ಹೈನುಗಾರಿಕೆ ಒಂದು ಉಪಕಸುಬಿನಿಂದ ಉದ್ದಿಮೆಯತ್ತ ಸಾಗಿದ್ದು, ಆರ್ಥಿಕತೆಯ ಮೂಲವಾಗಿ ರೂಪುಗೊಂಡಿದೆ. ಆದರೆ ಹೈನುಗಾರಿಕೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಹಸುಗಳಿಗೆ ಉಂಟಾಗುವ ಕೆಚ್ಚಲುಬಾವು ರೋಗವು ಕೂಡ ಒಂದು.
ಕೆಚ್ಚಲು ಬಾವು ಉಂಟಾಗಲು ಕಾರಣ:
*ಕೆಚ್ಚಲಿಂದ ಸಂಪೂರ್ಣವಾಗಿ ಹಾಲು ಹಿಂಡದಿರುವುದು.
*ಸೂಕ್ತವಲ್ಲದ ವಿಧಾನದಲ್ಲಿ ಹಾಲು ಕರೆಯುವುದು
*ಕೆಚ್ಚಲಿನ ತೊಟ್ಟಿನಲ್ಲಿಉಂಟಾಗುವ ಗಾಯದಕಡೆಗೆ ಗಮನ ಹರಿಸದೆ ಇರುವುದು.
*ನಿಯಮಿತವಾಗಿ ಹಸುಗಳನ್ನು ತೊಳೆಯದೆ ಇರುವುದು.
*ಕೊಟ್ಟಿಗೆ ಮತ್ತು ಸುತ್ತಲಿನ ಪರಿಸರವನ್ನು ಶುಚಿಯಾಗಿ ಇಡದಿರುವುದು.
*ಹಾಲು ಕರೆಯಲು ಯಂತ್ರಗಳನ್ನು ಶುಚಿ ಮಾಡದೇ ಇರುವುದು.
*ಅನಾರೋಗ್ಯಾದಿಂದ ಬಳಲುತ್ತಿರುವ ವ್ಯಕ್ತಿಗಳು ಹಾಲು ಕರೆಯುವುದು.
*ಅಶುದ್ಧ ನೀರು ಬಳಸುವುದು.
ಕೆಚ್ಚಲು ಬಾವು ರೋಗದ ಲಕ್ಷಣಗಳು:
*ಕೆಚ್ಚಲು ಬಾವು ರೋಗದಲ್ಲಿ ಕೆಚ್ಚಲು ಬಾತುಕೊಂಡಿರುತ್ತದೆ ಮತ್ತು ಕೆಚ್ಚಲು ಬಿಸಿಯಾಗಿದ್ದು ಹಾಲು ಕೆಟ್ಟಿರುತ್ತದೆ.
*ಹಾಲಿನಲ್ಲಿ ರಕ್ತ, ಸಣ್ಣ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ನೀರಿನಂತೆಯೊ ಅಥವಾ ಮೊಸರಿನಂತೆಯೂ ಇರಬಹುದು.
*ಹಸುವಿಗೆ ನೋವು ಹೆಚ್ಚಾಗಿದ್ದು ನೀರು ಅಹಾರ ಸೇವನೆಯನ್ನು ಮಾಡದೆ ಇರುವುದು.
*ಕೆಚ್ಚಲು ಗಟ್ಟಿಯಾಗಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ.
*ಕೆಲವೊಮ್ಮೆ ಕೆಚ್ಚಲು ಬಾವು ಹೆಚ್ಚಾಗಿ ಕೆಚ್ಚಲು ಕೊಳೆಯಲಾರಂಭಿಸುತ್ತದೆ.
*ನೋವು ಹೆಚ್ಚಾಗಿ ಹಸುವಿಗೆ ಜ್ವರ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಮುಂದುವರೆದರೆ ಕೆಲವೊಮ್ಮೆ ಜಾನುವಾರು ಸಾವಿಗೀಡಾಗಬಹುದು.
ಕೆಚ್ಚಲು ಬಾವು ಬಂದ ಸಮಯದಲ್ಲಿ ಮಾಡಬೇಕಾದ ಚಿಕಿತ್ಸೆ ಕ್ರಮಗಳು:
*ಕೆಚ್ಚಲು ಬಾವು ಬಂದ ಜಾನುವಾರನ್ನು ಉಳಿದ ಜಾನುವಾರುಗಳಿಂದ ಬೇರ್ಪಡಿಸಬೇಕು.
*ಕೆಚ್ಚಲು ಬಾವು ಬಂದ ಕೂಡಲೇ ಪಶುವ್ಯೆದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
*ಮೊದಲು ಚೆನ್ನಾಗಿರುವ ಹಸುವಿನ ಹಾಲನ್ನು ಹಿಂಡಿ ನಂತರ ರೋಗ ಪೀಡಿತ ಜಾನುವಾರಿನ ಹಾಲನ್ನು ಹಿಂಡಬೇಕು.
*ಪಶುವೈದ್ಯರ ಸಲಹೆಯಂತೆ ಚಿಕಿತ್ಸೆ ಮುಗಿಯುವ ವರೆಗೂ ರೋಗ ಪೀಡಿತ ಕೆಚ್ಚಲಿನ ಹಾಲನ್ನು ಸಂಪೂರ್ಣವಾಗಿ ಹಿಂಡಿ ಚೆಲ್ಲಬೇಕು.
*ಕರುಗಳನ್ನು ತಾಯಿ ಹಾಲನ್ನು ಕುಡಿಯಲು ಬಿಡದೇ ಒಂದು ಪಾತ್ರೆಯಲ್ಲಿ ಬೇರೆ ಆಕಳಿನ ಚೆನ್ನಾಗಿರುವ ಹಾಲನ್ನು ಕುಡಿಸಬೇಕು.
ಕೆಚ್ಚಲು ಬಾವು ಬರದಂತೆ ತೆಗೆದುಕೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳು:
*ಆಕಳು ಮತ್ತು ಎಮ್ಮೆಗಳನ್ನು ನಿಯಮಿತವಾಗಿ ತೊಳೆಯಬೇಕು.
* ಕೊಟ್ಟಿಗೆಗಳು ಸ್ವಚ್ಚ, ಸಾಕಷ್ಟು ಬೆಳಕು ಹಾಗೂ ಗಾಳಿಯಿಂದ ಕೂಡಿರಬೇಕು.
*ಹಾಲು ಹಿಂಡುವ ವ್ಯಕ್ತಿಯು ಹಾಲನ್ನು ಹಿಂಡುವ ಮುನ್ನ ಕೈಗಳನ್ನು ಸ್ವಚ್ಚಗೊಳಿಸಬೇಕು.
* ಹಾಲು ಹಿಂಡುವ ಮೊದಲು ಕೆಚ್ಚಲುಗಳನ್ನು ಚೆನ್ನಾಗಿ ತೊಳೆಯಬೇಕು.
*ಹಾಲು ಕರೆಯುವಾಗ ಪೂರ್ಣ ಕೈ ಉಪಯೋಗಿಸಿ ಹಾಲು ಕರೆಯಬೇಕು.
* ಕೆಚ್ಚಲುಗಳ ಮೇಲೆ ಯಾವುದದರೂ ಗಾಯಗಳಿದ್ದರೆ ಅವುಗಳನ್ನು ನಿಲ್ಯಕ್ಷಿಸದೇ ಚಿಕಿತ್ಸೆ ಕೊಡಿಸಬೇಕು.