ಎಲ್ಲರೂ ಡೈನಿಂಗ್ ಹಾಲ್ ನಲ್ಲಿ ಐದೂ ನಲವತ್ತೈದಕ್ಕೆ ಸೇರಿದರು. ಎಲ್ಲರಿಗೂ ಚಹಾ ಮತ್ತು ಬಟಾಟೋಪೋವು (ಅವಲಕ್ಕಿ,ಆಲೂಗೆಡ್ಡೆ ಒಗ್ಗರಣೆ) ಸಿದ್ಧವಾಗಿತ್ತು. ನಮ್ಮಯಾತ್ರಾ ಸೂಚಿಯಲ್ಲಿ “ಆನಂದ ಭವನ” ಎಂದು ಇತ್ತು. ಆದರೆ ಅಲ್ಲಿ ವಾರದ ರಜಾದಿನ ಸೋಮವಾರ ಆದುದರಿಂದ ಹೋಗುವುದನ್ನು cancel ಮಾಡಲಾಗಿತ್ತು. ಆ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು..ಅಥವಾ ಆಸಕ್ತಿ ಇದ್ದವರು ಹೊರಗೆ ಸುತ್ತಾಡಲು ಹೋಗಬಹುದೆಂದು ನಮ್ಮ ಮಾರ್ಗದರ್ಶಿಗಳು ಫರ್ಮಾನು ಹೊರಡಿಸಿದರು.
ಇಷ್ಟು ದೂರ ಬಂದದ್ದು ವಿಶ್ರಾಂತಿ ತೆಗೆದುಕೊಳ್ಳಲಿಕ್ಕಾ..ಎಂದು ನಾವು ಕೆಲವರು ಸುತ್ತಾಡಲು ಹೊರಟೆವು. ಹೋಟೆಲ್ ನಿಂದ ಕೇವಲ ಒಂದುವರೆ ಕಿಮೀ ದೂರದಲ್ಲಿ ಒಂದು ದೊಡ್ಡ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಹತ್ತಿರದಲ್ಲೇ ಫ್ರೀಡಂ ಪಾರ್ಕ್..ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ಸ್ಥಳಗಳಿದ್ದವು. ನಾವಿಬ್ಬರೂ ಆಂಜನೇಯನನ್ನು ನೋಡಲು ಹೊರಟೆವು. ಹೋಟೆಲ್ ನಿಂದ ಹತ್ತು ಹೆಜ್ಜೆ ನಡೆದರೆ ಮುಖ್ಯ ರಸ್ತೆ ಸಿಕ್ಕುತ್ತದೆ. ಅಲ್ಲಿ ಸಾಲು ಸಾಲಾಗಿ ರಿಕ್ಷಾ ಮತ್ತು ಸೈಕಲ್ ರಿಕ್ಷಾಗಳು ನಿಂತಿದ್ದವು. ಅಜ್ಜ ರಿಕ್ಷಾದಲ್ಲಿ ಹೋಗುವನಾ..ಸೈಕಲ್ ರಿಕ್ಷಾದಲ್ಲಿಯಾ ಎಂದು ಕೇಳಿದರು. ಈ ತರಹ ಆಯ್ಕೆ ಮಾಡುವ ಅವಕಾಶ ಇದ್ದರೆ ಯಾವಾಗಲೂ
ನಾನು” ಸೈಕಲ್ ರಿಕ್ಷಾ” ಎಂದು ಬಿಡ್ತೇನೆ…!!! ಜಟಕಾ ಇದ್ದರೆ ಅದನ್ನೇ ಆಯ್ಕೆ ಮಾಡುತ್ತೇನೆ…😀😀ಯಾಕೆ ಗೊತ್ತಾ…?
ಒಂದು ನಮ್ಮ ಊರುಗಳಲ್ಲಿ ಸೈಕಲ್ ರಿಕ್ಷಾ ಇಲ್ಲ.ಎರಡನೇದು ಇಲ್ಲಿಯ ರಿಕ್ಷಾಗಳಿಗೆ ಧಡಧಡ,ಗುಡುಗುಡು ಶಬ್ದ ಕಿರಿಕಿರಿಯಾಗುತ್ತದೆ. ಮೂರನೇಯದ್ದು ಸೈಕಲ್ ರಿಕ್ಷಾದವರ ಮೇಲಿನ ಕನಿಕರ, ನಾಲ್ಕನೇಯದ್ದು ಎರಡೂ ಬದಿಯ ದೃಶ್ಯಗಳನ್ನು ನಿಧಾನವಾಗಿ ನೋಡ್ತಾ ಹೋಗಬಹುದು. ಐದನೇಯದ್ದು ಹೇಳಲು ನಾಚಿಗೆಯಾಗುತ್ತದೆ…!! ಆದರೂ ನಿನಗೆ ಮಾತ್ರ ಹೇಳುತ್ತೇನೆ..ನೀನು ನನ್ನ ಗುಡಿಯಾ ರಾಣಿ ಅಲ್ಲವಾ…? ಹಿಂದಿನ ಕಾಲದಲ್ಲಿ ರಾಣಿ ಮಹಾರಾಣಿಯರು ಹೀಗೇ ರಥದಲ್ಲಿ ಕುಳಿತು…ಇಕ್ಕೆಲಗಳನ್ನು ನೋಡುತ್ತಾ ಹೋಗುತ್ತಿದ್ದರೆಂದು ಓದಿದ್ದೆ.ಇಲ್ಲಿ ಇದೇ ನನ್ನ ರಥ..ನಾನೇ ಮಹಾರಾಣಿ ಎನ್ನುವ ಅನಿಸಿಕೆಯಿಂದ ನನ್ನೊಳಗೇ ಅನುಭವಿಸುವ ಖುಷಿ….😀😀😀
ಆಂಜನೇಯ ದೇವಸ್ಥಾನ ಎಂದು ಹೆಸರಿದ್ದರೂ ಅಲ್ಲಿ ಶಿವನ ಸಂಸಾರ-ಪರಿವಾರ, ವಿಷ್ಣುವಿನ ಸಂಸಾರ-ಪರಿವಾರ,ಬ್ರಹ್ಮನ ರಾಣಿ,ಶಕ್ತಿ ಪೀಠಗಳ ಪ್ರತಿಕೃತಿ… ಹೀಗೆ ಎಲ್ಲಾ ದೇವರುಗಳು ಒಂದು ದೊಡ್ಡ ಹಾಲ್ ನಲ್ಲಿ ವಿರಾಜಮಾನರಾಗಿದ್ದರು. ಅವರವರ ಇಷ್ಟ ದೇವರಿಗೆ ಪೂಜೆ,ನೈವೇದ್ಯ ಮಾಡಿ ಭಕ್ತರು ಹೋಗುತ್ತಿದ್ದರು. ನಡುವಿನಲ್ಲಿ ಹನುಮಂತನ ದೊಡ್ಡ ವಿಗ್ರಹವಿದ್ದು ದೊಡ್ಡ ದೇವಸ್ಥಾನ ಇತ್ತು. ಅಲ್ಲಿಂದ ಪುನಃ ಸೈಕಲ್ ರಿಕ್ಷಾದಲ್ಲಿಯೇ…ಸಾರಥಿಯ ಕಷ್ಟ ಸುಖ ವಿಚಾರಿಸುತ್ತಾ ಹೋಟೆಲ್ ಗೆ ಹಿಂದಿರುಗಿದೆವು. ಫ್ರೀ ಡಮ್ ಪಾರ್ಕಿಗೆ ಹೋಗಲು ತುಂಬಾ ಕತ್ತಲಾಗಿತ್ತು. ಶಿನ್ನು ಮಾಮಾ ಮತ್ತು ಅವರ ಕುಟುಂಬದವರು ಅಲ್ಲಿಗೆ ಹೋದರೂ ಕತ್ತಲೆಯಾದುದರಿಂದ ಏನೂ ನೋಡಲಾಗಲಿಲ್ಲವಂತೆ..
ಆದರೂ ಚಂದ್ರ ಶೇಖರ್ ಅಜಾದರಿಗೆ ಗುಂಡು ಹೊಡೆಯುವಾಗ ಅವರ ಹಿಂದೆ ಇದ್ದ ಒಂದು ಮರಕ್ಕೂ ಮೂರು ಗುಂಡು ತಗುಲಿದ್ದು ಅದನ್ನು ಸ್ಮಾರಕವಾಗಿ ರಕ್ಷಿಸಿದ್ದಾರೆ.ಅವರು ಕೆಲವು ಫೋಟೋ ತೆಗೆದು ತಂದಿದ್ದರು.
ಅಲಹಾಬಾದ್ ಲ್ಲಿ ಹತ್ತಿಯ ಗಿರಣಿಗಳಿದ್ದು ಹತ್ತಿ ಬಟ್ಟೆ ಗಳು ಅಗ್ಗವಾಗಿ ಸಿಕ್ಕುತ್ತವೆ ಎಂದು ನಮ್ಮ ಜೊತೆ ಬಂದ ಬಜಗೋಳಿ ಕಡಾರಿಯ ರೇಣುಕಾ ಹೋಟೆಲ್ ನವರು ಬಟ್ಟೆ ವ್ಯಾಪಾರಕ್ಕೆ ಹೋದರು. ಸೋಮವಾರ ವಾರದ ರಜೆಯಾದುದರಿಂದ ನಿರಾಶರಾಗಿ ಹಿಂದಿರುಗಿದರು. ಉಳಿದವರು ಹೋಟೆಲ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಎಂಟು ಗಂಟೆಗೆ ಊಟದ ಕೋಣೆಯಲ್ಲಿರಬೇಕೆಂದು ಹೇಳಿದ್ದರಿಂದ ಎಲ್ಲರೂ ಅಲ್ಲಿ ಸೇರಿ ಊಟದ ಬಳಿಕ ಮಲಗಲು ಒಂಬತ್ತು ಗಂಟೆಗೆ ರೂಮಿಗೆ ಬಂದೆವು..
ಗುಡ್ ನೈಟ್..ಬಂಗಾರಿ..ಶುಭರಾತ್ರಿ.. ಸವಿಗನಸುಗಳು ಚಿನ್ನು.