ಜನರಿಗೆ ಕಲುಷಿತ ಆಹಾರ ಮತ್ತು ನೀರಿನ ಸೇವನೆಯ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಾದ್ಯಂತ 10 ಜನರಲ್ಲಿ ಒಬ್ಬರು ಪ್ರತಿವರ್ಷ ಕಲುಷಿತ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ತಿಳಿಸುತ್ತದೆ. ಇದರಲ್ಲಿ ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಮತ್ತು ಬಡ ಕುಟುಂಬ ಜನರೇ ಹೆಚ್ಚು. ಹೀಗಾಗಿ ಅಸುರಕ್ಷಿತ ಆಹಾರವು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದೆಲ್ಲವನ್ನು ತಡೆಯುವುದೇ ವಿಶ್ವ ಆಹಾರ ಸುರಕ್ಷತಾ ದಿನದ ಮುಖ್ಯ ಉದ್ದೇಶ.
ವಿಶ್ವ ಆಹಾರ ಸುರಕ್ಷತಾ ದಿನದ ಧ್ಯೇಯವಾಕ್ಯ:
ಈ ವರ್ಷದ ಥೀಮ್ “ಆಹಾರ ಮಾನದಂಡಗಳಿಂದ ಜೀವಗಳನ್ನು ಉಳಿಸಿ”. ಮಾನದಂಡಗಳು ರೈತರಿಗೆ ಮತ್ತು ಸಂಸ್ಕರಣೆದಾರರಿಗೆ ಆಹಾರದ ಆರೋಗ್ಯಕರ ನಿರ್ವಹಣೆಯ ಬಗ್ಗೆ ಮಾರ್ಗದರ್ಶನವನ್ನು ಒದಗಿಸುವುದಲ್ಲದೆ. ಸರ್ಕಾರಗಳು ಮತ್ತು ಸಂಸ್ಥೆಗಳು ಅಂತಹ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿವೆ.
ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ:
ವಿಶ್ವ ಸಂಸ್ಥೆಯ ಜನರಲ್ ಅಸ್ಸೆಂಬ್ಲಿಯಲ್ಲಿ 2018 ಜೂನ್ 7 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ತದನಂತರ ಜನರಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮತ್ತು ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸುತ್ತ ಬಂದಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ :
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011ರ ಆಗಸ್ಟ್ 5ರಿಂದ ಜಾರಿಗೆ ಬಂದಿದೆ. ಇದರ ಅನುಸಾರ ಮಾರಾಟಗಾರರು ಈ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಆಹಾರ ತಯಾರಿಕೆ, ಸಂಗ್ರಹ, ವಿತರಣೆ, ಸಗಟು, ಚಿಲ್ಲರೆ ಮಾರಾಟ ಹಾಗೂ ಆಮದು ಸೇರಿ ವಿವಿಧ ಹಂತಗಳಲ್ಲಿ ವೈಜ್ಞಾನಿಕ ಗುಣಮಟ್ಟ ನಿಗದಿಪಡಿಸಿ, ಉತ್ತಮ ಆಹಾರ ದೊರೆಯುವಂತೆ ಮಾಡಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡುವುದರ ಜತೆಗೆ ಆಹಾರ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು. ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಬೇಕು. ರಾಸಾಯನಿಕ, ಕಲಬೆರಕೆ ಮುಕ್ತವಾಗಿರುವಂತೆ ಎಚ್ಚರ ವಹಿಸಬೇಕು. ಅಹಾರ ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಬೇಕು.
ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ಹಿಂದೆಂದಿಗಿಂತಲೂ ಇಂದು ಮನುಜ ಸಾಧನೆಯ ದೊಡ್ಡ ಮೆಟ್ಟಿಲುಗಳನ್ನೇ ಏರುತ್ತಿದ್ದಾನೆ. ಇವೆಲ್ಲ ಅಂಶಗಳು ನಡುವೆ ಮಾಲಿನ್ಯ, ಕಲುಷಿತಗೊಳ್ಳುತ್ತಿರುವ ಜಲ ಹಾಗೂ ಆಹಾರಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದರ ಪರಿಣಾಮ ಉಸಿರಾಡಲು ಶುದ್ಧ ಗಾಳಿ ಇಲ್ಲ ಸೇವಿಸಲು ಪರಿಶುದ್ದ ಆಹಾರ ದೊರೆಯುತ್ತಿಲ್ಲ ಎಲ್ಲವೂ ಕಲುಷಿತ ಕಲಬೆರೆಕೆಯಿಂದ ಕೂಡಿದೆ. ಕಲುಷಿತಗೊಂಡ ಆಹಾರ ಸೇವನೆ ಮನುಷ್ಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀವನ ಪೂರ್ತಿ ಪರಿತಪಿಸ ಬೇಕಾಗುವುದು. ಹಾಗಾಗಿ ನಾವು ಸೇವಿಸುವ ಆಹಾರ ವಿಷ, ಕಲ್ಮಶ, ರಾಸಾಯನಿಕ ಪದಾರ್ಥಗಳಿಂದ ಮುಕ್ತವಾಗಿರುವುವಂತೆ ನೋಡಿಕೊಳ್ಳಬೇಕು. ಜೊತೆಗೆ ಆಹಾರ ಸುರಕ್ಷತೆಯ ಬಗ್ಗೆ ಆದಷ್ಟು ಗಮನ ಕೊಡುವುದು ಕೂಡಾ ನಮ್ಮೆಲ್ಲರ ಕರ್ತವ್ಯವಾಗಿದೆ.