ಬೆಂಗಳೂರು : ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಉಚಿತ ವಿದ್ಯುತ್ ‘ಗೃಹಜ್ಯೋತಿ’ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆ ಉಚಿತ ವಿದ್ಯುತ್ ಯೋಜನೆಯ ಸಾಧಕ ಬಾಧಕಗಳ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಇಂದು ಬೆಸ್ಕಾಂ ಅಧಿಕಾರಿಗಳ ಜೊತೆ ಕೆ ಆರ್ ಸರ್ಕಲ್ ನಲ್ಲಿರುವ ಬೆಳಕು ಭವನದ ಕಟ್ಟಡದಲ್ಲಿ ಸಭೆ ಕೈಗೊಂಡಿದ್ದರು.
ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಸಚಿವರು, “ಗೃಹ ಜ್ಯೋತಿ ಯೋಜನೆ ಅನೌನ್ಸ್ ಮಾಡಿದ್ದೇವೆ. ಅಗಸ್ಟ್ ನಿಂದ ಈ ಯೋಜನೆಯ ಲಾಭ ಸಿಗಲಿದೆ. 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಕೆಯಾದರೆ ಸಂಪೂರ್ಣ ಬಿಲ್ ಕಟ್ಟಬೇಕು. ಇನ್ನು ಬಾಡಿಗೆದಾರರು ಉಚಿತ ವಿದ್ಯುತ್ ಪಡೆಯಲು ಇನ್ನೆರಡು ದಿನಗಳಲ್ಲಿ ಗೈಡ್ ಲೈನ್ಸ್ ಜಾರಿಯಾಗಲಿದೆ. ಬಾಡಿಗೆದಾರರೂ ಕೂಡ ಉಚಿತ ವಿದ್ಯುತ್ ಪಡೆಯಲು ರಿಜಿಸ್ಟರ್ ಮಾಡಬಹುದು. ರೆಂಟಲ್ ಎಗ್ರಿಮೆಂಟ್, ವೋಟರ್ ಐಡಿ ಅಥವಾ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ನೀಡಬಲ್ಲ ದಾಖಲೆ ಬೇಕು. ಬೋಗಸ್ ರೆಂಟಲ್ ಅಗ್ರಿಮೆಂಟ್ ಮಾಡಿ ಅರ್ಜಿ ಹಾಕಿ ಸಾಬೀತಾದರೆ ಉಚಿತ ವಿದ್ಯುತ್ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆ ಷರತ್ತು : ಈ ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ.
ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ, ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ನಮೂದಿಸಲಾಗುತ್ತದೆ. 200 ಯೂನಿಟ್ ಬಳಕೆ ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕು.ಮತ್ತು ಜಾರಿಯಲ್ಲಿರುವ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳೂ ಈ ಯೋಜನೆಯಲ್ಲಿ ಸೇರಬಹುದು.
2023ರ ಜೂನ್ 20ರ ಅಂತ್ಯಕ್ಕೆ (ಜೂನ್ ತಿಂಗಳಲ್ಲಿ ಬಳಸಿದ ವಿದ್ಯುತ್ ಗೆ ಜುಲೈನಲ್ಲಿ ನೀಡುವ ವಿದ್ಯುತ್ ಬಿಲ್ ಸೇರಿದಂತೆ) ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. .
ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮೀಟರ್ ಇದ್ದಲ್ಲಿ ಒಂದು ಮೀಟರ್ಗೆ ಮಾತ್ರ ಈ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.