5-10-2015
ಸೋಮವಾರ
ಪುಟ್ಟಕ್ಕ…ಶುಭಮುಂಜಾವು..😀
ಇವತ್ತು ಸಣ್ಣಕ್ಕೆ ಚಳಿ ಇದ್ದುದರಿಂದ ಒಳ್ಳೆಯ ನಿದ್ದೆ ಬಂತು. ಅಜ್ಜನಿಗೂ ಎಂದಿನಂತೆ ಬೇಗ ಎಚ್ಚರವಾಗಲಿಲ್ಲ. 6-15ಕ್ಕೆ ಎದ್ದೆವು. ರಾತ್ರಿ ಸುಮಾರು ಎರಡು ಗಂಟೆಯ ನಂತರ ಎಷ್ಟು ಹೊತ್ತಿಗೆಂದು ಗೊತ್ತೇ ಆಗಲಿಲ್ಲ.. ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಪ್ರವೇಶಿಸಿದ್ದೆವು.
6-30ಕ್ಕೆ ಯಾವುದೋ ಒಂದು ಸ್ಟೇಷನ್ನಲ್ಲಿ ಸಣ್ಣ,ಸಣ್ಣ ಮಕ್ಕಳು ತುಂಬಾ ಜನ ರೈಲನ್ನು ಹತ್ತಿದರು.ನನಗೆ ಆ ಮಕ್ಕಳನ್ನು ನೋಡಿ ತುಂಬಾ ಖುಷಿಯಾಯಿತು. ಜಡ್ಡು ಕಟ್ಟಿದಂತಾದ ನನ್ನ ನಾಲಿಗೆ , ತುಟಿ, ಗಂಟಲು ಎಲ್ಲವೂ ಅಲುಗಾಡಲು ಪ್ರಾರಂಭ ಮಾಡೇ ಬಿಟ್ಟವು. ಮೊದಲು ಸಣ್ಣವರು ಬಾಯಿ ಬಿಡದಿದ್ದರೂ ದೊಡ್ಡವರು ಮಾತನಾಡಲು ಪ್ರಾರಂಭಿಸಿದೊಡನೆ ಅವೂ ಮಾತನಾಡಿದವು. ತಿಳಿದು ಬಂದದ್ದನ್ನು ಸಂಕ್ಷಿಪ್ತವಾಗಿ ನಿನಗೆ ಬರೆಯುತ್ತಿದ್ದೇನೆ…ಬೆಳಿಗ್ಗೆ 4-30ಕ್ಕೆಅಮ್ಮ ಮಕ್ಕಳು ಎದ್ದು ಹೋಂ ವರ್ಕ್, ತಿಂಡಿ,ಅಡುಗೆ,ಊಟ ಇತ್ಯಾದಿ ಮಾಡಿ ಅವರ ಮನೆಗಳಿಂದ ಸುಮಾರು ನಾಲ್ಕು ಕಿಮೀ ನಡೆದುಕೊಂಡು (ಕೆಲವರು ಇನ್ನೂ ದೂರ)ಬಂದು ಈ ರೈಲನ್ನು ಹತ್ತುತ್ತಾರೆ. ಮನೆಯಿಂದ ತಂದ ತಿಂಡಿಯನ್ನು ರೈಲಿನಲ್ಲಿ ತಿಂದು ಸುಮಾರು ಒಂದು ಗಂಟೆ ಪ್ರಯಾಣದ ನಂತರ ಒಂದು ದೊಡ್ಡ ನಗರದ ನಿಲ್ದಾಣದಲ್ಲಿ (ಕರಾಯಿ ಎಂದಿರಬೇಕು)ಇಳಿದು ಮತ್ತೆ ಹತ್ತು ನಿಮಿಷ ನಡೆದರೆ ಶಾಲೆ ಸಿಕ್ಕುತ್ತದೆ. ಎಂಟು ಗಂಟೆಗೆ ಶಾಲೆ ಪ್ರಾರಂಭ . ಮಧ್ಯಾಹ್ನದ ಊಟ ಮನೆಯಿಂದ ಕಟ್ಟಿಕೊಂಡು ತರುತ್ತಾರೆ. ನರ್ಸರಿಯಿಂದ- ಪೋಸ್ಟ್ ಗ್ರಾಜುವೇಶನ್ ವರೆಗೂ ಇದೇ ಕತೆಯಂತೆ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ.. ಹೈಸ್ಕೂಲ್ ನಂತರವಾದರೂ ಈ ದೀರ್ಘ ಪ್ರಯಾಣದ ವಿದ್ಯಾಭ್ಯಾಸ.. ಇನ್ನೂ ಹಾಲು ಗಲ್ಲದ ಕೂಸುಗಳಿಗೆ ಯಾವ ಜನ್ಮದ ಕರ್ಮ ಅನಿಸಿತು. ಕೇಳಿದೆ… ಅವರ ಉತ್ತರ…ತುಂಬಾ ಸರಳವಾಗಿತ್ತು..”ಇಲ್ಲಿ ಸರಕಾರಿ ಶಾಲೆಗಳೂ ಇವೆ..ಆಂಗ್ಲ ಮಾಧ್ಯಮ ಶಾಲೆಗಳೂ ಇವೆ. ಆದರೆ ಒಳ್ಳೆಯ ಶಾಲೆಗಳಿಲ್ಲ…(!!!!????) ನಮಗೆ ಒಳ್ಳೆಯ ಹೆಸರು ಪಡೆದ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ನಮ್ಮ ಮಕ್ಕಳು ಓದಬೇಕೆನ್ನುವ ಆಸೆ..(ಚಪಲ).” ಹಾಗಾಗಿ ಈ ರೈಲಿನಲ್ಲಿ ಆ ಊರಿನವರೆಗೆ…ಎಲ್ಲಾ ಬೋಗಿಗಳಲ್ಲೂ ತುಂಬಾ ಜನ..ಇಳಿಯುವಾಗ ಸ್ವಲ್ಪ ಗಮನಿಸಿದೆ…ನಾನು ಲೆಕ್ಕ ಮಾಡಿದ್ದೇ 150 ರ ಮೇಲೆ ಇತ್ತು ಮಕ್ಕಳ ಸಂಖ್ಯೆ…
ಮತ್ತೆ ಸಂಜೆ 4-30ಕ್ಕೆ ಶಾಲೆ ಬಿಡ್ತಾರೆ. ಮನೆ ತಲುಪುವಾಗ ಸುಮಾರು 6-00 ರಿಂದ 7-00ಗಂಟೆಯಾಗುತ್ತದೆ. ಅಂದ್ರೆ ಕೆಲವರಿಗೆ ಇತರ ಕ್ಲಾಸ್ ಗಳಿಗೋ ,ಟ್ಯೂಶನ್ ಗೋ ಸೇರಿಸಿರುತ್ತಾರೆ. ಅವರ ಜೊತೆ ತಾಯಂದಿರೂ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತಹ ಉದ್ಯೋಗಗಳಿಗೆ ಸೇರಿರುತ್ತಾರೆ. ಯಾಕೆಂದರೆ ಮಕ್ಕಳನ್ನು ಮಾತ್ರ ಕಳಿಸಲಾಗದ ಅನಿವಾರ್ಯತೆ…ಈ ಮಕ್ಕಳಿಗೆ ಬಾಲ್ಯವೇ ಇಲ್ಲವೇನೋ…?
ನನಗೆ ಹೊಟ್ಟೆಯಲ್ಲಿ ಸಂಕಟ ಆಯಿತು ಆ ಪುಟ್ಟ ಮಕ್ಕಳನ್ನು ನೋಡಿ…
ಪುಟ್ಟಕ್ಕಾ….,ನಿನ್ನ ಮತ್ತು ನಿನ್ನ ಅಮ್ಮನ ನೆನಪು ಬಂತು. ಬರೀ ಐದು ನಿಮಿಷದ ದಾರಿ ನಿನ್ನ ಶಾಲೆಗೆ…ಅದೂ 8-30ಕ್ಜೆ ತಲುಪಿದರೆ ಸಾಕು.ಅಬ್ಬಾ ಅಷ್ಟಕ್ಕೇ ಎಷ್ಟೊಂದು ಗಲಾಟೆ,ಅವಾಂತರಗಳು…ಅಲ್ವಾ…ಚಿನ್ನು…
ನಾನು ಅವರನ್ನೆಲ್ಲಾ ವಿಚಾರಿಸಿದೆ..ನೀವೆಲ್ಲಾ ಇಷ್ಟು ಒದ್ದಾಟ ಮಾಡುವ ಬದಲಿಗೆ ಮನೆಯನ್ನೇ ಶಾಲೆ ಉದ್ಯೋಗ ಇರುವೆಡೆ ಬದಲಾಯಿಸಬಹುದಲ್ಲವೇ …?ಎಂದು ಪ್ರಶ್ನಿಸಲು
ಅವರ ಉತ್ತರದಿಂದ ಗೊತ್ತಾಯಿತು..
ಅವರಿಗೆಲ್ಲರಿಗೂ ಸಾಕಷ್ಟು ಹೊಲ-ಗದ್ದೆ, ದನಕರು, ಕುರಿ ಜಾನುವಾರುಗಳು ಇವೆ. ಹಾಗಾದರೆ ಅದನ್ನೆಲ್ಲಾ ನೋಡಿಕೊಳ್ಳುವವರು ಯಾರು…? ಗಂಡ, ಅತ್ತೆ, ಮಾವ ಇದ್ದಾರಲ್ಲಾ..ಅವರ ಜವಾಬ್ದಾರಿ..!!!!
ಛೇ..!!!? ಯಾಕೆ…
ಹೀಗೆ…
ನಾವು ಏನಾಗುತ್ತಿದ್ದೇವೆ..?
ಏನು ಮಾಡುತ್ತಿದ್ದೇವೆ..?
ಏನು ಸಾಧನೆ ಮಾಡುತ್ತಿದ್ದೇವೆ..?
ಯಾಕೆ…ಯಾಕೆ…?
ಅವರ ಹತ್ತಿರ ಇದ್ದ ಉತ್ತರ ಇಷ್ಟೇ…”ನಮ್ಮ ಇಷ್ಟ …ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೇವೆ.”
ನನಗೆ ಮಾತ್ರ ಇವರ ಉತ್ತರದಿಂದ ತಲೆ ಬಿಸಿಯಾಯ್ತೇ ಹೊರತು ಮತ್ತೇನೂ ಸಿಕ್ಕಲಿಲ್ಲ..
ವೀಣಾ ಶ್ಯಾನಭೋಗ್**
5-10-2015/ಸೋಮವಾರದ
ಪತ್ರ ಮುಂದುವರಿಯುವುದು..