ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ದುರಂತದಲ್ಲಿ ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನ 110 ನಿವಾಸಿಗಳು ಜೈನ ತೀರ್ಥ ಕ್ಷೇತ್ರವಾದ ಜಾರ್ಖಂಡ್ನ ಸಮ್ಮೇದ ಶಿಖರ್ಜಿಗೆ ಯಶವಂತಪುರ-ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಹೌರಾ ಎಕ್ಸಪ್ರೆಸ್ನಲ್ಲಿ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ನಿನ್ನೆ ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್ ಬದಲಿಸಿದೆ. ಇದರಿಂದ ಆ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಬಾಲಸೋರ್ನಲ್ಲಿ ಸರಣಿ ಅಪಘಾತದ ವೇಳೆ, ಯಶವಂತಪುರ-ಹೌರಾ ರೈಲಿನ ಕೊನೇಯ ಮೂರು ಬೋಗಿಗಳಿಗೂ ಮತ್ತೊಂದು ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ, ಈ ಬೋಗಿಗಳು ಕಳಚಿ ಸುಮಾರು ಒಂದುವರೆ ಕಿ.ಮೀ ದೂರಕ್ಕೆ ಉಳಿದಿದೆ. ಈ ಬೋಗಿಗಳಿದ್ದ ಪ್ರಯಾಣಿಕರಲ್ಲಿ ಹಲವರು ಗಾಯಗೊಂಡಿದ್ದಾರೆ, ಕೆಲವರು ಮೃತಪಟ್ಟಿದ್ದಾರೆ. ಈ 110 ಜನ ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು 8.40 ರ ವೇಳೆಗೆ, ರೈಲಿನಲ್ಲಿ ಬ್ರೇಕ್ ಹಾಕಿದರು. ಇದು ಸಾಮಾನ್ಯ ಬ್ರೇಕ್ ರೀತಿಯೇ ಇತ್ತು. ಆದರೆ ಹಿಂಬದಿಯಲ್ಲಿ ಅಪಘಾತ ಜೋರಾಗಿಯೇ ನಡೆದಿತ್ತು. ಕೋಲ್ಕತ್ತಾಗೆ ತಲುಪಲು 3 ಗಂಟೆ ಬಾಕಿ ಇದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ನಿಜವಾಗಿ ಅಪಘಾತಕ್ಕೆ ಒಳಗಾದ ಕೊನೇಯ ಮೂರು ಬೋಗಿಯಲ್ಲಿ ಆರಂಭದಲ್ಲಿ ನಾವೇ ಇದ್ದೆವು. ವಿಶಾಖಪಟ್ಟಣಂ ನಲ್ಲಿ ಎಂಜಿನ್ ಬದಲಾಗಿ, ಹಿಂದೆ ಇದ್ದವರು ಮುಂದೆ ಬಂದೆವು. ಹೀಗಾಗಿ 110 ಜನವೂ ಮುಂದೆ ಬಂದೆವು. ವಿಶಾಖಪಟ್ಟಣದಲ್ಲಿ ರೈಲಿನ ಬೋಗಿ ಬದಲಾಗದೆ ಹೋಗಿದ್ದಲ್ಲಿ, ನಾವೇ ರೈಲಿನ ಹಿಂಬದಿಯ ಬೋಗಿಗಳಲ್ಲಿ ಇರುತ್ತಿದ್ದೆವು. ಮುಂದೆ ಬಂದು ಬಚಾವಾದೆವು. ಎಂದು ರೈಲಿನಲ್ಲಿದ್ದ ಚಿಕ್ಕಮಗಳೂರಿನ ಯಾತ್ರಾರ್ಥಿಯೊಬ್ಬರು ಭೀಕರ ರೈಲು ದುರಂತವನ್ನು ಕಣ್ಣಾರೆ ಕಂಡ ದೃಶ್ಯದ ಬಗ್ಗೆ ವೀಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.
ಇನ್ನು ಬೈಯಪ್ಪನಹಳ್ಳಿ ನಿಲ್ದಾಣದಿಂದ ರೈಲಿನಲ್ಲಿ 1,294 ಪ್ರಯಾಣಿಕರು ತೆರಳಿದ್ದಾರೆ. ಹೌರಾ- ಯಶವಂತಪುರ ಎಕ್ಸ್ಪ್ರೆಸ್ ರೈಲಿನ ರಿಸರ್ವೇಶನ್ ಬೋಗಿಗಳಲಿದ್ದ ಪ್ರಯಾಣಿಕರಿಗೆ ಯಾರಿಗೂ ಗಾಯಗಳಾಗಿಲ್ಲ ಹಾಗೂ ಮೃತಪಟ್ಟಿಲ್ಲ. ಆದರೆ ಜನರಲ್ ಕೋಚ್ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ:
ಬೆಂಗಳೂರು – 080-22356409
ಬಂಗಾರಪೇಟೆ – 08153 255253
ಕುಪ್ಪಂ – 8431403419
ವಿಶ್ವೇಶ್ವರ ಟರ್ಮಿನಲ್ ಬೈಯಪ್ಪನಹಳ್ಳಿ – 09606005129
ಕೆಆರ್ ಪುರಂ – 88612 03980