ಮಂಗಳೂರು ಮಹಾನಗರ ಪಾಲಿಕೆಯು ನನ್ನಲೈಫ್ ನನ್ನ ಸ್ವಚ್ಚನಗರ ಅಭಿಯಾನದಡಿ ಮರುಬಳಕೆಯಾಗುವ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಣೆ ಮಾಡುವ ಯೋಜನೆಯನ್ನು ಮೇ 20ರಿಂದ ಜೂನ್ 5 ರವರೆಗೆ ಹಮ್ಮಿಕೊಂಡಿದೆ.
ಹಳೆಯ ಬಟ್ಟೆ, ಚಪ್ಪಲಿ, ದಿನಪತ್ರಿಕೆ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಹಳೆಯ ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳು ಸಹಿತ ನಾನಾ ವಸ್ತುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶದಿಂದ ಮಹಾ ನಗರ ಪಾಲಿಕೆ ಆರ್ಆರ್ಆರ್ (ರೆಡ್ಯೂಸ್ ರಿಯೂಸ್ ರಿಸೈಕಲ್) ಕೇಂದ್ರಗಳನ್ನು ತೆರೆದಿದೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು ಈಗಾಗಲೇ ಮರುಬಳಕೆಗೆ ಸಂಬಂಧಿಸಿದ ವಸ್ತುಗಳನ್ನು ತಂದು ಕೊಡುತ್ತಿದ್ದಾರೆ. ಕೇವಲ 9 ದಿನಗಳಲ್ಲಿ 1662 ಕೆ ಜಿ ಯಷ್ಟು ವಸ್ತುಗಳು ಸಂಗ್ರಹವಾಗಿದೆ.
ಮರುಬಳಕೆಯ ವಸ್ತುಗಳನ್ನು ಆರ್ಆರ್ಆರ್ ಕೇಂದ್ರಕ್ಕೆ ತಂದರೆ ಅಧಿಕಾರಿಗಳು ನಿಮ್ಮ ಸ್ವತ್ತುಗಳಿಗೆ ಸಮನಾದ ಮೌಲ್ಯದ ಕಾಂಪೋಸ್ಟ್ ಗೊಬ್ಬರ, ಸೀಡ್ ಪೆನ್ಸಿಲ್ ಸೇರಿದಂತೆ ಇತರ ಸೊತ್ತುಗಳನ್ನು ನೀಡುತ್ತಾರೆ. ಜೂನ್ 5 ರವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೇಂದ್ರ ತೆರೆದಿರಲಿದೆ.
ಎಲ್ಲೆಲ್ಲಿವೆ ಕೇಂದ್ರಗಳು:
ನಿರುಪಯುಕ್ತ ವಸ್ತುಗಳನ್ನು ಮಂಗಳೂರು ಮಹಾನಗರ ಪಾಲಿಕೆಯು ಸಂಗ್ರಹಕ್ಕಾಗಿ ತೆರೆದಿರುವ ಸುರತ್ಕಲ್ ವಲಯ ಕಚೇರಿ, ಲಾಲ್ ಭಾಗ್ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಮಂಗಳೂರು ಮಹಾನಗರ ಪಾಲಿಕೆಯ ಮಣ್ಣಗುಡ್ಡ ಹಾಗೂ ವೆಲೆನ್ಸಿಯಾ ವಾರ್ಡ್ ಕಚೇರಿ, ಕಾವೂರು ಮಾರುಕಟ್ಟೆ, ಹಂಪನಕಟ್ಟೆಯ ಕುದ್ಮಲ್ ರಂಗರಾವ್ ಪುರಭವನ ಹಾಗೂ ಸುರತ್ಕಲ್ನ ಮಾಧವನಗರ, ಬಜಾಲ್ ಹಾಗೂ ಕಾವೂರಿನ ಒಣ ತ್ಯಾಜ್ಯ ಸಂಗ್ರಹ ಕೇಂದ್ರ, ತಣ್ಣೀರುಬಾವಿ ಬೀಚ್ನಲ್ಲಿ ಆರ್ಆರ್ಆರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ