ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಈ ಹೆಸರನ್ನು ಕೇಳದವರು ಸಾರಸ್ವತಲೋಕದಲ್ಲಿ ಯಾರು ಇಲ್ಲ. ಜೀವನವು ಎಂತಹ ತಿರುವು ಪಡೆದುಕೊಳ್ಳುತ್ತದೆ. ಆದರೂ ಅಷ್ಟೇ ನಿರ್ಲಿಪ್ತತೆಯಿಂದ ಮತ್ತು ನೋವಿನಲ್ಲೂ ನಲಿವನ್ನು ಯಾವ ರೀತಿಯಲ್ಲಿ ಪಡಬಹುದು ಎಂಬುದು ಇವರ ಜೀವನವನ್ನು ನೋಡಿದರೆ ಅರ್ಥವಾಗುತ್ತದೆ. ಬೇಂದ್ರೆಯವರು ಎಂದಿಗೂ ತಮ್ಮ ಜೀವನ ಚರಿತ್ರೆಯನ್ನು ಬರೆದಿಲ್ಲ. ತಮ್ಮ ಜೀವನದ ಆಗೂ- ಹೋಗುಗಳನ್ನು ತಮ್ಮ ಕವನದ ಮುಖಾಂತರವೇ ಜನರಿಗೆ ತಿಳಿಸಿದ್ದಾರೆ. ಅವರ ಕಾವ್ಯಗಳನ್ನು ತಿಳಿಸುವ ಸರಣಿಯೇ ಈ ಬೇಂದ್ರೆ ಕಾವ್ಯ ಸಂಪುಟ.
ಬೇಂದ್ರೆ ಅಜ್ಜ ಬರೆದ ಸಖೀಗೀತ ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಇದರಲ್ಲಿ ನಲವತ್ತು ಭಾಗಗಳಿವೆ. ಒಂದೊಂದು ಭಾಗದಲ್ಲೂ ಆರು ನುಡಿಗಳಿವೆ. ಗಂಭೀರವಾದ ಕಾವ್ಯಾಸಕ್ತರಿಗೆ ಇದು ತುಂಬ ಇಷ್ಟವಾಗುವ ಕಾವ್ಯಗಳಲ್ಲಿ ಪ್ರಮುಖವಾದದ್ದು. ಇಲ್ಲಿ ಮೊದಲನೆಯ ಭಾಗ ಕುರಿತ ವ್ಯಾಖ್ಯಾನ ಇದೆ.
1936
ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ
ಸಖಿಯನ್ನು ಉದ್ದೇಶಿಸಿ ಹೇಳುವ ಮಾತು. ತಾನು ಹೇಳುತ್ತಿರುವ, ಹೇಳಲಿರುವ ಮಾತುಗಳಿಗೆ ಅನುಮತಿ ಕೋರುವ ದನಿಯೂ ಇದೆ. ಕವಿಯ ಸಖಿಯ ಗೆಳೆತನವಿದೆಯಲ್ಲ ಅದು ಕೇವಲ ಸಿಹಿಯಾದದ್ದೂ ಅಲ್ಲ, ಕಟುವಾದದ್ದೂ ಅಲ್ಲ. ಕಟು-ಮಧುರ ಎರಡೂ ರುಚಿ ಬೇರ್ಪಡದಂತೆ ಬೆರೆತು ಬೇರೆಯದೇ ರುಚಿ ಆಗಿರುವಂಥದ್ದು. ಆ ಸಖ್ಯವನ್ನು ಕುರಿತು ಹೇಳಿಕೊಳ್ಳುವುದೆಂದರೆ ಸಖ್ಯಕ್ಕೆ ಅರ್ಥವನ್ನು ನೀಡುವ ಕೆಲಸ, ವ್ಯಾಖ್ಯಾನವನ್ನು ರೂಪಿಸುವ, ವಿವರಿಸುವ ಕೆಲಸ. ಹೇಳಿಕೊಳ್ಳುತ್ತಿರುವುದು ಸಖಿಗೇ ಆದರೂ, ಆಕೆಯೂ ಸಖ್ಯದ ಒಂದಂಶವೇ ಆದರೂ ನಾನು ವ್ಯಾಖ್ಯಾನಿಸಿ ವಿವರಿಸಿಕೊಂಡಂತೆ ಆಕೆ ಮಾಡಿಕೊಂಡಿರಲಾರಳೋ ಏನೋ. ನಾನು ಕಂಡದ್ದು ಹೀಗೆ, ನಾನು ಅರ್ಥಮಾಡಿಕೊಂಡದ್ದು ಹೀಗೆ. ಅವಳ ವ್ಯಾಖ್ಯಾನ ಬೇರೆಯೇ ಇದ್ದೀತು. ಸಖಿ ಈಗ ನನ್ನ ಕತೆಯ ಕೇಳುಗಳು. ಅಥವಾ ಹೀಗೆ ವ್ಯಾಖ್ಯಾನ ಮಾಡಿ ಬರೆದುಕೊಳ್ಳುವುದೆಂದರೆ ಅದನ್ನು ಬೇರೆಯವರೂ ಓದಿಯಾರಲ್ಲ. ನಮ್ಮ ಕತೆಯನ್ನು ಲೋಕಕ್ಕೆ ಹೇಳಲು ನನ್ನ ಇನ್ನೊಂದು ಭಾಗವಾಗಿರುವ ಸಖಿಯ ಅನುಮತಿಯೂ ಬೇಕು. ಅಥವಾ ಇವೆರಡೂ ಕಾರಣವಲ್ಲ. ಸಖ್ಯದ ಆಖ್ಯಾನವನ್ನು ನಿರೂಪಿಸುತ್ತಿರುವುದು ನಮ್ಮಿಬ್ಬರ ಕರುಳಿನ ತೊಡಕನ್ನು (ತೊಡಕು ಎಂದರೆ ತೊಡಗಿಕೊಳ್ಳುವ ಸಂಬಂಧ, ಮತ್ತು ಸಮಸ್ಯೆಯಾಗುವಂಥ ಬಂಧನ ಎರಡೂ ಆದೀತು) ಕುಸುರಾಗಿ, ಕೌಶಲಪೂರ್ಣವಾಗಿ ಬಿಡಿಸಿದುವುದು ನನಗೇ ತೊಡುಗೆ ಮಾಡಿಕೊಳ್ಳುವುದಕ್ಕೆ. ನಾನು ಹೇಳುವ, ಹೇಳಿಕೊಳ್ಳುವ ಕತೆಯ ಮೂಲಕ ನಾನೇ ನನ್ನನ್ನು ರೂಪಿಸಿಕೊಳ್ಳುತ್ತೇನೆ ಅನ್ನುವ ಭಾವವೂ ಇದೆ.
ಮುಂದುವರೆಯುತ್ತದೆ…..